ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಜಗವನ್ನೇ ಮರೆಸಿದ ತಿರುಮಲ 'ಬ್ರಹ್ಮೋತ್ಸವ'

By Prasad
|
Google Oneindia Kannada News

ತಿರುಪತಿ, ಅ. 7 : ತೆಲಂಗಾಣ ಮತ್ತು ಸೀಮಾಂಧ್ರ ವಿಭಜನೆಯ ಕಿಡಿ ಹೊತ್ತಿ ಇಡೀ ರಾಜ್ಯವನ್ನು ದಹಿಸುತ್ತಿರುವ ಸಮಯದಲ್ಲಿ, ಪ್ರತಿವರ್ಷ ನವರಾತ್ರಿಯ ಸಂದರ್ಭದಲ್ಲಿ ನಡೆಸಲಾಗುವ 'ಬ್ರಹ್ಮೋತ್ಸವ' ತಿರುಮಲದಲ್ಲಿ ಸಾಂಗೋಪಾಂಗವಾಗಿ ಸಾಗಿದೆ. ರಾಜ್ಯದೆಲ್ಲೆಡೆ ಕಿಡಿಗೇಡಿಗಳು ಸಿಕ್ಕಿದ್ದಕ್ಕೆಲ್ಲ ಬೆಂಕಿ ಹಚ್ಚುತ್ತಿದ್ದರೆ ತಿರುಮಲದಲ್ಲಿ ಭಕ್ತಾದಿಗಳು ಕೋಲಾಟವಾಡುತ್ತ ಬಾಲಾಜಿಯ ನಾಮಸ್ಮರಣೆಯಲ್ಲಿ ಇಡೀ ಜಗತ್ತನ್ನೇ ಮರೆತಿದ್ದಾರೆ.

ಸೀಮಾಂಧ್ರದ ಸಂಸದರ ರಾಜೀನಾಮೆ, ಜೈಲಿಂದ ಜಾಮೀನು ಪಡೆದು ಬಂದಿರುವ ಜಗನ್ ರೆಡ್ಡಿ ಆಮರಣಾಂತ ನಿರಶನ, ಭುಗಿಲೇಳುತ್ತಿರುವ ಹಿಂಸಾಚಾರಗಳ ಹಿನ್ನೆಲೆಯಲ್ಲಿ ಆಂಧ್ರಪ್ರದೇಶವನ್ನು ರಾಷ್ಟ್ರಪತಿ ಆಳ್ವಿಕೆಗೆ ವಹಿಸಿಕೊಡುವ ಯೋಚನೆಯಲ್ಲಿ ಕೇಂದ್ರ ಸರಕಾರ ಚಿಂತಿಸುತ್ತಿದ್ದರೆ, ತಿರುಮಲದಲ್ಲಿ ಜಗನ್ ನಾಟಕ ನೋಡುತ್ತಿರುವ ಏಳುಕೊಂಡಲವಾಡ ಗೋವಿಂದ ಭಕ್ತರ ಭಾವಭಕುತಿಯಲ್ಲಿ ತೊಯ್ದು ತೊಪ್ಪೆಯಾಗಿದ್ದಾನೆ.

ಸೀಮಾಂಧ್ರ ಬಂದ್ ನಿಂದಾಗಿ ತಿರುಪತಿ ಸಂಚಾರ ವ್ಯವಸ್ಥೆ ದಿಕ್ಕುತಪ್ಪಿದ್ದರೂ ಲಕ್ಷಾಂತರ ಬಾಲಾಜಿ ಭಕ್ತರು ತಿರುಮಲದಲ್ಲಿ 'ಬ್ರಹ್ಮೋತ್ಸವ'ದಲ್ಲಿ ಪಾಲ್ಗೊಳ್ಳುತ್ತಿದ್ದಾರೆ. ಜನರ ಭಕ್ತಿಗೆ, ಆನಂದಕ್ಕೆ ಪಾರವೇ ಇಲ್ಲ. ಸಾಕ್ಷಾತ್ ವೆಂಕಟೇಶ್ವರನೇ ತಮ್ಮ ಮುಂದೆ ಪ್ರತ್ಯಕ್ಷವಾದಂತೆ ಭಕ್ತಾದಿಗಳು ಆನಂದಸಾಗರದಲ್ಲಿ ಕಳೆದುಹೋಗಿದ್ದಾರೆ. ದೇಶದ ಎಲ್ಲ ಕಡೆಗಳಿಂದ ಭಕ್ತಾದಿಗಳು ತಿರುಪತಿಯಲ್ಲಿ ಜಮಾಯಿಸಿದ್ದಾರೆ. [ತಿರುಮಲ ಬ್ರಹ್ಮೋತ್ಸವದ ಚಿತ್ರಪಟ]

