ತೆಲಂಗಾಣ: ಫಲಿತಾಂಶಕ್ಕೆ 48 ಗಂಟೆ ಮುನ್ನ KCRಗೆ ಬಿಜೆಪಿ ನೀಡಿದ ಆಫರ್
ತೆಲಂಗಾಣ ಅಸೆಂಬ್ಲಿ ಚುನಾವಣೆಯ ಫಲಿತಾಂಶ ಇದೇ ಬರುವ ಮಂಗಳವಾರ ( ಡಿ 11) ಹೊರಬೀಳಲಿದೆ. ವಿವಿಧ ಸಂಸ್ಥೆಗಳಿಂದ ಹೊರಬಂದಿರುವ ಮತಗಟ್ಟೆ ಸಮೀಕ್ಷೆಯ ಪ್ರಕಾರ ಬಹುತೇಕ, ಕೆ ಚಂದ್ರಶೇಖರ್ ರಾವ್ ಮತ್ತೆ ಮುಖ್ಯಮಂತ್ರಿಯಾಗಿ ಮುಂದುವರಿಯಲಿದ್ದಾರೆ.
ಮತಗಟ್ಟೆ ಸಮೀಕ್ಷೆಯ ಪ್ರಕಾರ, ಕೆಸಿಆರ್ ನೇತೃತ್ವದ ತೆಲಂಗಾಣ ರಾಷ್ಟ್ರೀಯ ಸಮಿತಿಗೆ (TRS), ಸರಕಾರ ರಚಿಸಲು ಬೇಕಾಗಿರುವ ಸಂಖ್ಯಾಬಲ ಸಿಗಲಿದೆ. ಮತಗಟ್ಟೆ ಸಮೀಕ್ಷೆ, ನಿಜವಾಗಿದ್ದೇ ಆಗಿದ್ದಲ್ಲಿ, ಯಾರ ಹಂಗೂ ಇಲ್ಲದೇ, ಟಿಆರ್ಎಸ್ ಮತ್ತೆ ಸರಕಾರ ರಚಿಸಲಿದೆ.
ಈ ನಡುವೆ, ಎದುರುಗಡೆ ಮಾತ್ರ ಕೆಸಿಆರ್, ಬಿಜೆಪಿಯನ್ನು ವಿರೋಧಿಸುತ್ತಾರೆ, ಒಳಗೊಳಗೆ ಅವರ ಬೆಂಬಲ ಬಿಜೆಪಿಗೆ ಎನ್ನುವ ಎಐಸಿಸಿ ಅಧ್ಯಕ್ಷ ರಾಹುಲ್ ಗಾಂಧಿಯವರ ಹೇಳಿಕೆಗೆ ಪುಷ್ಟಿ ನೀಡುವಂತೆ, ತೆಲಂಗಾಣ ಬಿಜೆಪಿ ಘಟಕದ ಅಧ್ಯಕ್ಷರು ಹೇಳಿಕೆಯನ್ನು ನೀಡಿದ್ದಾರೆ.
ಚಂದ್ರಶೇಖರ್ ರಾವ್ ಒಂದು ಗಟ್ಟಿಯಾದ ನಿರ್ಧಾರವನ್ನು ತೆಗೆದುಕೊಂಡರೆ, ನಮ್ಮ ಬೆಂಬಲ ಅವರ ಪಕ್ಷಕ್ಕಿರುತ್ತೆ ಎಂದು ಬಿಜೆಪಿ ರಾಜ್ಯ ಘಟಕದ ಅಧ್ಯಕ್ಷ ಕೆ ಲಕ್ಷ್ಮಣ್, ಹೈದರಾಬಾದಿನಲ್ಲಿ ಭಾನುವಾರ (ಡಿ 9), ಟಿಆರ್ಎಸ್ ಪಕ್ಷಕ್ಕೆ ಆಫರ್ ನೀಡಿದ್ದಾರೆ.
119 ಅಸೆಂಬ್ಲಿ ಸ್ಥಾನವನ್ನು ಹೊಂದಿರುವ ತೆಲಂಗಾಣ ಅಸೆಂಬ್ಲಿಗೆ ಸರಳ ಬಹುಮತದಿಂದ ಸರಕಾರ ರಚಿಸಲು 60ಸ್ಥಾನದ ಅವಶ್ಯಕತೆಯಿದೆ. ಏಳು ವಿವಿಧ ವಾಹಿನಿಗಳು/ಸಂಸ್ಥೆಗಳು, ನಡೆಸಿದ ಸಮೀಕ್ಷೆಯ ಪ್ರಕಾರ, TRS ಮತ್ತೆ ಅಧಿಕಾರಕ್ಕೆ ಬರಬಹುದು. ಆದರೂ ಬಿಜೆಪಿ ಮತ್ತು ಎಂಐಎಂ ನಿರ್ಣಾಯಕ ಪಾತ್ರವಹಿಸುವ ಸಾಧ್ಯತೆಯಿದೆ. ಹಾಗಾಗಿಯೇ, ಬಿಜೆಪಿ ನೀಡಿರುವ ಆಫರ್ ಇದು..

