ಹುಟ್ಟುಹಬ್ಬ ಆಚರಣೆ ನೆಪದಲ್ಲಿ 12 ವರ್ಷದ ಬಾಲಕಿ ವಿವಾಹ
ಹೈದರಾಬಾದ್, ಮೇ 16: ಹುಟ್ಟು ಹಬ್ಬ ಆಚರಣೆ ನೆಪದಲ್ಲಿ 12 ವರ್ಷದ ಬಾಲಕಿ ವಿವಾಹವನ್ನು 35 ವರ್ಷದ ವ್ಯಕ್ತಿಯೊಂದಿಗೆ ಮಾಡಿದ ಘಟನೆ ನಡೆದಿದೆ. ತೆಲಂಗಾಣದ ರಂಗಾರೆಡ್ಡಿ ಜಿಲ್ಲೆಯಲ್ಲಿ ಪೋಷಕರ ಸಮ್ಮುಖದಲ್ಲಿ ಈ ಬಾಲ್ಯ ವಿವಾಹವಾಗಿದೆ.
ಹುಟ್ಟುಹಬ್ಬ ಎಂದರೆ ಮಕ್ಕಳಿಗೆ ತುಂಬಾ ಸಂಭ್ರಮ. ತಮ್ಮ ಸ್ನೇಹಿತರು ಮತ್ತು ಸಂಬಂಧಿಕರಿಗೆಲ್ಲಾ ಆಮಂತ್ರಣ ನೀಡಿರುತ್ತಾರೆ. ಇದರಲ್ಲಿ ಉಂಟಾಗುವ ಆನಂದ ಯಾವುದಕ್ಕೂ ಸರಿಸಮನಾಗಿರುವುದಿಲ್ಲ. ಬಾಲ್ಯವಿವಾಹವಾಗಿರುವ 12 ವರ್ಷದ ಬಾಲಕಿ ಸಹ ಸಂಭ್ರಮದಲ್ಲಿದ್ದಳು. ಆದರೆ ಪೋಷಕರು ವಿವಾಹ ಮಾಡಿಸಿದ್ದಾರೆ.
ಚನ್ನಪಟ್ಟಣ; ಬಾಲ್ಯ ವಿವಾಹ ತಡೆದ ಅಧಿಕಾರಿಗಳು, ಬಾಲಕಿ ರಕ್ಷಣೆ
ಇದು ಮದುವೆಯ ಸಿದ್ಧತೆ ಎಂದು ತಿಳಿದ ಬಾಲಕಿ ತಪ್ಪಿಸಿಕೊಂಡು ಉಲ್ಲಾಳದಲ್ಲಿರುವ ಸಂಬಂಧಿಕರ ಮನೆಗೆ ತೆರಳಿದ್ದಳು. ಆದರೆ ಪೋಷಕರು ತಮ್ಮ ತಪ್ಪನ್ನು ತಿದ್ದಿಕೊಳ್ಳುವ ಬದಲು ಮಗಳಿಗೆ ಆಶ್ರಯ ನೀಡಿದ್ದ ಸಂಬಂಧಿಕರೊಂದಿಗೆ ಜಗಳ ಮಾಡಿ, ಮಗಳನ್ನು ಮನೆಗೆ ಕರೆತಂದಿದ್ದಾರೆ. ಬಳಿಕ ವಿವಾಹ ಮಾಡಿ ಮುಗಿಸಿದ್ದಾರೆ.
ಮಗುವಿನ ಗೋಳಾಟ ನೋಡಿದ ಸಂಬಂಧಿಕರು ತಕ್ಷಣವೇ ಸ್ಥಳೀಯ ಐಸಿಡಿಎಸ್ ಅಧಿಕಾರಿಗಳಿಗೆ ಮಾಹಿತಿ ನೀಡಿದ್ದಾರೆ. ಅಧಿಕಾರಿಗಳು ಘಟನೆ ನಡೆದಿದ್ದ ಪಾಪಿರೆಡ್ಡಿಗುಡ್ಡದಲ್ಲಿದ್ದ ಸಂತ್ರಸ್ತೆಯ ಮನೆ ತಲುಪಿದ್ದಾರೆ. ಅಲ್ಲಿ ಬಾಲಕಿ ತಮ್ಮ ಅತ್ತೆ ಹುಟ್ಟಿದ ಹಬ್ಬದ ಹೆಸರಿನಲ್ಲಿ ವಿವಾಹ ಮಾಡಿರುವುದಾಗಿ ಗ್ರಾಮಸ್ಥರಿಗೆ ಮತ್ತು ಅಧಿಕಾರಿಗೆ ತಿಳಿಸಿದ್ದಾಳೆ.
