Breaking: ಕೆಸಿಆರ್ ಪುತ್ರಿಯನ್ನು 'ಮಧ್ಯವರ್ತಿ' ಎಂದ ಬಿಜೆಪಿ ನಾಯಕರಿಗೆ ಕೋರ್ಟ್ ನೋಟಿಸ್
ಹೈದ್ರಾಬಾದ್, ಆಗಸ್ಟ್ 24: ತೆಲಂಗಾಣ ಮುಖ್ಯಮಂತ್ರಿ ಕೆ ಚಂದ್ರಶೇಖರ ರಾವ್ ಪುತ್ರಿ ಕೆ ಕವಿತಾ ದಾಖಲಿಸಿದ ಮಾನನಷ್ಟ ಮೊಕದ್ದಮೆಗೆ ಸಂಬಂಧಿಸಿದಂತೆ ಇಬ್ಬರು ಬಿಜೆಪಿ ನಾಯಕರಿಗೆ ಹೈದ್ರಾಬಾದ್ ಸಿವಿಲ್ ಕೋರ್ಟ್ ನೋಟಿಸ್ ಜಾರಿಗೊಳಿಸಿದೆ. ಈ ಪ್ರಕರಣ ಇತ್ಯರ್ಥ ಆಗುವವರೆಗೂ ಕವಿತಾ ವಿರುದ್ಧ ಯಾವುದೇ ಮಾನಹಾನಿಕರ ಹೇಳಿಕೆ ನೀಡದಂತೆ ಬುಧವಾರ ಕೋರ್ಟ್ ಸೂಚನೆ ನೀಡಿದೆ.
ಹೈದರಾಬಾದ್ನ ಸಿವಿಲ್ ಕೋರ್ಟ್ ಈ ಸಂಬಂಧ ಬಿಜೆಪಿ ಸಂಸದ ಪರ್ವೇಶ್ ವರ್ಮಾ ಮತ್ತು ಮಾಜಿ ಶಾಸಕ ಮಂಜಿಂದರ್ ಸಿಂಗ್ ಸಿರ್ಸಾರಿಗೆ ನೋಟಿಸ್ ಜಾರಿ ಮಾಡಿದೆ. ನ್ಯಾಯಾಲಯವು ಮುಂದಿನ ಸೆಪ್ಟೆಂಬರ್ 13ರಂದು ಪ್ರಕರಣವನ್ನು ಕೈಗೆತ್ತಿಕೊಳ್ಳಲಿದೆ.
Breaking: ಮಧ್ಯವರ್ತಿ ಆರೋಪ: ಬಿಜೆಪಿ ವಿರುದ್ಧ ಕೇಸ್ ದಾಖಲಿಸಿದ ಕೆಸಿಆರ್ ಪುತ್ರಿ
ದೆಹಲಿ ಅಬಕಾರಿ ನೀತಿ ಪ್ರಕರಣದಲ್ಲಿ ಲಿಕ್ಕರ್ ಮಾಫಿಯಾ ಮತ್ತು ಆಮ್ ಆದ್ಮಿ ಪಕ್ಷದ (ಎಎಪಿ) ಸರ್ಕಾರದ ನಡುವಿನ "ಮಧ್ಯವರ್ತಿ" ಆಗಿ ಕವಿತಾ ಕೆಲಸ ಮಾಡಿದ್ದಾರೆ ಎಂದು ಬಿಜೆಪಿ ನಾಯಕರು ಆರೋಪಿಸಿದ್ದರು. ಇಂಥ ಆರೋಪ ಮಾಡಿದ ನಾಯಕರ ವಿರುದ್ಧ ಕವಿತಾ ಬಿಜೆಪಿ ವಿರುದ್ಧ ಮಾನನಷ್ಟ ಮೊಕದ್ದಮೆ ಹೂಡಿದ್ದಾರೆ.
ಬಿಜೆಪಿ ನಾಯಕರು ಮಾಡಿದ್ದ ಆರೋಪ?
