ಬಾಬ್ರಿ ಮಸೀದಿ ವಿವಾದಕ್ಕೆ ಪರಿಹಾರ ರಾಜೀವ್ ಗಾಂಧಿ ಕೈಯಲ್ಲಿತ್ತು: ಒವೈಸಿ
ಹೈದರಾಬಾದ್, ನವೆಂಬರ್ 05 : ಅಯೋಧ್ಯೆಯಲ್ಲಿ ಈಗ ಬಾಬ್ರಿ ಮಸೀದಿ ವಿವಾದಿತ ತಾಣವಾಗಿದೆ. ಆದರೆ ಅಂದು ಕಾಂಗ್ರೆಸ್ ಸರ್ಕಾರವಿತ್ತು. ಅಂದಿನ ಪ್ರಧಾನಿ ರಾಜೀವ್ ಗಾಂಧಿ ಬಾಬ್ರಿ ಮಸೀದಿಯ ಬೀಗಗಳನ್ನು ಒಡೆಯಲು ಆದೇಶಿಸಿದ್ದರು ಎಂದು ಎಐಎಂಐಎಂ ಮುಖ್ಯಸ್ಥ ಅಸಾದುದ್ದೀನ್ ಒವೈಸಿ ಹೇಳಿದ್ದಾರೆ.
ಆದರೆ ರಾಜೀವ್ ಗಾಂಧಿ ನಿರ್ಧಾರಕ್ಕೂ ಶಾ ಬಾನು ಪ್ರಕರಣಕ್ಕೂ ಸಂಬಂಧವಿರಲಿಲ್ಲ ಎಂದು ಎಐಎಂಐಎಂ ಮುಖ್ಯಸ್ಥ ಅಸಾದುದ್ದೀನ್ ಒವೈಸಿ ಅಭಿಪ್ರಾಯಪಟ್ಟಿದ್ದಾರೆ.
"ಶಾ ಬಾನು ಪ್ರಕರಣದ ತೀರ್ಪಿನ ಬಳಿಕ, 15 ನಿಮಿಷಗಳಲ್ಲೇ ಕಾನೂನನ್ನು ಉಲ್ಲಂಘಿಸಲಾಗಿತ್ತು. ರಾಜೀವ್ ಗಾಂಧಿ ಅಲ್ಲಿಂದಲೇ ತಮ್ಮ ಚುನಾವಣಾ ಪ್ರಚಾರ ಆರಂಭಿಸಿದ್ದರು. ಐದು ನಿಮಿಷಗಳ ವಿಚಾರಣೆಯಲ್ಲಿ 25 ಪುಟಗಳ ತೀರ್ಪು ನೀಡಲಾಗಿತ್ತು. ಆದರೆ ಮಸೀದಿ ಬೀಗ ಒಡೆಸಿದ್ದಕ್ಕೂ, ಶಾ ಬಾನು ಪ್ರಕರಣಕ್ಕೂ ಯಾವುದೇ ಸಂಬಂಧವಿರಲಿಲ್ಲ" ಎಂದು ಒವೈಸಿ ಹೇಳಿದರು.

ಮಾಜಿ ಗೃಹ ಕಾರ್ಯದರ್ಶಿ ಮಾಧವ ಗೋಡಬೊಲೆ ಅವರು ರಾಜೀವ್ ಗಾಂಧಿ ಬಗ್ಗೆ ಹೇಳಿದ್ದೆಲ್ಲವೂ ಸತ್ಯ. ನಮ್ಮ ಮಾಜಿ ಪ್ರಧಾನಿ ರಾಜೀವ್ ಗಾಂಧಿ ಬಗ್ಗೆ ಗೋಡಬೊಲೆ ಹೇಳಿದ್ದು ಐತಿಹಾಸಿಕ ಸತ್ಯ, ಇದನ್ನು ನಿರಾಕರಿಸಲಾಗದು. ರಾಜೀವ್ ಆದೇಶದ ಅನುಸಾರವೇ ಬೀಗಗಳನ್ನು ತೆರೆಯಲಾಗಿತ್ತು, ಆ ಕಾಲದಲ್ಲಿ ಕಾಂಗ್ರೆಸ್ ಸರ್ಕಾರವೇ ಅಧಿಕಾರದಲ್ಲಿತ್ತು" ಎಂದು ಒವೈಸಿ ಸುದ್ದಿಗಾರರಿಗೆ ತಿಳಿಸಿದರು.
