ಹೈದರಾಬಾದ್ ತಲುಪಿದ ಜೆಡಿಎಸ್-ಕಾಂಗ್ರೆಸ್ ಶಾಸಕರು!
Recommended Video

ಹೈದರಾಬಾದ್, ಮೇ 18 : ಬಿ.ಎಸ್.ಯಡಿಯೂರಪ್ಪ ಮುಖ್ಯಮಂತ್ರಿಯಾಗಿ ಪ್ರಮಾಣ ವಚನ ಸ್ವೀಕರಿಸಿದ್ದು, ಬಹುಮತ ಸಾಬೀತು ಮಾಡಬೇಕಾಗಿದೆ. ಕುದುರೆ ವ್ಯಾಪಾರದ ಭೀತಿಯಲ್ಲಿರುವ ಜೆಡಿಎಸ್ ಮತ್ತು ಕಾಂಗ್ರೆಸ್ ಶಾಸಕರು ಹೈದರಾಬಾದ್ ತಲುಪಿದ್ದಾರೆ.
ಬಿಡದಿಯ ಈಗಲ್ಟನ್ ರೆಸಾರ್ಟ್ನಲ್ಲಿದ್ದ ಕಾಂಗ್ರೆಸ್ ಶಾಸಕರು, ಶಾಂಗ್ರಿಲಾ ಹೋಟೆಲ್ನಲ್ಲಿದ್ದ ಜೆಡಿಎಸ್ ಶಾಸಕರು ತಡರಾತ್ರಿ ಬೆಂಗಳೂರಿನಿಂದ ಹೈದರಾಬಾದ್ಗೆ ಪ್ರಯಾಣ ಬೆಳೆಸಿದರು. ಶುಕ್ರವಾರ ಬೆಳಗ್ಗೆ 9 ಗಂಟೆ ಸುಮಾರಿಗೆ ಶಾಸಕರು ಹೈದರಾಬಾದ್ನ ಹೋಟೆಲ್ ತಲುಪಿದರು.
ಬಂಜರಾ ಹಿಲ್ಸ್ನಲ್ಲಿರುವ ಪಾರ್ಕ್ ಅಯಾತ್ ಹೋಟೆಲ್ಗೆ ಶಾಸಕರು, ನಾಯಕರು ಆಗಮಿಸಿದರು. ಪಾರ್ಕ್ ಅಯಾತ್ 5 ಸ್ಟಾರ್ ಹೋಟೆಲ್ ಆಗಿದ್ದು, ಶಾಸಕರು ಅಲ್ಲಿಯೇ ವಾಸ್ತವ್ಯ ಹೂಡುವ ಸಾಧ್ಯತೆ ಇದೆ.

ಶಾಸಕರಿಗೆ ಬೌನ್ಸರ್ ಮತ್ತು ಗನ್ ಮ್ಯಾನ್ ಭದ್ರತೆ ನೀಡಲಾಗಿದೆ. ಬೆಂಗಳೂರಿನಿಂದಲೇ 11 ಬೌನ್ಸರ್ ಮತ್ತು ಗನ್ ಮ್ಯಾನ್ಗಳನ್ನು ಹೈದರಾಬಾದ್ಗೆ ಕರೆದುಕೊಂಡು ಹೋಗಲಾಗಿದೆ. ತೆಲಂಗಾಣ ಸರ್ಕಾರ ಹೋಟೆಲ್ ಸುತ್ತ-ಮುತ್ತ ಬಿಗಿ ಪೊಲೀಸ್ ಬಂದೋಬಸ್ತ್ ಮಾಡಿದೆ.
ಬಿಡದಿಯ ಈಗಲ್ಟನ್ ರೆಸಾರ್ಟ್ಗೆ ನೀಡಲಾಗಿದ್ದ ಪೊಲೀಸ್ ಭದ್ರತೆಯನ್ನು ಸರ್ಕಾರ ವಾಪಸ್ ಪಡೆದಿತ್ತು. ಆದ್ದರಿಂದ, ಶಾಸಕರನ್ನು ಉಳಿಸಿಕೊಳ್ಳಲು ಕಾಂಗ್ರೆಸ್ ಎಲ್ಲರನ್ನೂ ಹೈದರಾಬಾದ್ಗೆ ಸ್ಥಳಾಂತರ ಮಾಡಿದೆ. ಜೆಡಿಎಸ್ ಶಾಸಕರು ಸಹ ಕೊಚ್ಚಿಗೆ ಹೋಗುವ ಯೋಜನೆಯನ್ನು ಕೈ ಬಿಟ್ಟು, ಹೈದರಾಬಾದ್ಗೆ ಹೋಗಿದ್ದಾರೆ.
2018ರ ಕರ್ನಾಟಕ ವಿಧಾನಸಭೆ ಚುನಾವಣೆಯಲ್ಲಿ ಬಿಜೆಪಿ 104, ಕಾಂಗ್ರೆಸ್ 78, ಜೆಡಿಎಸ್ 38 ಸ್ಥಾನಗಳಲ್ಲಿ ಜಯಗಳಿಸಿದೆ. 2 ಪಕ್ಷೇತರ ಸದಸ್ಯರು ಆಯ್ಕೆಯಾಗಿದ್ದಾರೆ. ರಾಜ್ಯಪಾಲರು ಬಿಜೆಪಿಗೆ ಸರ್ಕಾರ ರಚನೆಗೆ ಅವಕಾಶ ನೀಡಿದ್ದು, ಬಿ.ಎಸ್.ಯಡಿಯೂರಪ್ಪ ಅವರು 24ನೇ ಮುಖ್ಯಮಂತ್ರಿಯಾಗಿ ಪ್ರಮಾಣ ವಚನ ಸ್ವೀಕರಿಸಿದ್ದಾರೆ.
ಬಿಜೆಪಿಗೆ ಸರ್ಕಾರ ರಚನೆ ಅವಕಾಶ ನೀಡಿರುವ ರಾಜ್ಯಪಾಲರ ಕ್ರಮವನ್ನು ಕಾಂಗ್ರೆಸ್-ಜೆಡಿಎಸ್ ಸುಪ್ರೀಂಕೋರ್ಟ್ನಲ್ಲಿ ಪ್ರಶ್ನಿಸಿವೆ. ಈ ಅರ್ಜಿಯ ವಿಚಾರಣೆ ಇಂದು ಸುಪ್ರೀಂಕೋರ್ಟ್ನಲ್ಲಿ ನಡೆಯಲಿದೆ.












Click it and Unblock the Notifications