ಸೀನಿಯರ್ಸ್ ಗೆ ಬುದ್ಧಿ ಹೇಳಿ, ಪ್ರಾಣತೆತ್ತ ನತದೃಷ್ಟ ವಿದ್ಯಾರ್ಥಿ
ಹೈದರಾಬಾದ್, ನ.30: ಹುಡುಗಿಯರನ್ನು ಟೀಸ್ ಮಾಡಬೇಡಿ ಪ್ಲೀಸ್ ಎಂದು ಸೀನಿಯರ್ಸ್ ಮುಂದೆ ಕೈಜೋಡಿಸಿದ 19 ವರ್ಷ ವಯಸ್ಸಿನ ವಿದ್ಯಾರ್ಥಿಯನ್ನು ಚೆಚ್ಚಿ ಕೊಂದಿರುವ ಘಟನೆ ನಡೆದಿದೆ.
19 ವರ್ಷ ವಯಸ್ಸಿನ ಕೆ.ಎಸ್ ಹರ್ಷವರ್ಧನ್ ರಾವ್ ಎಂಬ ವಿದ್ಯಾರ್ಥಿಯೇ ಕೊಲೆಯಾದ ನತದೃಷ್ಟ. ಹರ್ಷವರ್ಧನ್ ನನ್ನು ಆತನ ಸೀನಿಯರ್ಸ್ ಕ್ಲಾಸ್ ರೂಮಿನಲ್ಲೇ ಚೆಚ್ಚಿ ಕೊಂದಿದ್ದಾರೆ. ಕೋಟಿ ಪ್ರದೇಶದಲ್ಲಿರುವ ಪ್ರಗತಿ ಮಹಾವಿದ್ಯಾಲಯದಲ್ಲಿ ಶನಿವಾರ ವಿದ್ಯಾರ್ಥಿಗಳ ನಡುವಿನ ಜಗಳ ಕೊಲೆಯಲ್ಲಿ ಅಂತ್ಯ ಕಂಡಿದೆ.
ಸೀನಿಯರ್ಸ್ ಪದೇ ಪದೇ ತನ್ನ ತರಗತಿಯ ವಿದ್ಯಾರ್ಥಿನಿಯೊಬ್ಬಳನ್ನು ಕಿಚಾಯಿಸುತ್ತಿದ್ದ. ಹರ್ಷವರ್ಧನ್ರಾವ್ ಈ ಬಗ್ಗೆ ಸತೀಶ್ ಕೋಡ್ಕರ್(22) ಎಂಬ ಸೀನಿಯರ್ ವಿದ್ಯಾರ್ಥಿಯನ್ನು ಪ್ರಶ್ನಿಸಿದ್ದಾನೆ. ಆತನ ವರ್ತನೆಯನ್ನು ವಿರೋಧಿಸಿದ್ದಾನೆ. ಇದರಿಂದ ಕೋಪಗೊಂಡ ಆ ಹಿರಿಯ ವಿದ್ಯಾರ್ಥಿ ತನಗೆ ಬುದ್ಧಿ ಹೇಳಿದ ಹರ್ಷವರ್ಧನ್ನನ್ನು ಹೊಡೆದಿದ್ದಾನೆ. ಶನಿವಾರ ತರಗತಿಗೆ ನುಗ್ಗಿದ ಹಿರಿಯ ವಿದ್ಯಾರ್ಥಿಗಳ ಗುಂಪು, ಹರ್ಷವರ್ಧನ್ನನ್ನು ಹಿಗ್ಗಾಮುಗ್ಗಾ ಥಳಿಸಿದೆ ಮುಂದೆ ನಡೆದಿದ್ದು ದುರಂತ.. ಘಟನೆಯ ಇನ್ನಷ್ಟು ವಿವರ ಹಾಗೂ ಚಿತ್ರಗಳು ನೋಡಿ.
ಘಟನೆ ನಡೆದಿದ್ದು ಯಾವಾಗ
ಚಿತ್ರದಲ್ಲಿರುವ ಹರ್ಷವರ್ಧನ್ ಗೆ ಆತನ ಸೀನಿಯರ್ ಸತೀಶ್ ಎರಡು ಪಂಚ್ ಕೊಟ್ಟಿದ್ದಾನೆ, ಮೊದಲು ಎದೆಗೆ ನಂತರ ಕೆನ್ನೆಗೆ ಬಾರಿಸಿದ್ದಾನೆ. ಪೆಟ್ಟು ತಿಂದ ಹರ್ಷ ನೆಲಕ್ಕೆ ಕುಸಿದಿದ್ದಾನೆ. ಹರ್ಷನ ತಲೆ ಬೆಂಚಿಗೆ ಬಡಿದಿದೆ. ಪ್ರಜ್ಞೆ ತಪ್ಪಿದ ಹರ್ಷನನ್ನು ನಾಂಪಲ್ಲಿಯ ಕೇರ್ ಆಸ್ಪತ್ರೆಗೆ ದಾಖಲಿಸಲಾಗಿದೆ. ಆದರೆ, ಚಿಕಿತ್ಸೆ ಫಲಕಾರಿಯಾಗದ ಕೆಲವೇ ಗಂಟೆಗಳಲ್ಲಿ ಹರ್ಷವರ್ಧನ್ ಸಾವನ್ನಪ್ಪಿದ್ದಾನೆ.