ಮೂರು ವಾಹಿನಿಗಳ ಸಮೀಕ್ಷೆ
ಏಳು ಸಂಸ್ಥಗಳಿಂದ ಹೊರಬಂದ ಎಕ್ಸಿಟ್ ಪೋಲ್ ಪ್ರಕಾರ, ನಾಲ್ಕು ವಾಹಿನಿಗಳು TRSಗೆ ಬಹುಮತ ನಿಶ್ಚಿತ ಎಂದಿವೆ, ಇನ್ನುಳಿದ ಮೂರು ವಾಹಿನಿಗಳ ಸಮೀಕ್ಷೆಯ ಪ್ರಕಾರ, TRSಗೆ ಇತರ ಪಕ್ಷಗಳ ಸಹಕಾರ ಅತ್ಯಗತ್ಯ.
ರಿಪಬ್ಲಿಕ್ ಟಿವಿ, ಜನ್ ಕೀ ಬಾತ್: 50-65 TRS, 38-52 ಕಾಂಗ್ರೆಸ್, 4-7 ಬಿಜೆಪಿ, 8-14 ಇತರರು
ಟೈಮ್ಸ್ ನೌ, CNX: 66 TRS, 37 ಕಾಂಗ್ರೆಸ್, 7 ಬಿಜೆಪಿ, 9 ಇತರರು
ಟಿವಿ 9 ತೆಲುಗು, ಆರಾ: 75-85 TRS, 25-35 ಕಾಂಗ್ರೆಸ್, 2-3 ಬಿಜೆಪಿ, 7-11 ಇತರರು
ಟಿವಿ 9, ಸಿಪಿಎಸ್ : 84-89 TRS, 19-21 ಕಾಂಗ್ರೆಸ್, 2 ಬಿಜೆಪಿ, 9 ಇತರರು

TRS ಮತ್ತು ಕಾಂಗ್ರೆಸ್ ನಡುವೆ ಜಿದ್ದಾಜಿದ್ದಿನ ಫೈಟ್
ಇನ್ನುಳಿದ ಮೂರು ಸಂಸ್ಥೆಗಳಿಂದ ಹೊರಬಂದಿರುವ ಸಮೀಕ್ಷೆಯ ಪ್ರಕಾರ, TRS ಮತ್ತು ಕಾಂಗ್ರೆಸ್ ನಡುವೆ ಜಿದ್ದಾಜಿದ್ದಿನ ಫೈಟ್ ನಡೆಯಲಿದೆ. ಸಮೀಕ್ಷೆಯ ಫಲಿತಾಂಶ ಹೀಗಿದೆ:
ರಿಪಬ್ಲಿಕ್ ಟಿವಿ, ಸಿವೋಟರ್: 48-60 TRS, 47-59 ಕಾಂಗ್ರೆಸ್, 5 ಬಿಜೆಪಿ, 1-13 ಇತರರು
ನ್ಯೂಶ್ ನೇಶನ್: 53-57 TRS, 51-55 ಕಾಂಗ್ರೆಸ್, 1-5 ಬಿಜೆಪಿ, 4-12 ಇತರರು
ನ್ಯೂಶ್ ಎಕ್ಸ್, ನೇತಾ: 57 TRS, 46 ಕಾಂಗ್ರೆಸ್, 6 ಬಿಜೆಪಿ, 10 ಇತರರು

