ಗಣಿಗಾರಿಕೆಯಿಂದ ಭಾರತದ ಜಿಡಿಪಿಗೆ ಶೇ.2.5ರಷ್ಟು ಕೊಡುಗೆ: ಪ್ರಹ್ಲಾದ್ ಜೋಶಿ
ಹೈದರಾಬಾದ್, ಸೆಪ್ಟಂಬರ್ 09: ಭಾರತದಲ್ಲಿ 2030ರ ವೇಳೆಗೆ ಒಟ್ಟು ರಾಷ್ಟ್ರೀಯ ಉತ್ಪನ್ನ (ಜಿಡಿಪಿ)ಕ್ಕೆ ಗಣಿ ಮತ್ತು ಖನಿಜಗಳ ಪಾಲು ಶೇ.2.5ಕ್ಕೆ ಹೆಚ್ಚಿಸುವ ನಿಟ್ಟಿನಲ್ಲಿ ಎಲ್ಲ ರಾಜ್ಯಗಳು ಸಹಕರಿಸುವಂತೆ ಕೇಂದ್ರ ಸಂಸದೀಯ ವ್ಯವಹಾರ ಮತ್ತು ಕಲ್ಲಿದ್ದಲು ಸಚಿವ ಪ್ರಹ್ಲಾದ್ ಜೋಶಿ ಕರೆ ನೀಡಿದರು.
ಶುಕ್ರವಾರ ಹೈದರಾಬಾದ್ನಲ್ಲಿ ನಡೆಯುತ್ತಿರುವ 'ರಾಷ್ಟ್ರೀಯ ಗಣಿಗಾರಿಕೆ ಸಚಿವರ ಸಮಾವೇಶ'ವನ್ನು ಉದ್ಘಾಟಿಸಿ ಮಾತನಾಡಿದ ಪ್ರಹ್ಲಾದ್ ಜೋಶಿ, ಪ್ರಧಾನಿ ನರೇಂದ್ರ ಮೋದಿಯವರ ನಿರ್ದೇಶನದಂತೆ ಆಯಾ ರಾಜ್ಯಗಳ ಗಣಿ ಇಲಾಖೆಯ ಸರ್ಕಾರಿ ಕಂಪನಿಗಳು ಮತ್ತು ಸ್ವಾಯತ್ತ ಸಂಸ್ಥೆಗಳ ಜೊತೆ ಚರ್ಚಿಸಿ ಸಮಾವೇಶ ಆಯೋಜಿಸಿವೆ. ಇಂತಹ ಮಹತ್ವದ ಸಮಾವೇಶದಲ್ಲಿ ಎಲ್ಲ ರಾಜ್ಯಗಳ ಭಾಗವಹಿಸುವಿಕೆಯು ಮುಖ್ಯವಾಗಿರುತ್ತದೆ ಎಂದು ಹೇಳಿದರು.
ಹೈದರಾಬಾದ್: 'ಹುಸೇನ್ ಸಾಗರ'ಕ್ಕೆ 'ವಿನಾಯಕ ಸಾಗರ' ಎಂದ ತೆಲಂಗಾಣ ಬಿಜೆಪಿ ಅಧ್ಯಕ್ಷ
ಭಾರತದಂತಹ ಒಕ್ಕೂಟ ವ್ಯವಸ್ಥೆಯಲ್ಲಿ ನಾವು ಶ್ರದ್ಧೆಯಿಂದ ಕೆಲಸ ಮಾಡಬೇಕು. ಅದರಿಂದ ಮಾತ್ರವೇ 2047ರ ಒಳಗಾಗಿ ಭಾರತ ಅಭಿವೃದ್ಧಿ ಹೊಂದಿದ ಭಾರತವನ್ನಾಗಿಸುವಲ್ಲಿ ಯಶಸ್ವಿಯಾಗುತ್ತೇವೆ ಎಂದು ಅವರು ಅಭಿಪ್ರಾಯಪಟ್ಟರು.