ಪ್ರಕರಣ ದಾಖಲಿಸಿಕೊಂಡ ಪೊಲೀಸರು
ನಾಂಪಲ್ಲಿ ಠಾಣೆ ಪೊಲೀಸರು ಆರೋಪಿಗಳ ವಿರುದ್ಧ ಸೆಕ್ಷನ್ 302ರ ಪ್ರಕಾರ ಕೊಲೆ ಕೇಸು ದಾಖಲಿಸಿದ್ದಾರೆ.ಶನಿವಾರ ಮಧ್ಯಾಹ್ನ ಭೋಜನ ವಿರಾಮದ ವೇಳೆ ಸತೀಶ್ ಹಾಗೂ ಆತನ ಗ್ಯಾಂಗ್ ಹರ್ಷನ ತರಗತಿಗೆ ನುಗ್ಗಿದೆ. ತನ್ನ ಬಿಕಾಂ ಸಹಪಾಠಿಗಳ ಜೊತೆ ಮಾತನಾಡುತ್ತಿದ್ದ ಹರ್ಷನಿಗೆ ಸತೀಶ್ ನೋಡಿ ಗಾಬರಿಯಾಗಿದೆ. ಅದರೆ, ಹರ್ಷ ಮಾತನಾಡಲು ಕೂಡಾ ಬಿಡದೆ ಸತೀಶ್ ಬಾರಿಸಿದ್ದಾನೆ.
ಬೆಳಗ್ಗೆ ವೇಳೆ ತನ್ನ ಸಹಪಾಠಿ ಹುಡುಗಿಯರನ್ನು ಟೀಸಿಂಗ್ ಮಾಡಬೇಡಿ ಎಂದು ಸೀನಿಯರ್ಸ್ ಗೆ ಹೇಳಿದ್ದ ಹರ್ಷನ ಮೇಲೆ ಮಧ್ಯಾಹ್ನವೇ ಪ್ರಹಾರ ಶುರುವಾಗಿದೆ. ಸಂಜೆ ವೇಳೆಗೆ ಹರ್ಷ ಸಾವನ್ನಪ್ಪಿದ್ದಾನೆ ಎಂದು ವಿದ್ಯಾಸಂಸ್ಥೆ ಪ್ರಕಟಿಸಿದೆ.
ಬೆಂಚ್ ತಲೆಗೆ ಬಡಿದಿದ್ದೆ ಕಾರಣ
ಪ್ರತ್ಯಕ್ಷದರ್ಶಿಗಳ ಪ್ರಕಾರ, ಹರ್ಷನ ತಲೆ ಬೆಂಚಿನ ತುದಿಗೆ ಬಡಿದ ಕಾರಣ ಪ್ರಜ್ಞೆ ತಪ್ಪಿತು. ನಾಂಪಲ್ಲಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಕೊಡಿಸಲಾಯಿತು. ಆದರೆ, ತಲೆಗೆ ಪೆಟ್ಟು ಬಿದ್ದು, ತೀವ್ರ ರಕ್ತಸ್ರಾವದಿಂದ ಹರ್ಷನ ಸಾವು ಸಂಭವಿಸಿದೆ ಎಂದು ಸುಲ್ತಾನ್ ಬಜಾರ್ ಎಸಿಪಿ ರಾವುಲ ಗಿರಿಧರ್ ಹೇಳಿದ್ದಾರೆ.
ಸೀನಿಯರ್ಸ್ ಕಿರುಕುಳ ತಪ್ಪಿಸಿ
ಸೀನಿಯರ್ಸ್ ಕಿರುಕುಳ ತಪ್ಪಿಸಿ, ಸತೀಶ್ ಹಾಗೂ ಆತನ ಗ್ಯಾಂಗಿಗೆ ಮ್ಯಾನೇಜ್ಮೆಂಟ್ ನಿಂದಲೂ ಬೆಂಬಲವಿರುವ ಕಾರಣ ಅವರ ಉಪಟಳ ಹೆಚ್ಚುತ್ತಲೇ ಇದೆ. ಸೀನಿಯರ್ಸ್ ಪ್ರಶ್ನಿಸಲು ಎಷ್ಟು ಧೈರ್ಯ ಎಂದು ಹೇಳಿ ಹರ್ಷನ ಕಥೆ ಮುಗಿಸಿದ್ದಾರೆ. ನಮಗೆ ರಕ್ಷಣೆ ಇಲ್ಲದ್ದಂತಾಗುತ್ತದೆ ಎಂದು ಕಿರಿಯ ವಿದ್ಯಾರ್ಥಿಗಳು ಪೊಲೀಸರಿಗೆ ಮನವಿ ಸಲ್ಲಿಸಿದ್ದಾರೆ.