ನವರಾತ್ರಿ ಆರಂಭವಾದ ಅ.5ರ ಶನಿವಾರದಿಂದ 9 ದಿನಗಳ 'ಬ್ರಹ್ಮೋತ್ಸವ' ಸೋಮವಾರ ಮೂರನೇ ದಿನಕ್ಕೆ ಕಾಲಿಟ್ಟಿದೆ. ಸಿಂಹವನ್ನು ತನ್ನ ವಾಹನವನ್ನಾಗಿ ಭಕ್ತರಿಗೆ ದರುಶನ ನೀಡುತ್ತಿರುವ ವೆಂಕಟೇಶ್ವರ, ದುಷ್ಟರನ್ನು ಶಿಕ್ಷಿಸಿ, ಶಿಷ್ಟರನ್ನು ರಕ್ಷಿಸುತ್ತಾನೆ ಎಂದು ಜನರು ನಂಬುತ್ತಾರೆ. ಲಕ್ಷಾಂತರ ಜನರನ್ನು ಸೆಳೆದಿರುವ ಬ್ರಹ್ಮೋತ್ಸವದ ವರ್ಣರಂಜಿತ ಚಿತ್ರಗಳು ಮುಂದಿವೆ ನೋಡಿರಿ.

ಬ್ರಹ್ಮೋತ್ಸವ ರದ್ದು? : ಇದೀಗ ಬಂದಿರುವ ಸುದ್ದಿಯ ಪ್ರಕಾರ, ತೆಲಂಗಾಣ ಪರ ಮತ್ತು ವಿರೋಧದ ಹೋರಾಟ ತೀವ್ರಸ್ವರೂಪ ಪಡೆದುಕೊಳ್ಳುತ್ತಿರುವ ಮತ್ತು ಆಂಧ್ರಪ್ರದೇಶ ತೀವ್ರ ವಿದ್ಯುತ್ ಕೊರತೆ ಅನುಭವಿಸುತ್ತಿರುವ ಹಿನ್ನೆಲೆಯಲ್ಲಿ ಜಗತ್ ಪ್ರಸಿದ್ಧ 'ಬ್ರಹ್ಮೋತ್ಸವ' ಕಾರ್ಯಕ್ರಮವನ್ನು ಹಠಾತ್ತನೆ ರದ್ದುಪಡಿಸಲಾಗುವುದು ಎಂದು ಹೇಳಲಾಗುತ್ತಿದೆ. ಈ ಸುದ್ದಿ ಭಕ್ತಾದಿಗಳಲ್ಲಿ ಸಾಕಷ್ಟು ಆತಂಕವನ್ನು ಸೃಷ್ಟಿಸಿದೆ.

