ರಾಹುಲ್ ಗಾಂಧಿ ದೇಶದ ಅತಿ ದೊಡ್ಡ ಬಫೂನ್: ಕೆಸಿಆರ್
ಹೈದರಾಬಾದ್, ಸೆಪ್ಟೆಂಬರ್ 6: ಕಾಂಗ್ರೆಸ್ ಅಧ್ಯಕ್ಷ ರಾಹುಲ್ ಗಾಂಧಿ ವಿರುದ್ಧ ತೀವ್ರ ಟೀಕಾಪ್ರಹಾರ ನಡೆಸಿರುವ ತೆಲಂಗಾಣದ ಮುಖ್ಯಮಂತ್ರಿ ಕೆ. ಚಂದ್ರಶೇಖರ ರಾವ್, ರಾಹುಲ್ ಗಾಂಧಿ ದೇಶದ ಅತಿ ದೊಡ್ಡ ಬಫೂನ್ ಎಂದು ಲೇವಡಿ ಮಾಡಿದರು.
ಇದೇ ವೇಳೆ ಅವರು 2019ರ ಲೋಕಸಭೆ ಚುನಾವಣೆಯಲ್ಲಿ ಬಿಜೆಪಿಯೊಂದಿಗೆ ಮೈತ್ರಿ ಮಾಡಿಕೊಳ್ಳುವ ವದಂತಿಗಳನ್ನು ಅಲ್ಲಗಳೆದರು.
'ರಾಹುಲ್ ಗಾಂಧಿ ಏನು ಎಂಬುದು ಪ್ರತಿಯೊಬ್ಬರಿಗೂ ಗೊತ್ತು. ಅವರು ದೇಶದ ಅತಿ ದೊಡ್ಡ ಬಫೂನ್. ನರೇಂದ್ರ ಮೋದಿ ಅವರ ಬಳಿಗೆ ಹೋಗಿ ಅವರನ್ನು ಅಪ್ಪಿಕೊಂಡಿದ್ದು ಮತ್ತು ಕಣ್ಣುಮಿಟುಕಿಸಿದ ಬಗೆ ಹೇಗಿತ್ತೆಂದು ಇಡೀ ದೇಶವೇ ನೋಡಿದೆ' ಎಂದು ಟೀಕಿಸಿದರು.
ರಾಜ್ಯದಲ್ಲಿ ರಾಹುಲ್ ಗಾಂಧಿ ಪ್ರಚಾರ ಮಾಡಲು ಉದ್ದೇಶಿಸಿದ್ದಾರೆ ಎಂಬ ಸುದ್ದಿಗೆ ಪ್ರತಿಕ್ರಿಯಿಸಿದ ಅವರು, ಅವರು ನಮಗೆ ದೊಡ್ಡ ಆಸ್ತಿ. ಅವರು ತೆಲಂಗಾಣಕ್ಕೆ ಬಂದಷ್ಟೂ ನಾವು ಹೆಚ್ಚು ಸೀಟುಗಳನ್ನು ಗೆಲ್ಲುತ್ತೇವೆ ಎಂದು ವ್ಯಂಗ್ಯವಾಡಿದರು.

ಕಾಂಗ್ರೆಸ್ನ ದೆಹಲಿ ಸಾಮ್ರಾಜ್ಯದ ಪಾರಂಪರ್ಯವನ್ನು ರಾಹುಲ್ ಗಾಂಧಿ ಮುಂದುವರಿಸುತ್ತಿದ್ದಾರೆ ಎಂದ ಕೆಸಿಆರ್, ತೆಲಂಗಾಣದ ಜನರು ದೆಹಲಿಯ ಗುಲಾಮರಾಗಬಾರದು. ತೆಲಂಗಾಣದ ಕುರಿತ ನಿರ್ಧಾರಗಳನ್ನು ತೆಲಂಗಾಣದಲ್ಲಿಯೇ ತೆಗೆದುಕೊಳ್ಳಬೇಕು ಎಂದು ಹೇಳಿದರು.
ಕಾಂಗ್ರೆಸ್ಅನ್ನು ತೆಲಂಗಾಣದ ಅತಿ ದೊಡ್ಡ ಶತ್ರು ಎಂದು ವ್ಯಾಖ್ಯಾನಿಸಿದ ಅವರು, ಟಿಆರ್ಎಸ್ ಸರ್ಕಾರದ ವಿರುದ್ಧ ಕಾಂಗ್ರೆಸ್ ಆಧಾರರಹಿತ, ಅರ್ಥಹೀನ ಮತ್ತು ತರ್ಕಹೀನ ಆರೋಪಗಳನ್ನು ಮಾಡುತ್ತಿದೆ ಎಂದು ಟೀಕಿಸಿದರು.
Everyone knows what Rahul Gandhi is...the biggest buffoon in the country. Whole country has seen how he went to Mr Narendra Modi and hugged him, the way he is winking. He is a property for us, the more he comes (to Telangana) the more seats we will win: K Chandrashekhar Rao pic.twitter.com/PjAD4rXr9C
— ANI (@ANI) 6 September 2018
ಕಾಂಗ್ರೆಸ್ ತೆಲಂಗಾಣದ ವಿಲನ್ ನಂಬರ್ ಒನ್ ಎಂದು ಹೇಳಿದರು. ತೆಲಂಗಾಣ ರಾಷ್ಟ್ರೀಯ ಸಮಿತಿ ಶೇ 100ರಷ್ಟು ಜಾತ್ಯತೀತ ಪಕ್ಷ. ಹೀಗಿರುವಾಗ ಬಿಜೆಪಿಯೊಂದಿಗೆ ಹೇಗೆ ಕೈಜೋಡಿಸಲು ಸಾಧ್ಯ ಎಂದು ಪ್ರಶ್ನೆಯೊಂದಕ್ಕೆ ಪ್ರತಿಕ್ರಿಯೆ ನೀಡಿದರು.
ಇದೇ ಸಂದರ್ಭದಲ್ಲಿ ಅವರು ತೆಲಂಗಾಣ ವಿಧಾನಸಭೆಯ 105 ಕ್ಷೇತ್ರಗಳಿಗೆ ಅಭ್ಯರ್ಥಿಗಳ ಪಟ್ಟಿಯನ್ನು ಪ್ರಕಟಿಸಿದರು. ಇಬ್ಬರು ಹಾಲಿ ಶಾಸಕರಿಗೆ ಮಾತ್ರ ಈ ಬಾರಿ ಟಿಕೆಟ್ ನೀಡುತ್ತಿಲ್ಲ ಎಂದು ತಿಳಿಸಿದರು.












Click it and Unblock the Notifications