ಹೈದರಾಬಾದ್ನಲ್ಲಿ 8 ಕೋಟಿ ರೂ ವಶ: ಬಿಜೆಪಿಗೆ ಕ್ಲೀನ್ ಚಿಟ್ ನೀಡಿದ ಐಟಿ
ಹೈದರಾಬಾದ್, ಏಪ್ರಿಲ್ 12: ತೆಲಂಗಾಣ ಬಿಜೆಪಿಗೆ ಸೇರಿದ ಎಂಟು ಕೋಟಿ ರೂಪಾಯಿ ಮೊತ್ತವನ್ನು ಇತ್ತೀಚೆಗೆ ಹೈದರಾಬಾದ್ ಪೊಲೀಸರು ವಶಕ್ಕೆ ಪಡೆದುಕೊಂಡಿದ್ದರು. ಇದು ಪಕ್ಷದ ಬ್ಯಾಂಕ್ ಖಾತೆಯಿಂದ ಅಧಿಕೃತವಾಗಿ ಡ್ರಾ ಮಾಡಿಕೊಂಡ ಹಣವಾಗಿದೆ ಎಂದು ಆದಾಯ ತೆರಿಗೆ ಇಲಾಖೆ ಹೇಳುವ ಮೂಲಕ ಪಕ್ಷಕ್ಕೆ ಕ್ಲೀನ್ ಚಿಟ್ ನೀಡಿದೆ.
ಲೋಕಸಭಾ ಚುನಾವಣೆ 2019 : ವಿಶೇಷ ಪುಟ | ಗ್ಯಾಲರಿ
ಹಣ ವಶಕ್ಕೆ ಪಡೆದುಕೊಂಡ ಪ್ರಕರಣಕ್ಕೆ ಸಂಬಂಧಿಸಿದಂತೆ ಇನ್ನೂ ಎಫ್ಐಆರ್ ದಾಖಲಾಗಿಲ್ಲ. ಹೀಗಾಗಿ ಇದನ್ನು ನೀತಿ ಸಂಹಿತೆಯ ಉಲ್ಲಂಘನೆ ಎಂದು ಪರಿಗಣಿಸಬಹುದೇ ಎಂಬುದರ ಬಗ್ಗೆ ಪೊಲೀಸರು ಕಾನೂನು ಅಭಿಪ್ರಾಯ ಪಡೆದುಕೊಳ್ಳಲು ಮುಂದಾಗಿದ್ದಾರೆ.
ರಾಜ್ಯದಲ್ಲಿ ಲೋಕಸಭೆ ಚುನಾವಣೆ ನಡೆಯುವ ಮೂರು ದಿನಗಳ ಮುನ್ನ ಏಪ್ರಿಲ್ 8ರಂದು ನಾರಾಯಣಗುಡ ಪೊಲೀಸ್ ಠಾಣೆಯ ವ್ಯಾಪ್ತಿಯಲ್ಲಿ ಈ ನಗದು ಹಣವನ್ನು ವಶಕ್ಕೆ ಪಡೆದುಕೊಳ್ಳಲಾಗಿತ್ತು. ಇದರಲ್ಲಿ ಹೊಸ 2,000 ಮತ್ತು 500 ರೂ ಮುಖಬೆಲೆಯ ನೋಟುಗಳಿದ್ದವು.

ಏಳು ವ್ಯಕ್ತಿಗಳು ನೀಡಿರುವ ಹೇಳಿಕೆಗಳನ್ನು ಮತ್ತು ಬ್ಯಾಂಕ್ ಅಧಿಕಾರಿಗಳ ಹೇಳಿಕೆಗಳನ್ನು ಪರಿಶೀಲಿಸಲಾಗಿದೆ. ಬಿಜೆಪಿ ಕಚೇರಿ ಪತ್ರ, ಪಕ್ಷದ ಬ್ಯಾಂಕ್ ಖಾತೆಯ ವಿವರ, ಚೆಕ್ಗಳ ನಕಲು ಪ್ರತಿಗಳನ್ನು ಪರಿಶೀಲಿಸಿದಾಗ ಬಿಜೆಪಿಯು ಇಂಡಿಯನ್ ಬ್ಯಾಂಕ್ನ ನಾರಾಯಣಗುಡ ಶಾಖೆಯ ತನ್ನ ಖಾತೆಯಿಂದ ಚೆಕ್ ಸಂಖ್ಯೆ 059198ನಿಂದ ಏಪ್ರಿಲ್ 8ರಂದು ಎಂಟು ಕೋಟಿ ರೂ ಹಣ ಡ್ರಾ ಮಾಡಿರುವುದು ಕಂಡುಬಂದಿದೆ ಎಂದು ಆದಾಯ ತೆರಿಗೆ ಉಪ ತನಿಖಾ ನಿರ್ದೇಶಕ ಬಿ. ಶ್ರೀನಿವಾಸ ರಾವ್ ತಿಳಿಸಿದ್ದಾರೆ.
ಪೊಲೀಸರು ಸಲ್ಲಿಸಿರುವ ಹಣ ವಶದ ವರದಿಗೂ ಬ್ಯಾಂಕ್ ಮಾಹಿತಿಯ ಹಣ ಡ್ರಾದ ವಿವರಗಳಿಗೂ ತಾಳೆಯಾಗುತ್ತಿದೆ ಎಂದು ಅವರು ಹೇಳಿದ್ದಾರೆ.
ಇದು ಸಿಕಂದರಬಾದ್ ಲೋಕಸಭೆ ಕ್ಷೇತ್ರದಲ್ಲಿ ಹಂಚಲ ತಂದಿದ್ದ ಹಣ ಎಂದು ಟಿಆರ್ಎಸ್ ಆರೋಪಿಸಿತ್ತು. ಇದನ್ನು ನಿರಾಕರಿಸಿದ್ದ ಬಿಜೆಪಿ ಅಭ್ಯರ್ಥಿ ಜಿ. ಕೃಷ್ಣನ್ ರೆಡ್ಡಿ, ವಿವಿಧ ಸಂಸ್ಥೆಗಳು ಮತ್ತು ವ್ಯಕ್ತಿಗಳಿಗೆ ಬಾಕಿ ಉಳಿಸಲಾಗಿದ್ದ ಮೊತ್ತವನ್ನು ಪಾವತಿಸಲು ಈ ಹಣ ತರಲಾಗಿತ್ತು ಎಂದಿದ್ದರು.
ನೀತಿ ಸಂಹಿತೆ ಜಾರಿಯಲ್ಲಿ ಇರುವಾಗ ಒಂದು ರಾಜಕೀಯ ಪಕ್ಷಕ್ಕೆ ಅಷ್ಟು ದೊಡ್ಡ ಮೊತ್ತದ ಹಣವನ್ನು ಬ್ಯಾಂಕ್ನಿಂದ ಡ್ರಾ ಮಾಡಲು ಹೇಗೆ ಅವಕಾಶ ನೀಡಲಾಗುತ್ತದೆ ಎಂದು ಪೊಲೀಸರು ಪ್ರಶ್ನಿಸಿದ್ದಾರೆ.












Click it and Unblock the Notifications