ಈ ಹಿಂದೆ ದೆಹಲಿಯ ಪಂಚತಾರಾ ಹೋಟೆಲ್ನಲ್ಲಿ ಅಬಕಾರಿ ನೀತಿಯ ಬಗ್ಗೆ ಸಭೆಯನ್ನು ಕರೆಯಲಾಗಿತ್ತು. ಸದ್ಯ ರದ್ದಾಗಿರುವ ಆ ಅಬಕಾರಿ ನೀತಿಯ ಕುರಿತು ಮಾತುಕತೆಗಾಗಿ ಕರೆದಿದ್ದ ಅಂದಿನ ಸಭೆಯಲ್ಲಿ ತೆಲಂಗಾಣದ ಮುಖ್ಯಮಂತ್ರಿ ಕೆ ಚಂದ್ರಶೇಖರ್ ರಾವ್ ಕುಟುಂಬ ಸದಸ್ಯರು ಭಾಗವಹಿಸಿದ್ದರು ಎಂದು ಬಿಜೆಪಿ ನಾಯಕರು ದೂಷಿಸಿದ್ದರು.
ತೆಲಂಗಾಣ ಸಿಎಂ ಕೆ ಚಂದ್ರಶೇಖರ ರಾವ್ ಅವರ ಕುಟುಂಬ ಸದಸ್ಯರು ಹೋಟೆಲ್ನಲ್ಲಿ ದೆಹಲಿಯ ಅಬಕಾರಿ ನೀತಿಯನ್ನು ರೂಪಿಸುವ ಸಭೆಗಳಲ್ಲಿ ಭಾಗವಹಿಸಿದ್ದರು. ಕೆಸಿಆರ್ ಅವರ ಕುಟುಂಬ ಸದಸ್ಯರು ಪಂಜಾಬ್ನಲ್ಲಿ ಅದೇ ನೀತಿಯನ್ನು ಜಾರಿಗೆ ತಂದರು. ಅವರು ಮನೀಶ್ ಸಿಸೋಡಿಯಾ ಮತ್ತು ಅರವಿಂದ್ ಕೇಜ್ರಿವಾಲ್ ಜೊತೆ ದೆಹಲಿಗೆ ಅಬಕಾರಿ ಯೋಜನೆಯನ್ನು ಸಿದ್ಧಪಡಿಸಿದರು" ಎಂದು ಪರ್ವೇಶ್ ವರ್ಮಾ ಆರೋಪಿಸಿದ್ದರು.
ಬಿಜೆಪಿ ನಾಯಕರ ಹೇಳಿಕೆ ಬಗ್ಗೆ ಕೆಸಿಆರ್ ಪುತ್ರಿ ಪ್ರತಿಕ್ರಿಯೆ
"ಬಿಜೆಪಿ ಮತ್ತು ಪಕ್ಷದ ಆ ನಾಯಕರು ನನ್ನ ಮೇಲೆ ಮಾಡುತ್ತಿರುವ ಆರೋಪಗಳು ಸಂಪೂರ್ಣ ನಿರಾಧಾರವಾಗಿವೆ. ಬೇಕಿದ್ದರೆ ಅವರ ಕೈಯಲ್ಲಿ ಎಲ್ಲಾ ತನಿಖಾ ಏಜೆನ್ಸಿಗಳಿವೆ, ಏನು ತನಿಖೆ ಬೇಕಾದರೂ ಮಾಡಿಕೊಳ್ಳಲಿ. ನಾವು ಸಂಪೂರ್ಣವಾಗಿ ತನಿಖೆಗೆ ಸಹಕಾರ ನೀಡುತ್ತೇನೆ," ಎಂದು ಕವಿತಾ ಹೇಳಿದರು. ಅಲ್ಲದೇ ಬಿಜೆಪಿ ನೇತೃತ್ವದ ಕೇಂದ್ರ ಸರ್ಕಾರದ ನೀತಿಗಳನ್ನು ಟೀಕಿಸುವಲ್ಲಿ ತಮ್ಮ ತಂದೆ ಕೆ ಚಂದ್ರಶೇಖರ್ ರಾವ್ ಮುಂದಿರುವುದಕ್ಕೆ ನನ್ನ ಮೇಲೆ ಇಂಥ ಆರೋಪ ಮಾಡಲಾಗುತ್ತಿದೆ. ಆದರೆ ನೀವು ತಪ್ಪು ದಾರಿ ತುಳಿಯುತ್ತಿದ್ದೀರಿ," ಎಂದು ಬಿಜೆಪಿಗರನ್ನು ಉದ್ದೇಶಿಸಿ ಕವಿತಾ ಹೇಳಿದ್ದಾರೆ.
