ಹೈದರಾಬಾದ್ ಎನ್ಕೌಂಟರ್ 'ಉದ್ದೇಶಪೂರ್ವಕ': ಪೊಲೀಸರ ವಿರುದ್ಧ ಕ್ರಮಕ್ಕೆ ಶಿಫಾರಸು
ಹೈದರಾಬಾದ್, ಮೇ 20: ಹೈದರಾಬಾದ್ ಪಶುವೈದ್ಯರ ಮೇಲೆ ಸಾಮೂಹಿಕ ಅತ್ಯಾಚಾರ ಮತ್ತು ಹತ್ಯೆಯ ಆರೋಪಿಗಳ ಎನ್ಕೌಂಟರ್ ಬಗ್ಗೆ ತನಿಖೆ ನಡೆಸುತ್ತಿರುವ ಸಿರ್ಪುರ್ಕರ್ ಆಯೋಗವು ತನ್ನ ವರದಿಯನ್ನು ಸಲ್ಲಿಸಿದೆ. ಈ ವರದಿಯಲ್ಲಿ ಆರೋಪಿಗಳ ಎನ್ಕೌಂಟರ್ ಅನ್ನು "ಉದ್ದೇಶಪೂರ್ವಕ" ಎಂದು ತಿಳಿಸಿದೆ.
ಹೈದರಾಬಾದ್ ಸಾಮೂಹಿಕ ಅತ್ಯಾಚಾರ ಮತ್ತು ಕೊಲೆ ಆರೋಪಿಗಳನ್ನು "ಉದ್ದೇಶಪೂರ್ವಕವಾಗಿ ಗುಂಡು ಹಾರಿಸಲಾಗಿದೆ" ಎಂದು ವರದಿಯಲ್ಲಿ ಉಲ್ಲೇಖಿಸಲಾಗಿದೆ. ಈ ವಿಚಾರದಲ್ಲಿ ಆಯೋಗ ಸುಪ್ರೀಂ ಕೋರ್ಟ್ಗೆ ವರದಿ ಸಲ್ಲಿಸಿದ್ದು, ಆಯೋಗದ ವರದಿ ಕುರಿತು ಕ್ರಮ ಕೈಗೊಳ್ಳುವಂತೆ ಸುಪ್ರೀಂ ಕೋರ್ಟ್ ತೆಲಂಗಾಣ ಹೈಕೋರ್ಟ್ಗೆ ಸೂಚಿಸಿದೆ.
ನಾಲ್ವರು ಆರೋಪಿಗಳು ಪಿಸ್ತೂಲ್ ಕಿತ್ತುಕೊಂಡು ಪರಾರಿಯಾಗಲು ಯತ್ನಿಸಿದ್ದರು ಎಂದು ಪೊಲೀಸರು ಹೇಳಿರುವುದನ್ನು ನಂಬಲು ಸಾಧ್ಯವಿಲ್ಲ ಮತ್ತು ಯಾವುದೇ ಸಾಕ್ಷ್ಯಾಧಾರಗಳು ಸಿಕ್ಕಿಲ್ಲ ಎಂದು ವರದಿ ತಿಳಿಸಿದೆ. ಜೊತೆಗೆ ಸಿರ್ಪುರ್ಕರ್ ಆಯೋಗವು ಸಂಬಂಧಪಟ್ಟ ಪೊಲೀಸ್ ಅಧಿಕಾರಿಗಳ ವಿರುದ್ಧ ಕ್ರಮಕ್ಕೆ ಶಿಫಾರಸು ಮಾಡಿದೆ.
ಆರೋಪಿಗಳ ಎನ್ಕೌಂಟರ್ ನಲ್ಲಿ ಪೊಲೀಸರು ನಟಿಸಿದ್ದಾರೆ ಎಂದು ಆಯೋಗ ಕಂಡುಹಿಡಿದಿದೆ. "ದಾಖಲೆಯಲ್ಲಿರುವ ಸಂಪೂರ್ಣ ವಿಷಯವನ್ನು ಪರಿಗಣಿಸಿದ ನಂತರ, 06.12.2019 ರ ಘಟನೆಗೆ ಸಂಬಂಧಿಸಿದಂತೆ ಮೃತರು ಶಸ್ತ್ರಾಸ್ತ್ರಗಳನ್ನು ಕಸಿದುಕೊಳ್ಳುವುದು, ಬಂಧನದಿಂದ ತಪ್ಪಿಸಿಕೊಳ್ಳಲು ಪ್ರಯತ್ನಿಸುವುದು, ಪೊಲೀಸರ ಮೇಲೆ ಹಲ್ಲೆ ಮತ್ತು ಗುಂಡು ಹಾರಿಸುವುದು ಮುಂತಾದ ಯಾವುದೇ ಅಪರಾಧವನ್ನು ಮಾಡಿಲ್ಲ ಎಂದು ನಾವು ತೀರ್ಮಾನಿಸುತ್ತೇವೆ" ಎಂದು ತನಿಖಾ ಸಮಿತಿಯ ವರದಿ ಹೇಳಿದೆ.