ಬ್ರಹ್ಮನಿಂದಲೇ ಲಾರ್ಡ್ ಬಾಲಾಜಿಯ ಪೂಜೆ

ಬ್ರಹ್ಮನಿಂದಲೇ ಲಾರ್ಡ್ ಬಾಲಾಜಿಯ ಪೂಜೆ

ದುಷ್ಟರನ್ನು ಶಿಕ್ಷಿಸಿ, ಶಿಷ್ಟರನ್ನು ರಕ್ಷಿಸುತ್ತಿರುವ ವೆಂಕಟೇಶ್ವರನನ್ನು ಸೃಷ್ಟಿಕರ್ತ ಬ್ರಹ್ಮನೇ ಸ್ವತಃ ಪವಿತ್ರ ಪುಷ್ಕರಣಿಯ ಪಕ್ಕದಲ್ಲಿ ಪೂಜಿಸುತ್ತಾನೆ ಎಂಬ ಕಥೆ ಜನಜನಿತವಾಗಿದೆ. ಇದಕ್ಕಾಗಿಯೇ ನವರಾತ್ರಿಯ ಸಂದರ್ಭದಲ್ಲಿ ಪ್ರತಿವರ್ಷ ಇಲ್ಲಿ ಬ್ರಹ್ಮೋತ್ಸವವನ್ನು ಆಯೋಜಿಸಲಾಗುತ್ತದೆ. ಈ ಸಮಯದಲ್ಲಿ ಬಾಲಾಜಿಯ ವಾಹನ ಗರುಡ ಗರ್ಭಗುಡಿಯನ್ನು ಸುತ್ತುಹೊಡಿಯುತ್ತ ಇತರ ದೇವತೆಗಳನ್ನು ಬ್ರಹ್ಮೋತ್ಸವಕ್ಕೆ ಆಹ್ವಾನಿಸುತ್ತಾನೆ ಎಂಬ ಪ್ರತೀತಿಯೂ ಇದೆ.

ಭಕ್ತರ ಆನಂದಕ್ಕೆ ಪಾರವೇ ಇರಲಿಲ್ಲ

ಭಕ್ತರ ಆನಂದಕ್ಕೆ ಪಾರವೇ ಇರಲಿಲ್ಲ

ತಾನೇ ಸ್ವತಃ ಹೊರಬಂದು ಭಕ್ತರ ನಿವೇದನೆಗಳಿಗೆ ಕಿವಿಗೊಡುವ ಗೋವಿಂದನ ಆರಾಧನೆಗೆ ಕೈಯಲ್ಲಿ ಆರತಿ ತಟ್ಟೆ ಹಿಡಿದು ಬಂದ ಮಹಿಳೆ.

ಏಳುಕೊಂಡವಾಡ ಗೋವಿಂದಾ ಗೋವಿಂದ

ಏಳುಕೊಂಡವಾಡ ಗೋವಿಂದಾ ಗೋವಿಂದ

ಸಂಕಟ ಬಂದಾಗ ವೆಂಕಟರಮಣ ಎಂಬುದು ಜನಜನಿತ ಮಾತು. ತಮ್ಮ ಕಷ್ಟಗಳನ್ನೆಲ್ಲಾ ಶ್ರೀನಿವಾಸನು ಪೂರೈಸುತ್ತಾನೆ, ಕೇಳಿದ್ದೆಲ್ಲವನ್ನು ಕೊಡುತ್ತಾನೆ ಎಂದೂ ಜನರು ನಂಬುತ್ತಾರೆ. ಇಲ್ಲಿ ನೋಡಿ ಮಹಿಳೆಯರು ಭಕ್ತವತ್ಸಲವನ್ನು ಕೊಂಡಾಡುತ್ತಿರುವ ಪರಿ.

ನರ್ತನ ಸೇವೆಯಲ್ಲಿ ನಿರತರಾಗಿರುವ ಭಕ್ತರು

ನರ್ತನ ಸೇವೆಯಲ್ಲಿ ನಿರತರಾಗಿರುವ ಭಕ್ತರು

ತಿರುಮಲದಲ್ಲಿ ಹಲವಾರು ಸಾಂಸ್ಕೃತಿಕ ಕಾರ್ಯಕ್ರಮಗಳನ್ನು ಆಯೋಜಿಸಲಾಗಿದ್ದು, ತಂಡೋಪತಂಡವಾಗಿ ಆಗಮಿಸಿರುವ ಭಕ್ತರು ನರ್ತಿಸಿ ವೆಂಕಟೇಶನನ್ನು ಕೊಂಡಾಡುತ್ತಿದ್ದಾರೆ.