ಕಲ್ಲಿದ್ದಲು ಉತ್ಪಾದನೆಯಲ್ಲಿ ಭಾರತ ಹೊಸ ಮೈಲುಗಲ್ಲು ಸಾಧಿಸುತ್ತಿದೆ. ಕಲ್ಲಿದ್ದಲು ಉತ್ಪಾದನೆಯಲ್ಲಿ ಕಳೆದ ವರ್ಷಕ್ಕಿಂತ ಈ ಬಾರಿ ದೇಶವು ಶೇ 8% ರಷ್ಟು ಪ್ರಗತಿ ಸಾಧಿಸಿದೆ. ಆಗಸ್ಟ್ 2022 ರವರೆಗೆ 58 ಮೆಟ್ರಿಕ್ ಟನ್ ನಷ್ಟು ಉತ್ಪಾದನೆಯಾಗಿದೆ ಎಂದು ಸಮ್ಮೇಳನದಲ್ಲಿ ಕೇಂದ್ರ ಸಚಿವರು ವಿವರಿಸಿದರು.
ಗಣಿಗಳಿಂದ ಕೇಂದ್ರ 25,170 ಕೋಟಿ ಆದಾಯ ಸಂಗ್ರಹ
ಭಾರತದಲ್ಲಿ ಕಲ್ಲಿದ್ದಲು ಗಣಿಗಾರಿಕೆ ಕ್ಷೇತ್ರದಲ್ಲಿ ಇನ್ನಷ್ಟು ಪ್ರಗತಿ ಸಾಧಿಸಲು ಕೇಂದ್ರ ಸರ್ಕಾರ ನಿರಂತರವಾಗಿ ಪ್ರಯತ್ನ ನಡೆಸುತ್ತಿದೆ. ವಿವಿಧ ನೀತಿ ನಿಯಮಗಳನ್ನು ರೂಪಿಸುತ್ತಿದೆ. ಖನಿಜ ಕ್ಷೇತ್ರದಲ್ಲಾದ ಸುಧಾರಣೆಗಳು ಹಾಗೂ ಭಾರತದ ಆರ್ಥಿಕ ಬೆಳವಣಿಗೆಯಲ್ಲಿ ಕಲ್ಲಿದ್ದಲು ಗಣಿಗಾರಿಕೆಯ ಪಾತ್ರವು ಮುಖ್ಯವಾಗಿದೆ. ಕಳೆದ ವರ್ಷ ಹರಾಜು ಪ್ರಕ್ರಿಯೆಯಿಂದ ವಿವಿಧ ರಾಜ್ಯಗಳಲ್ಲಿನ ಗಣಿಗಳ ಮೂಲಕ ಕೇಂದ್ರ ಸರ್ಕಾರಕ್ಕೆ ಒಟ್ಟು ಸುಮಾರು 25,170 ಕೋಟಿ ರೂಪಾಯಿ ಆದಾಯ ಸಂಗ್ರಹವಾಗಿದೆ ಎಂದು ಅವರು ತಿಳಿಸಿದರು.
ಕಲ್ಲಿದ್ದಲು ಉತ್ಪಾದನೆಯಲ್ಲಿನ ಪ್ರಗತಿ, ಸಮಾವೇಶದಲ್ಲಿ ವಿವಿಧ ರಾಜ್ಯಗಳ ಭಾಗವಹಿಸುವಿಕೆ, ಕೇಂದ್ರ ಸರ್ಕಾರದ ಕ್ರಮಗಳು ಸೇರಿದಂತೆ ಈ ಎಲ್ಲ ಅಂಶಗಳನ್ನು ಗಮನಿಸಿದರೆ ಮುಂದಿನ ಎಂಟು (2030) ವರ್ಷಗಳಲ್ಲಿ ಭಾರತದ ಒಟ್ಟು ರಾಷ್ಟ್ರೀಯ ಉತ್ಪನ್ನಕ್ಕೆ (ಜಿಡಿಪಿಗೆ) ಗಣಿಗಾರಿಕೆಯಿಂದಲೇ ಶೇ.2.5ರಷ್ಟು ಆದಾಯ ಸಂಗ್ರಹವಾಗುವುದರಲ್ಲಿ ಅನುಮಾನವೇ ಇಲ್ಲ ಎಂದು ಪ್ರಹ್ಲಾದ್ ಜೋಶಿ ಪುನರುಚ್ಚರಿಸಿದರು.