ಪ್ರಕರಣ ದಾಖಲು; ಬಾಲ್ಯವಿವಾಹದ ಕುರಿತು ಐಸಿಡಿಎಸ್ ಸಿಬ್ಬಂದಿ ನೀಡಿದ ದೂರಿನ ಮೇರೆಗೆ ರಂಗಾರೆಡ್ಡಿ ಜಿಲ್ಲಾ ಪೊಲೀಸರು ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೊಂಡಿದ್ದಾರೆ. ಆದರೆ ಸಂತ್ರಸ್ತೆಯನ್ನು ಮನೆಯಲ್ಲಿಯೇ ಇರಿಸಬೇಕೆ ಅಥವಾ ರಕ್ಷಣೆಗಾಗಿ ಬಾಲಮಂದಿರಕ್ಕೆ ಸ್ಥಳಾಂತರಿಸಬೇಕೆ? ಎಂದು ಅಧಿಕಾರಿಗಳು ಚರ್ಚಿಸುತ್ತಿದ್ದಾರೆ.
ಬಾಲ್ಯ ವಿವಾಹದಂತಹ ಪ್ರಕರಣಗಳು ಹೆಚ್ಚಾಗಲು ರೂಢಿ ಸಂಪ್ರದಾಯ ಪ್ರಮುಖ ಕಾರಣ. ಜೊತೆಗೆ ಜನರಲ್ಲಿ ಕಾನೂನಿನ ಅರಿವಿಲ್ಲದಿರುವುದು ಮುಖ್ಯ ಕಾರಣವಾಗಿದೆ. ಪೊಲೀಸ್ ಠಾಣೆ, ಕಾನೂನು, ಕೋರ್ಟ್ ಎಂದು ಹೆದರುವ ಜನರು ಬಾಲ್ಯ ವಿವಾಹ ನಡೆಯುತ್ತಿದ್ದರೂ ಸಹ ಮಾಹಿತಿ ನೀಡದೇ ಸುಮ್ಮನಾಗುತ್ತಾರೆ.
ವಿವಾಹದ ವಯಸ್ಸು ಏರಿಕೆ; ಕಾನೂನಿನ ಪ್ರಕಾರ ಗಂಡಿಗೆ ವಿವಾಹದ ವಯಸ್ಸನ್ನು 21 ಮತ್ತು ಹೆಣ್ಣಿಗೆ 18 ನಿಗದಿಯಾಗಿತ್ತು. ಆದರೆ ಬಾಲ್ಯವಿವಾಹವನ್ನು ನಿಗ್ರಹಿಸುವ ನಿಟ್ಟಿನಲ್ಲಿ ಕೇಂದ್ರ ಸರ್ಕಾರ ಹೆಣ್ಣುಮಕ್ಕಳ ವಿವಾಹದ ವಯೋಮಿತಿಯನ್ನು 18 ರಿಂದ 21ಕ್ಕೆ ಏರಿಕೆ ಮಾಡಿದೆ. ಆದರೂ ಬಾಲ್ಯವಿವಾಹಗಳು ನಡೆಯುತ್ತಲೇ ಇವೆ.
ಹೆಣ್ಣುಮಗುವಿನ ವಯಸ್ಸು ತಿಳಿದಿದ್ದರೂ ವಿವಾಹವಾಗುವ ವ್ಯಕ್ತಿ, ಬಾಲ್ಯ ವಿವಾಹವನ್ನು ಏರ್ಪಡಿಸುವ, ನೆರವೇರಿಸುವ ಹಾಗೂ ಇದಕ್ಕೆ ಕುಮ್ಮಕ್ಕು ನೀಡುವ ಯಾವುದೇ ವ್ಯಕ್ತಿ ಅಥವಾ ಸಂಸ್ಥೆ, ಮಗುವಿನ ಪೋಷಕರು ಅಥವಾ ಗಾರ್ಡಿಯನ್ಸ್ ಅಥವಾ ಮಗುವಿನ ಜವಾಬ್ದಾರಿಯನ್ನು ಹೊತ್ತಿರುವ ಯಾವುದೇ ವ್ಯಕ್ತಿ ಅಥವ ಸಂಸ್ಥೆ ಹಾಗೂ ಈ ವಿವಾಹ ಕಾರ್ಯಕ್ರಮದಲ್ಲಿ ಭಾಗವಹಿಸುವವರೂ ಕೂಡ ಬಾಲ್ಯ ವಿವಾಹ ಪ್ರಕರಣದಲ್ಲಿ ತಪ್ಪಿತಸ್ಥರಾಗುತ್ತಾರೆ.