ಬಿಜೆಪಿ ತೆಲಂಗಾಣ ರಾಜ್ಯ ಘಟಕದ ಅಧ್ಯಕ್ಷ ಕೆ ಲಕ್ಷ್ಮಣ್
ಮತಗಟ್ಟೆ ಸಮೀಕ್ಷೆಯನ್ನು ಉಲ್ಲೇಖಿಸಿ ಮಾತನಾಡುತ್ತಿದ್ದ ಬಿಜೆಪಿ ತೆಲಂಗಾಣ ರಾಜ್ಯ ಘಟಕದ ಅಧ್ಯಕ್ಷ ಕೆ ಲಕ್ಷ್ಮಣ್, ಕೆಸಿಆರ್ ತನ್ನ ಹಿಂದಿನ ನಿಲುವಿನಿಂದ ಹೊರಬರಬೇಕಾಗಿದೆ. ಅಸಾದುದ್ದೀನ್ ಮತ್ತು ಅಕ್ಬರುದ್ದೀನ್ ಓವೈಸಿ ನೇತೃತ್ವದ ಎಐಎಂಐಎಂ (ಎಂಐಎಂ) ಪಕ್ಷದ ಜೊತೆ, ಹೊಂದಾಣಿಕೆಗೆ ಮಂಗಳ ಹಾಡಿದರೆ, ಬಿಜೆಪಿ ಬೀಷರತ್ ಬೆಂಬಲ ನೀಡಲು ಸಿದ್ದ ಎನ್ನುವ ಹೇಳಿಕೆಯನ್ನು ನೀಡಿದ್ದಾರೆ.

ಬಿಜೆಪಿ ಬೆಂಬಲ ನೀಡುವ ಪ್ರಶ್ನೆಯೇ ಉದ್ಭವಿಸುದಿಲ್ಲ
TRS ತನ್ನ ನಿಲುವನ್ನು ಸ್ಪಷ್ಟಪಡಿಸಬೇಕಿದೆ. ಒಂದು ವೇಳೆ ಕೆಸಿಆರ್, ಎಂಐಎಂ ಜೊತೆಗೆ ಚುನಾವಣೋತ್ತರ ಹೊಂದಾಣಿಕೆ ಮಾಡಿಕೊಳ್ಳಲು ಮುಂದಾದರೆ, ಬಿಜೆಪಿ ಬೆಂಬಲ ನೀಡುವ ಪ್ರಶ್ನೆಯೇ ಉದ್ಭವಿಸುದಿಲ್ಲ. ಕಾಂಗ್ರೆಸ್ ಹೊರತು ಪಡಿಸಿ, ಯಾವುದೇ ಪಕ್ಷಕ್ಕೂ ಬಿಜೆಪಿ ಬೆಂಬಲ ನೀಡಲು ಸಿದ್ದ. ಈ ಬಗ್ಗೆ ಅಂತಿಮ ನಿರ್ಧಾರವನ್ನು ಬಿಜೆಪಿ ರಾಷ್ಟ್ರಾಧ್ಯಕ್ಷ ಅಮಿತ್ ಶಾ ತೆಗೆದುಕೊಳ್ಳಲಿದ್ದಾರೆ. - ಬಿಜೆಪಿ ತೆಲಂಗಾಣ ರಾಜ್ಯ ಘಟಕದ ಅಧ್ಯಕ್ಷ ಕೆ ಲಕ್ಷ್ಮಣ್.

ಕೆಸಿಆರ್ ನೇತೃತ್ವದ TRS ಪಕ್ಷ ಬಿಜೆಪಿಯ ಬಿಟೀಂ
ತೆಲಂಗಾಣದ ಚುನಾವಣಾ ಸಭೆಗಳಲ್ಲಿ ರಾಹುಲ್ ಗಾಂಧಿ ಮತ್ತು ಚಂದ್ರಬಾಬು ನಾಯ್ಡು, ಕೆಸಿಆರ್ ನೇತೃತ್ವದ TRS ಪಕ್ಷವನ್ನು ಬಿಜೆಪಿಯ ಬಿಟೀಂ ಎಂದು ಲೇವಡಿ ಮಾಡಿದ್ದರು. ಡಿಸೆಂಬರ್ ಎಂಟರಂದು ನಡೆದ ಅಸೆಂಬ್ಲಿ ಚುನಾವಣೆಯ ಫಲಿತಾಂಶ, ಮಂಗಳವಾರ (ಡಿ 11) ಹೊರಬೀಳಲಿದೆ. ಚುನಾವಣೆಗೆ ಕೆಲವೇ ದಿನಗಳ ಮುನ್ನ, ಚಂದ್ರಬಾಬು ನಾಯ್ಡು, ಕಾಂಗ್ರೆಸ್ಸಿಗೆ ಬೆಂಬಲವನ್ನು ಸೂಚಿಸಿದ್ದರು.












Click it and Unblock the Notifications