"ರಾಜೀವ್ ಗಾಂಧಿ ಅಂದೇ ಸೂಕ್ತ ಕ್ರಮ ಕೈಗೊಂಡಿದ್ದಿದ್ದರೆ ಬಾಬ್ರಿ ಮಸೀದಿ-ರಾಮ ಮಂದಿರ ವಿವಾದಕ್ಕೆ ಪರಿಹಾರ ದೊರೆಯುತ್ತಿತ್ತು. ಆ ಸಂದರ್ಭದಲ್ಲಿ ಎರಡೂ ಬಣಗಳ ಮಧ್ಯೆ ರಾಜಕೀಯ ಬದ್ಧತೆಗಳು ಬೆಳೆದಿರಲಿಲ್ಲ. ವಿವಾದದ ಪರಿಹಾರವೂ ಸ್ವೀಕಾರಾರ್ಹವಾಗುತ್ತಿತ್ತು" ಎಂದು ಗೋಡಬೊಲೆ ಅವರು ಪುಸ್ತಕದಲ್ಲಿ ಬರೆದಿದ್ದರು.
"ಆದರೆ ರಾಜೀವ್ ಗಾಂಧಿಗೆ ಆಸಕ್ತಿ ಇರಲಿಲ್ಲ. ವಾಸ್ತವವಾಗಿ ಅವರು ಬಾಬರಿ ಮಸೀದಿಯ ಬೀಗಗಳನ್ನು ತೆಗೆಸಿದರು ಮತ್ತು 'ಶಿಲಾನ್ಯಾಸ' ನಡೆಯುವುದಕ್ಕೆ ಅವಕಾಶ ಮಾಡಿಕೊಟ್ಟರು. ರಾಜೀವ್ ಗಾಂಧಿಯನ್ನು ಎರಡನೇ ಕರಸೇವಕ ಅಂತ ನಾನು ನನ್ನ ಪುಸ್ತಕದಲ್ಲಿ ಉಲ್ಲೇಖಿಸಿದ್ದೇನೆ. ಮೊದಲ ಕರಸೇವಕ ಎಂದರೆ ಜಿಲ್ಲಾ ಮ್ಯಾಜಿಸ್ಟ್ರೇಟ್" ಎಂದು ಪುಸ್ತಕದಲ್ಲಿ ಮಾಧವ್ ಅವರು ಬರೆದಿದ್ದರು.
ಅಯೋಧ್ಯೆಯಲ್ಲಿರುವ ರಾಮಜನ್ಮ ಭೂಮಿ ಆಸ್ತಿ ಹಕ್ಕು ಪ್ರಕರಣಕ್ಕೆ ಸಂಬಂಧಿಸಿದಂತೆ ಕಳೆದ 40 ದಿನಗಳ ನಡೆದ ಪ್ರತಿದಿನ ವಿಚಾರಣೆ ಅಕ್ಟೋಬರ್ 16ರಂದು ಅಂತ್ಯ ಕಂಡಿದೆ. ನವೆಂಬರ್ 17 ರೊಳಗೆ ತೀರ್ಪು ಹೊರ ಬರಲಿದೆ.
ಮುಖ್ಯ ನ್ಯಾಯಮೂರ್ತಿ ರಂಜನ್ ಗೊಗೊಯ್ ಅವರು ನವೆಂಬರ್ 17ರಂದು ನಿವೃತ್ತಿ ಹೊಂದುತ್ತಿರುವುದರಿಂದ ನ.17ರ ತನಕ ತೀರ್ಪಿಗೆ ಕಾಯಬಹುದಾಗಿದೆ. 2.77 ಎಕರೆ ವಿಸ್ತೀರ್ಣದ ಭೂಮಿಯನ್ನು ಸದ್ಯಕ್ಕೆ ಸುನ್ನಿ ವಕ್ಫ್ ಬೋರ್ಡ್, ನಿರ್ಮೋಹಿ ಅಖಾರ ಹಾಗು ರಾಮ್ ಲಲ್ಲಾ ಸಮಾನಾಗಿ ಹೊಂದಿವೆ. 2010ರ ಅಲಹಾಬಾದ್ ಹೈಕೋರ್ಟ್ ಆದೇಶದ ವಿರುದ್ಧ 14ಕ್ಕೂ ಅಧಿಕ ಮೇಲ್ಮನವಿಯನ್ನು ಸುಪ್ರೀಂಕೋರ್ಟಿನಲ್ಲಿ ಸಲ್ಲಿಸಲಾಗಿತ್ತು. ಈ ಅರ್ಜಿ ವಿಚಾರಣೆ ಅಂತಿಮ ಹಂತ ತಲುಪಿದ್ದು, ತೀರ್ಪು ಹೊರಬೀಳಬೇಕಿದೆ.












Click it and Unblock the Notifications