ಬಿಜೆಪಿಗರಿಗೆ ಎಚ್ಚರಿಕೆ ನೀಡಿದ್ದ ಕೆಸಿಆರ್ ಪುತ್ರಿ ಕವಿತಾ
ಅಬಕಾರಿ ನೀತಿ ರಚನೆಯಲ್ಲಿ ಮಧ್ಯವರ್ತಿಯಾಗಿ ಕೆಲಸ ಮಾಡಿದ್ದಾರೆ ಎಂದು ದೂಷಿಸಿದ ಬಿಜೆಪಿ ನಾಯಕರಿಗೆ ಕೆಸಿಆರ್ ಪುತ್ರಿ ಕವಿತಾ ಮೊದಲೇ ಎಚ್ಚರಿಕೆ ಸಂದೇಶವನ್ನು ನೀಡಿದ್ದರು. ನಿರಾಧಾರ ಆರೋಪಗಳನ್ನು ಮಾಡುತ್ತಿರುವ ಬಿಜೆಪಿ ಸಂಸದ ಪರ್ವೇಶ್ ವರ್ಮಾ ಮತ್ತು ಮಾಜಿ ಶಾಸಕ ಮಂಜಿಂದರ್ ಸಿಂಗ್ ಸಿರ್ಸಾ ವಿರುದ್ಧ ಮಾನನಷ್ಟ ಮೊಕದ್ದಮೆ ದಾಖಲಿಸುವುದಾಗಿ ಎಚ್ಚರಿಕೆ ಕೊಟ್ಟಿದ್ದರು. ಅದರಂತೆ ಅವರು ಸಲ್ಲಿಸಿದ ಮಾನನಷ್ಟು ಮೊಕದ್ದಮೆಗೆ ಸಂಬಂಧಿಸಿದಂತೆ ಇದೀಗ ಕೋರ್ಟ್, ಬಿಜೆಪಿಯ ನಾಯಕರಿಗೆ ನೋಟಿಸ್ ಅನ್ನು ಕೊಟ್ಟಿದೆ. ಇದರಿಂದ ಆರೋಪ ಮತ್ತು ಪ್ರತ್ಯಾರೋಪದ ಪ್ರಕರಣವು ಮತ್ತೊಂದು ಮಜಲು ತಲುಪಿದೆ.
ದೆಹಲಿಯ ಅಬಕಾರಿ ನೀತಿಯಲ್ಲಿ ಅಕ್ರಮದ ಆರೋಪ
ದೆಹಲಿ ಸರ್ಕಾರದ ಅಬಕಾರಿ ನೀತಿ 2021-22ರ ಅನುಷ್ಠಾನದಲ್ಲಿನ ಅಕ್ರಮಗಳಿಗೆ ಸಂಬಂಧಿಸಿದಂತೆ ದಾಖಲಾಗಿರುವ ಎಫ್ಐಆರ್ನಲ್ಲಿ ಸಿಬಿಐ ದೆಹಲಿ ಉಪಮುಖ್ಯಮಂತ್ರಿ ಸಿಸೋಡಿಯಾ ಅವರನ್ನು ಆರೋಪಿ ಎಂದು ಹೆಸರಿಸಿದೆ. ಕಳೆದ ಶುಕ್ರವಾರ ಸಿಸೋಡಿಯಾ ಅವರ ಮನೆ ಮತ್ತು ಇತರ 30 ಸ್ಥಳಗಳ ಮೇಲೆ ಸಿಬಿಐ ದಾಳಿ ನಡೆಸಿತ್ತು.