ತಿರುಪತಿ ಏಳಮಲೆ ವೆಂಕಟೇಸಾ

ತಿರುಪತಿ ಏಳಮಲೆ ವೆಂಕಟೇಸಾ

ಅದೇನೇನು ಹರಕೆಗಳನ್ನು ಭಕ್ತಾದಿಗಳು ಹೊತ್ತಿರುತ್ತಾರೋ ಬಲ್ಲವರಾರು? ಹಲವಾರು ಭಕ್ತರು ಮುಡಿ ನೀಡುವ ಹರಕೆಯನ್ನೂ ಹೊತ್ತಿರುತ್ತಾರೆ. ಒಟ್ಟಿನಲ್ಲಿ ಹರಕೆ ಹೊತ್ತ ಭಕ್ತಾದಿಗಳ ಇಷ್ಟಾರ್ಥಿಗಳೆಲ್ಲವೂ ಸಿದ್ಧಿಯಾಗಲಿ.

ಬಳ್ಳಿ ಬಾಲೆಯರೆ ಕೋಲಿದ್ದರೆ ಕೋಲಾಟ

ಬಳ್ಳಿ ಬಾಲೆಯರೆ ಕೋಲಿದ್ದರೆ ಕೋಲಾಟ

ಭಜನಾ ಮಂಡಳಿಗಳು, ಡ್ರಾನ್ಸ್ ಟ್ರೂಪ್ ಗಳು, ಹಲವಾರು ಮಹಿಳಾ ಮಂಡಳಿಗಳು ತಿರುಪತಿಯಲ್ಲಿ ಜಮಾಯಿಸಿವೆ. ಬಾಲಾಜಿ ಮೆರವಣಿಗೆ ನಡೆಯುತ್ತಿದ್ದರೆ ಮುಂದುಗಡೆ ಕೋಲಾಟವಾಡುತ್ತ ಭಕ್ತರನ್ನು ರಂಜಿಸುತ್ತಿರುವ ಮಹಿಳಾಮಣಿಗಳು.

ಉಗ್ರ ಸ್ವರೂಪಿಯ ವೇಷಧಾರಿ ಭಕ್ತ

ಉಗ್ರ ಸ್ವರೂಪಿಯ ವೇಷಧಾರಿ ಭಕ್ತ

ಕೃಷ್ಣಜನ್ಮಾಷ್ಟಮಿಯ ದಿನ ಕೃಷ್ಣನ ವೇಷ ಧರಿಸಿದಂತೆ ಬ್ರಹ್ಮೋತ್ಸವದ ಸಂದರ್ಭದಲ್ಲಿ, ಹಿರಣ್ಯಕಶಿಪುವನ್ನು ಸಂಹರಿಸಿದ ಉಗ್ರಸ್ವರೂಪಿ ನರಸಿಂಹನ ವೇಷತೊಟ್ಟ ಭಕ್ತನೊಬ್ಬ ಮನರಂಜನೆ ನೀಡುತ್ತಿದ್ದಾನೆ.

ಮಂತ್ರ ಪಠಿಸುತ್ತಿರುವ ವಿಪ್ರರು

ಮಂತ್ರ ಪಠಿಸುತ್ತಿರುವ ವಿಪ್ರರು

ಸಿಂಹನನ್ನು ವಾಹನವನ್ನಾಗಿ ಮಾಡಿಕೊಂಡು ಮೆರವಣಿಗೆಯಲ್ಲಿ ಬರುತ್ತಿರುವ ಬಾಲಾಜಿಯನ್ನು ಪರಿಪರಿಯಾಗಿ ಸ್ತುತಿಸುತ್ತಿರುವ ವಿಪ್ರವರ್ಯರು. ಏಕಪ್ರಕಾರವಾಗಿ ವಿಪ್ರರು ಮಂತ್ರ ಪಠಿಸುವುದನ್ನು ಕೇಳುವುದೇ ಒಂದು ಆನಂದ.

ಬ್ರಹ್ಮೋತ್ಸವಕ್ಕೆ ಬಂದ ಗಣ್ಯಾತಿಗಣ್ಯರು

ಬ್ರಹ್ಮೋತ್ಸವಕ್ಕೆ ಬಂದ ಗಣ್ಯಾತಿಗಣ್ಯರು

ನವರಾತ್ರಿಯಲ್ಲಿ ನಡೆಯುವ ಸಂಭ್ರಮದ ಬ್ರಹ್ಮೋತ್ಸವ ವೀಕ್ಷಿಸಲು ಟಿಟಿಡಿ ಚೇರ್ಮನ್ ಕೆ. ಬಾಪಿ ರಾಜು, ಎಕ್ಸಿಕ್ಯೂಟಿವ್ ಆಫೀಸರ್ ಎಂ.ಜಿ. ಗೋಪಾಲ್, ಜೆಇಓ ಶ್ರೀನಿವಾಸ ರಾವ್ ಮುಂತಾದವರು ಸಂಸಾರ ಸಮೇತರಾಗಿ ಬಂದು ಬಾಲಾಜಿಯ ಕೃಪೆಗೆ ಪಾತ್ರರಾದರು.

