ಮೋದಿ ಭಾರತ ಕಟ್ಟಿದರೆ, ಮಹಾಘಟಬಂಧನ ಕೆಡವುತ್ತಿದೆ: ಶಾ
ಹೈದರಾಬಾದ್, ಅಕ್ಟೋಬರ್ 29: "ಪ್ರಧಾನಿ ನರೇಂದ್ರ ಮೋದಿಯವರು ಮೇಕ್ ಇನ್ ಇಂಡಿಯಾ ಮೂಲಕ ಭಾರತವನ್ನು ಕಟ್ಟುತ್ತಿದ್ದರೆ, ಮಹಾಘಟಬಂಧನ ಅದನ್ನು ಕೆಡವುತ್ತಿದೆ" ಎಂದು ವಿಪಕ್ಷಗಳ ವಿರುದ್ಧ ಬಿಜೆಪಿ ರಾಷ್ಟ್ರಾಧ್ಯಕ್ಷ ಅಮಿತ್ ಶಾ ಕಿಡಿಕಾರಿದ್ದಾರೆ.
ಹೈದರಾಬಾದಿನಲ್ಲಿ ಭಾರತೀಯ ಜನತಾ ಯುವ ಮೋರ್ಚಾ ಆಯೋಜಿಸಿದ್ದ ಕಾರ್ಯಕ್ರಮವೊಂದರಲ್ಲಿ ಅವರು ಮಾತನಾಡುತ್ತಿದ್ದರು.
"ಭಾರತದಲ್ಲಿ ಎರಡು ಸಿದ್ಧಾಂತಗಳು ಕೆಲಸ ಮಾಡುತ್ತಿವೆ. ಒಂದು ಕಡೆ ಭಾರತವನ್ನು ಕಟ್ಟಲು ಹಲವು ಜನಪರ ಯೋಜನೆಗಳ ಮೂಲಕ ಬಿಜೆಪಿ ಸಾಕಷ್ಟು ಪರಿಶ್ರಮಿಸುತ್ತಿದೆ. ಮತ್ತೊಂದೆಡೆ ಮಹಾಘಟಬಂಧನವು ಸರಿಯಾದ ಒಬ್ಬ ನಾಯಕನೇ ಇಲ್ಲದಿದ್ದರೂ ದೇಶವನ್ನು ಒಡೆಯುವ ಕೆಲಸ ಮಾಡುತ್ತಿದೆ" ಎಂದು ಅಮಿತ್ ಶಾ ವಿಪಕ್ಷಗಳ ಮಹಾಮೈತ್ರಿಕೂಟವನ್ನು ತರಾಟೆಗೆ ತೆಗೆದುಕೊಂಡರು.

'ಈ ಇಬ್ಬರಲ್ಲಿ ಯಾರನ್ನು ಆಯ್ಕೆ ಮಾಡಬೇಕು ಎಂಬುದನ್ನು ನೀವು ನಿರ್ಧರಿಸುವ ಸಮಯಬಂದಿದೆ' ಎಂದ ಅವರು, ಹೈದರಾಬಾದಿನಲ್ಲಿ ನಿಜಾಮರ ಆಳ್ವಿಕೆಯಲ್ಲಿ ನಡೆದ ಅರಾಜಕತೆಗಳು, ದೌರ್ಜನ್ಯಗಳನ್ನು ಜನರಿಗೆ ನೆನಪಿಸಿದರು. 'ಎಐಎಂಐಎಂ ಪಕ್ಷದ ಮುಖಂಡ ಅಸಾದುದ್ದೀನ್ ಓವೈಸಿ ಅವರಿಗೆ ಹೆದರಿಕೊಂಡು ತೆಲಂಗಾಣ ರಾಷ್ಟ್ರೀಯ ಸಮಿತಿಯ ಮುಖಂಡ , ತೆಲಂಗಾಣ ಮುಖ್ಯಮಂತ್ರಿ ಕೆ ಚಂದ್ರಶೇಖರ ರಾವ್ ಅವರು ಹೈದರಾಬಾದ್ ಸ್ವಾತಂತ್ರ್ಯ ದಿನವನ್ನೂ ಆಚರಿಸಿಲ್ಲ. ರಾಜ್ಯದಲ್ಲಿ ಇನ್ನು ಕೆಲವೇ ದಿನಗಳಲ್ಲಿ ಚುನಾವಣೆ ನಡೆಯಲಿದ್ದು, ಎಚ್ಚರಿಕೆಯಿಂದ ಮತಚಲಾಯಿಸಿ' ಎಂದು ಅವರು ಜನತೆಯಲ್ಲಿ ವಿನಂತಿಸಿದರು.
'ಕಾಂಗ್ರೆಸ್ ಅಧ್ಯಕ್ಷ ರಾಹುಲ್ ಗಾಂಧಿ ಅವರಿಗೆ ಪ್ರಧಾನಿ ನರೇಂದ್ರ ಮೋದಿ ಅವರನ್ನು ಟೀಕಿಸುವ ಯಾವ ಅರ್ಹತೆಯೂ ಇಲ್ಲ, ಅವರು ಪ್ರತಿದಿನವೂ ಹೇಳಿದ್ದನ್ನೇ ಹೇಳುತ್ತಿದ್ದಾರೆ. ಕಾಂಗ್ರೆಸ್ ಮುಖಂಡರಿಗೆ ಎಷ್ಟೋ ವರ್ಷಗಳಿಂದ ಸಾಧ್ಯವಾಗದ್ದನ್ನು ಬಿಜೆಪಿ ಕಳೆದ ನಾಲ್ಕೂವರೆ ವರ್ಷದಲ್ಲಿ ಸಾಧಿಸಿದೆ' ಎಂದು ಶಾ ಹೇಳಿದರು.
ತೆಲಂಗಾಣದ 119 ವಿಧಾನಸಭಾ ಕ್ಷೇತ್ರಗಳಿಗೆ ಡಿಸೆಂಬರ್ 7 ರಂದು ಚುನಾವಣೆ ನಡೆಯಲಿದ್ದು, ಡಿ.11 ರಂದು ಫಲಿತಾಂಶ ಹೊರಬೀಳಲಿದೆ.












Click it and Unblock the Notifications