ಆಯೋಗವು ತನಿಖೆಯ ಸಮಯದಲ್ಲಿ ಸಂಗ್ರಹಿಸಲಾದ ವಿಧಿವಿಜ್ಞಾನದ ವಸ್ತುಗಳ ಪಾಲನೆಯ ಸರಣಿಯಲ್ಲಿ ಅನೇಕ ಲೋಪಗಳನ್ನು ಗಮನಿಸಿದೆ. ಜೊತೆಗೆ ಫೋರೆನ್ಸಿಕ್ ವಸ್ತುವಿನ ಸಾಕ್ಷ್ಯದ ಮೌಲ್ಯವನ್ನು ನಾಶಪಡಿಸಲಾಗಿದೆ. ಆದ್ದರಿಂದ ಫೋರೆನ್ಸಿಕ್ ಸಾಕ್ಷ್ಯಗಳ ಸಂಗ್ರಹಣೆ ಮತ್ತು ಸಂರಕ್ಷಣೆಯನ್ನು ಸರಿಯಾಗಿ ದಾಖಲಿಸಬೇಕು ಎಂದು ಆಯೋಗ ಶಿಫಾರಸು ಮಾಡುತ್ತದೆ.

2019ರಲ್ಲಿ ಏನಾಯಿತು?
26 ವರ್ಷದ ಮಹಿಳಾ ಪಶುವೈದ್ಯೆಯೊಬ್ಬರು ಕ್ಲಿನಿಕ್ಗೆ ಭೇಟಿ ನೀಡಿ ಮನೆಗೆ ತೆರಳುತ್ತಿದ್ದಾಗ ಶಾದ್ನಗರದಲ್ಲಿ ಅತ್ಯಾಚಾರ ನಡೆಸಿ ಸಜೀವ ದಹನ ಮಾಡಲಾಗಿತ್ತು. ಕೆಲವು ಗಂಟೆಗಳ ನಂತರ, ಆಕೆಯ ದೇಹವು ಹೆದ್ದಾರಿಯ ಅಂಡರ್ಪಾಸ್ನಲ್ಲಿ ಪತ್ತೆಯಾಗಿದೆ. ಈ ಪ್ರಕರಣದಲ್ಲಿ ಬಂಧಿಸಲಾಗಿದ್ದ ನಾಲ್ವರು ಆರೋಪಿಗಳಾದ ಮೊಹಮ್ಮದ್ ಆರಿಫ್, ಜೊಲ್ಲು ಶಿವ, ಜೊಲ್ಲು ನವೀನ್ ಮತ್ತು ಚೆನ್ನಕೇಶವುಲು ಅವರು 2019 ರಲ್ಲಿ ನಡೆದ ಎನ್ಕೌಂಟರ್ನಲ್ಲಿ ಕೊಲ್ಲಲ್ಪಟ್ಟರು. ಆಪಾದಿತ ಎನ್ಕೌಂಟರ್ ಬಗ್ಗೆ ತನಿಖೆ ನಡೆಸಲು ಸುಪ್ರೀಂ ಕೋರ್ಟ್ ಮೂರು ಸದಸ್ಯರ ಆಯೋಗವನ್ನು ನೇಮಿಸಿದೆ.












Click it and Unblock the Notifications