ಗಾಂಧಿಗಳು ಕ್ಷಮೆ ಕೋರಬೇಕು: ಕಾಂಗ್ರೆಸ್ನ ಮಾಜಿ ಪ್ರಧಾನಿ ಮೊಮ್ಮಗ ಆಗ್ರಹ
ಹೈದರಾಬಾದ್, ಜೂನ್ 28: ನೆಹರೂ-ಗಾಂಧಿ ಕುಟುಂಬವು ಮಾಜಿ ಪ್ರಧಾನಿ ದಿವಂಗತ ಪಿವಿ ನರಸಿಂಹ ರಾವ್ ಅವರನ್ನು ಮೂಲೆಗುಂಪು ಮಾಡಿತ್ತು ಎಂದು ಅವರ ಮೊಮ್ಮಗ ಎನ್ವಿ ಸುಭಾಷ್ ಆರೋಪಿಸಿದ್ದಾರೆ.
ನರಸಿಂಹರಾವ್ ಅವರ ಜನ್ಮದಿನವಾದ ಶುಕ್ರವಾರ ಮಾತನಾಡಿದ ಅವರು, ಮಾಜಿ ಪ್ರಧಾನಿಯನ್ನು ನಿರ್ಲಕ್ಷ್ಯ ಮಾಡಿದ್ದಕ್ಕೆ ಸೋನಿಯಾ ಗಾಂಧಿ ಮತ್ತು ರಾಹುಲ್ ಗಾಂಧಿ ಅವರು ಕ್ಷಮೆಯಾಚಿಸಬೇಕು ಎಂದು ಆಗ್ರಹಿಸಿದ್ದಾರೆ.
ಪ್ರಸ್ತುತ ಬಿಜೆಪಿಯೊಂದಿಗೆ ಗುರುತಿಸಿಕೊಂಡಿರುವ ಸುಭಾಷ್, ಶುಕ್ರವಾರದ ಮಾಜಿ ಪ್ರಧಾನಿಯ ಜನ್ಮದಿನಾಚರಣೆಯಂದು ಅವರಿಗೆ ಯಾವುದೇ ಗೌರವ ನೀಡಿಲ್ಲ ಎಂದು ಕಾಂಗ್ರೆಸ್ ನಾಯಕರ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದ್ದಾರೆ.

1996ರಲ್ಲಿ ಕಾಂಗ್ರೆಸ್ ಮುಗ್ಗರಿಸಿದ ಬಳಿಕ ನರಸಿಂಹ ರಾವ್ ಅವರನ್ನು ಅನೇಕ ಕಾರಣಗಳಿಂದ ಕಡೆಗಣಿಸಲಾಯಿತು. ಇವು ಅವರ ಸರ್ಕಾರದ ನೀತಿಗಳಿಗೆ ಸಂಬಂಧಿಸಿದ್ದವಾಗಿರಲಿಲ್ಲ. ಪ್ರಧಾನಿ ಹುದ್ದೆಯಲ್ಲಿ ಗಾಂಧಿ-ನೆಹರೂ ಕುಟುಂಬದ ಹೊರತಾಗಿ ಬೇರೆ ಯಾರಾದರೂ ಮುಂದುವರಿದರೆ ತಾವು ಹಿನ್ನೆಲೆ ಸರಿದುಬಿಡುತ್ತೇವೆ ಎಂದು ಭಾವಿಸಿದರು. ಅದಕ್ಕಾಗಿ ಅವರನ್ನು ಮೂಲೆಗುಂಪು ಮಾಡಿದರು ಎಂದು ಆರೋಪಿಸಿದ್ದಾರೆ.
ಕಾಂಗ್ರೆಸ್ ಪಕ್ಷದ ಎಲ್ಲ ವೈಫಲ್ಯಗಳನ್ನು ನರಸಿಂಹರಾವ್ ಅವರ ತಲೆಗೆ ಕಟ್ಟಲಾಯಿತು. ಅವರ ಕೊಡುಗೆಗಳ ಶ್ರೇಯಸ್ಸನ್ನು ಅವರಿಗೆ ನೀಡಲಿಲ್ಲ. ಸೋನಿಯಾ ಗಾಂಧಿ ಮತ್ತು ರಾಹುಲ್ ಗಾಂಧಿ ಅವರು ಕ್ಷಮೆ ಕೋರಬೇಕೆಂದು ಹಾಗೂ ಅವರಿಗೆ ಗೌರವ ಸಲ್ಲಿಸಬೇಕೆಂದು ನಾನು ಒತ್ತಾಯಿಸುತ್ತೇನೆ ಎಂದು ಆಗ್ರಹಿಸಿದ್ದಾರೆ.
ಕಾಂಗ್ರೆಸ್ ಮತ್ತು ದೇಶಕ್ಕೆ ಅವರ ಕೊಡುಗೆಯನ್ನು ಜಗತ್ತಿನ ಎಲ್ಲರೂ ಶ್ಲಾಘಿಸುತ್ತಾರೆ. ರಾಜೀವ್ ಗಾಂಧಿ ಅವರ ಹತ್ಯೆಯ ಬಳಿಕ 1991ರಲ್ಲಿ ಪ್ರಧಾನಿಯಾಗಿ ಅಧಿಕಾರ ಸ್ವೀಕರಿಸಿದ ಬಳಿಕ ಅವರು ಹಣಕಾಸು ಸಚಿವ ಮನಮೋಹನ್ ಸಿಂಗ್ಅವರ ನೆರವಿನೊಂದಿಗೆ ಸಾಕಷ್ಟು ಕೊಡುಗೆಗಳನ್ನು ನೀಡಿದ್ದರು ಎಂದು ಹೇಳಿದ್ದಾರೆ.
ತಮ್ಮ ತಾತನ 98ನೇ ಜನ್ಮದಿನಾಚರಣೆಯಂದು ಕೂಡ ತೆಲಂಗಾಣ ಕಾಂಗ್ರೆಸ್ ಮುಖಂಡರು ಮಾಜಿ ಪ್ರಧಾನಿಗೆ ಗೌರವ ಸಲ್ಲಿಸಿಲ್ಲ ಎಂದು ಬೇಸರ ವ್ಯಕ್ತಪಡಿಸಿದರು.
ಸುಭಾಷ್ ಅವರು 2014ರಲ್ಲಿ ಬಿಜೆಪಿ ಸೇರ್ಪಡೆಯಾಗಿದ್ದರು. ಅವರು ತೆಲಂಗಾಣ ಬಿಜೆಪಿ ಘಟಕದ ವಕ್ತಾರರಾಗಿದ್ದಾರೆ.












Click it and Unblock the Notifications