ಸಿಂಹ ವಾಹನದಲ್ಲಿ ರಾರಾಜಿಸುತ್ತಿರುವ ಬಾಲಾಜಿ

ಸಿಂಹ ವಾಹನದಲ್ಲಿ ರಾರಾಜಿಸುತ್ತಿರುವ ಬಾಲಾಜಿ

ಬ್ರಹ್ಮೋತ್ಸವದ 9 ದಿನಗಳಲ್ಲಿಯೂ ಒಂದೊಂದು ದಿನ ಒಂದು ವಾಹನದಲ್ಲಿ ವೆಂಕಟೇಶ್ವರ ದೇವರು ಕುಳಿತು ಮೆರವಣಿಗೆಯಲ್ಲಿ ಹೊರಡುತ್ತಾರೆ. ಮೂರನೇ ದಿನ ನರಸಿಂಹ ವಾಹನದಲ್ಲಿ ಬಾಲಾಜಿ ಇರುವುದು.

ಮೂರನೇ ದಿನ ಮತ್ತೊಂದು ಮೆರವಣಿಗೆ

ಮೂರನೇ ದಿನ ಮತ್ತೊಂದು ಮೆರವಣಿಗೆ

ನವರಾತ್ರಿಯ ಮೂರನೇ ದಿನ ಸಂಜೆ ಮತ್ತೊಂದು ಮೆರವಣಿಗೆಯನ್ನು ಆಯೋಜಿಸಲಾಗುತ್ತದೆ. ಈ ಬಾರಿ ಶ್ರೀದೇವಿ ಮತ್ತು ಭೂದೇವಿಯರನ್ನು ಅಕ್ಕಪಕ್ಕದಲ್ಲಿ ಕುಳ್ಳಿರಿಸಿಕೊಂಡು ಬಾಲಾಜಿಯು ಸಂಭ್ರಮಿಸುತ್ತಾನೆ. ಮುತ್ತಿನಲ್ಲಿ ಅಲಂಕರಿಸಿದ ಶ್ರೀದೇವಿ ಭೂದೇವಿಯರು ಬಲು ಸುಂದರವಾಗಿ ಕಾಣುತ್ತಿರುತ್ತಾರೆ.

ವಯಸ್ಸಿನ ಹಂಗಿಲ್ಲದೆ ಕುಣಿದು ನಲಿಯುವ ಭಕ್ತರು

ವಯಸ್ಸಿನ ಹಂಗಿಲ್ಲದೆ ಕುಣಿದು ನಲಿಯುವ ಭಕ್ತರು

ಇಲ್ಲಿ ಬರುವ ಭಕ್ತರಿಗೆ ವಯಸ್ಸಿನ ಹಂಗೆಂಬುದೇ ಇರುವುದಿಲ್ಲ. ಇಡೀ ಜಗತ್ತನ್ನೇ ಮರೆತು, ತಮಗೆ ವಯಸ್ಸಾಗಿದೆ ಎಂಬುದನ್ನೂ ಮರೆತು ಕುಣಿದು ಕುಪ್ಪಳಿಸಿಬಿಡುತ್ತಾರೆ. ಇಲ್ಲಿ ನೋಡಿ ಆನಂದತುಂದಿಲರಾಗಿರುವ ದಂಪತಿಗಳು ಲೇಝೀಮ್ ಆಟವಾಡುತ್ತ ನಲಿದಾಡುತ್ತಿದ್ದಾರೆ.

English summary
Tirumala Brahmotsavam is an annual festival at Tirumala Lord Venkateswara Temple celebrated with fervor for nine days in the month October during Navaratri. The celebration attracts pilgrims and tourists from all parts of India and across the world.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X