98 ಕೋಟಿ ರುಪಾಯಿಗೆ ನಕಲಿ ರಸೀದಿ ಸೃಷ್ಟಿಸಿ ಸಿಕ್ಕಿಬಿದ್ದ ವ್ಯಾಪಾರಿ
ಹೈದರಾಬಾದ್, ಡಿಸೆಂಬರ್ 29: ಮುಂಗಡ ಹಣವನ್ನು ಪಡೆದ ನಕಲಿ ರಸೀದಿ ಸೃಷ್ಟಿಸಿ 98 ಕೋಟಿ ರುಪಾಯಿ ಬ್ಯಾಂಕ್ ಗೆ ಜಮೆ ಮಾಡಿದ ಆಭರಣ ವ್ಯಾಪಾರಿಯನ್ನು ಬಂಧಿಸಲಾಗಿದೆ. ಈ ಪ್ರಕರಣದಲ್ಲಿ 65 ವರ್ಷದ ಕೈಲಾಶ್ ಚಂದ್ ಹಾಗೂ ಅವರ ಕುಟುಂಬ ಸದಸ್ಯರನ್ನು ವಶಕ್ಕೆ ಪಡೆಯಲಾಗಿದೆ.
ನೋಟು ನಿಷೇಧದ ನಂತರ ಗುಪ್ತ ಮತ್ತು ಅವರ ಮಕ್ಕಳಾದ ನಿತಿನ್-ನಿಖಿಲ್ ಹಾಗೂ ಸೊಸೆ ನೇಹಾ ಮತ್ತಿತರರು ಯೋಜನೆ ರೂಪಿಸಿ, ತಮ್ಮ ಬಳಿಯಿದ್ದ ಕಪ್ಪು ಹಣವನ್ನು ಬ್ಯಾಂಕ್ ಗೆ ಜಮೆ ಮಾಡಲು ನಿಶ್ಚಯಿಸಿದ್ದಾರೆ. ನಕಲಿ ರಸೀದಿ ಸೃಷ್ಟಿಸಿ, ತಾವು ಲಾಭ ಗಳಿಸಲು ಯತ್ನಿಸಿದ್ದಾರೆ. ಇದರಿಂದ ಸರಕಾರಕ್ಕೆ ಅಪಾರ ಪ್ರಮಾಣದ ನಷ್ಟವುಂಟಾಗಿದೆ.[ಡಿಸೆಂಬರ್ 31ರಂದು ದೇಶ ಉದ್ದೇಶಿಸಿ ಪ್ರಧಾನಿ ಮೋದಿ ಮಾತು!]
ಆರೋಪಿಗಳು ಆಭರಣ ತಯಾರಿಗಾಗಿ ನಕಲಿ ಹಾಗೂ ಕಾಲ್ಪನಿಕ ಹೆಸರುಗಳಲ್ಲಿ ರಸೀದಿ ತಯಾರಿಸಿದ್ದಾರೆ. ಸುಮಾರು 3,100 ಗ್ರಾಹಕರಿಂದ 57.85 ಕೋಟಿ ರುಪಾಯಿ ಮುಂಗಡ ಪಡೆದಿರುವುದಾಗಿ ತಮ್ಮದೇ ಸಂಸ್ಥೆ ಮುಸದ್ದಿಲಾಲ್ ಜೆಮ್ಸ್ ಮತ್ತು ಜ್ಯುವೆಲರ್ಸ್ ಹೆಸರಿನಲ್ಲಿ ದಾಖಲೆ ಸೃಷ್ಟಿಸಿದ್ದಾರೆ.
ಇದರ ಜತೆಗೆ 40 ಕೋಟಿ ರುಪಾಯಿಯಷ್ಟು ಇನ್ನೊಂದು ಸಂಸ್ಥೆ ವೈಷ್ಣವಿ ಬುಲಿಯನ್ ಪ್ರೈವೆಟ್ ಲಿಮಿಟೆಡ್ ಹೆಸರಲ್ಲಿ 2,100 ಗ್ರಾಹಕರಿಂದ ಮುಂಗಡ ಪಡೆದ ದಾಖಲೆ ಸೃಷ್ಟಿ ಮಾಡಿದ್ದಾರೆ. ಈ ಎಲ್ಲ ಹಣವನ್ನು ನವೆಂಬರ್ 8ರ ರಾತ್ರಿ 9ರಿಂದ 12ರ ಮಧ್ಯೆ ಪಡೆದಿರುವುದಾಗಿ ತೋರಿಸಲಾಗಿದೆ. ಈ ಎಲ್ಲ ಹಣವನ್ನು ಪಂಜಗುಟ್ಟದ ಎಸ್ ಬಿಐ ಹಾಗೂ ಬಂಜಾರಹಿಲ್ಸ್ ನಲ್ಲಿರುವ ಆಕ್ಸಿಸ್ ಬ್ಯಾಂಕ್ ನಲ್ಲಿ ಜಮೆ ಮಾಡಿದ್ದಾರೆ.