ಜಗನ್ ಗೆ ಶಾಕ್: ನೂರಾರು ಕೋಟಿ ಆಸ್ತಿ ಮತ್ತೆ ಜಪ್ತಿ
ಹೈದರಾಬಾದ್, ಫೆ.27: ಅಕ್ರಮ ಆಸ್ತಿ ಪ್ರಕರಣ ಆರೋಪ ಹೊತ್ತಿರುವ ವೈಎಸ್ಸಾರ್ ಕಾಂಗ್ರೆಸ್ ಮುಖ್ಯಸ್ಥ ಜಗನ್ ಮೋಹನ್ ರೆಡ್ಡಿ ಅವರಿಗೆ ಮತ್ತೆ ಆಘಾತವಾಗಿದೆ. ಜಾರಿ ನಿರ್ದೇಶನಾಲಯ ತಂಡ ಮತ್ತೊಮ್ಮೆ ಜಗನ್ ಅವರಿಗೆ ಸೇರಿದ ನೂರಾರು ಕೋಟಿ ರು ಜಪ್ತಿ ಮಾಡಿದೆ. ಮನಿ ಲಾಂಡ್ರಿಂಗ್ ಪ್ರಕರಣಕ್ಕೆ ಸಂಬಂಧಿಸಿದಂತೆ ಐಸಿಸಿ ಅಧ್ಯಕ್ಷ ಎನ್ ಶ್ರೀನಿವಾಸನ್ ಅವರು ಕೂಡಾ ಆಸ್ತಿ ಕಳೆದುಕೊಂಡಿದ್ದಾರೆ.
ಅಕ್ರಮವಾಗಿ ಬಂಡವಾಳ ಹೂಡಿಕೆ ಹಾಗೂ ವ್ಯವಹಾರ ನಡೆಸಿದ ಆರೋಪದ ಮೇಲೆ ಜಗನ್ ಹಾಗೂ ಶ್ರೀನಿವಾಸನ್ ಗೆ ಸೇರಿದ ಸುಮಾರು 232.28 ಕೋಟಿ ರು ಆಸ್ತಿಯನ್ನು ಜಾರಿ ನಿರ್ದೇಶನಾಲಯ ವಶಪಡಿಸಿಕೊಂಡಿದೆ. [ಜಗನ್ ರೆಡ್ಡಿ ವಿರುದ್ಧ 11ನೇ ಚಾರ್ಜ್ ಶೀಟ್ ಸಲ್ಲಿಕೆ]
ದಿವಂಗತ ವೈಎಸ್ ರಾಜಶೇಖರ ರೆಡ್ಡಿ ಅವರು ಮುಖ್ಯಮಂತ್ರಿಯಾಗಿದ್ದ ಕಾಲದಲ್ಲಿ ಎನ್ ಶ್ರೀನಿವಾಸನ್ ಅವರು ಲಂಚ ನೀಡಿ ಇಂಡಿಯಾ ಸಿಮೆಂಟ್ಸ್ ಪರ ಯೋಜನೆಗಳನ್ನು ಮಂಜೂರು ಮಾಡಿಸಿಕೊಂಡಿದ್ದರು. ಹಣಕಾಸು ಅವ್ಯವಹಾರದಲ್ಲಿ ಭಾಗಿಯಾಗಿರುವ ಆರೋಪದ ಮೇಲೆ ಮನಿಲಾಂಡ್ರಿಂಗ್ (PMLA)ಕ್ರಿಮಿನಲ್ ಕೇಸ್ ದಾಖಲಿಸಿಕೊಳ್ಳಲಾಗಿದೆ.

ಜಾರಿ ನಿರ್ದೇಶನಾಲಯ ಹಾಗೂ ಸಿಬಿಐ ಎರಡು ತಂಡಗಳು ಎಫ್ ಐಆರ್ ದಾಖಲಿಸಿಕೊಂಡು ಕಳೆದ ಮೂರು ವರ್ಷಗಳಿಂದ ತನಿಖೆ ನಡೆಸುತ್ತಿವೆ. ಜಗನ್ ಅವರ ಮೇಲೆ ಸರಿ ಸುಮಾರು 11ಕ್ಕೂ ಅಧಿಕ ಚಾರ್ಜ್ ಶೀಟ್ ದಾಖಲಾಗಿದೆ.
ಮೆಸರ್ಸ್ ಕಾರ್ಮೆಲ್ ಏಷ್ಯಾ ಹೋಲ್ಡಿಂಗ್ಸ್ ಪ್ರೈ ಲಿ, ಮೆ. ಜಗತಿ ಪಬ್ಲಿಕೇಷನ್ ಲಿ, ಮೆ. ಭಾರತಿ ಸಿಮೆಂಟ್ ಕಾರ್ಪೊರೇಷನ್ ಪ್ರೈ ಲಿ ಹಾಗೂ ಮೆ.ಇಂಡಿಯನ್ ಸಿಮೆಂಟ್ಸ್ ಲಿ ಕ್ರಿಮಿನಲ್ ಮೊಕದ್ದಮೆ ಎದುರಿಸುತ್ತಿವೆ. ಒಟ್ಟಾರೆ ಪಿಎಂಎಲ್ಎ ಪ್ರಕರಣಕ್ಕೆ ಸಂಬಂಧಿಸಿದಂತೆ ಇದುವರೆವಿಗೂ 1,000 ಕೋಟಿ ರು.ಗೂ ಅಧಿಕ ಮೊತ್ತವನ್ನು ಜಾರಿ ನಿರ್ದೇಶನಾಲಯ ಜಪ್ತಿ ಮಾಡಿದೆ.
ಸಂಡೂರು ಪವರ್ ಕಂಪನಿ, ಕಾರ್ಮೆಲ್ ಏಷ್ಯಾ ಹೋಲ್ಡಿಂಗ್ಸ್, ಪಿವಿಪಿ ಬಿಸಿನೆಸ್ ವೆಂಚರ್ಸ್, ಜುಬುಲಿ ಮೀಡಿಯಾ ಕಮ್ಯೂನಿಕೇಷನ್ಸ್, ಕ್ಲಾಸಿಕ್ ರಿಯಾಲ್ಟಿ, ಬ್ರಹ್ಮಣಿ ಇನ್ಫ್ರಾಟೆಕ್, ಆರ್ ಆರ್ ಗ್ಲೋಬಲ್ ಎಂಟರ್ ಪ್ರೈಸಸ್ ಹಾಗೂ ಸರಸ್ವತಿ ಪವರ್ ಮತ್ತು ಇಂಡಸ್ಟ್ರೀಸ್ ಸಂಸ್ಥೆ ವಿರುದ್ಧ ಯಾವುದೇ ಸಾಕ್ಷಿ ಆಧಾರ ಸಿಗದ ಕಾರಣ ಸಿಬಿಐ ತನ್ನ ತನಿಖೆ ಮುಕ್ತಾಯಗೊಳಿಸಿದೆ.












Click it and Unblock the Notifications