ಮೂರು ದಿನ ಭಾರೀ ಮಳೆ; ತೆಲಂಗಾಣದಲ್ಲಿ ಶಾಲೆಗಳಿಗೆ ರಜೆ
ಹೈದರಾಬಾದ್, ಜುಲೈ 13; ನಿರಂತರವಾಗಿ ಸುರಿಯುತ್ತಿರುವ ಮಳೆಗೆ ತೆಲಂಗಾಣದ ಜನರು ಹೈರಣಾಗಿದ್ದಾರೆ. ರಾಜ್ಯದಲ್ಲಿ ಮುಂದಿನ ಮೂರು ದಿನಗಳ ಕಾಲ ಭಾರೀ ಮಳೆಯಾಗುವ ಮುನ್ಸೂಚನೆ ಇದ್ದು, ಸರ್ಕಾರ ಮುನ್ನೆಚ್ಚರಿಕಾ ಕ್ರಮವಾಗಿ ಕೆಲವು ಜಿಲ್ಲೆಗಳಲ್ಲಿ ಶಾಲೆಗಳಿಗೆ ರಜೆ ಘೋಷಿಸಿದೆ.
ಶಿಕ್ಷಣ ಸಂಸ್ಥೆಗಳನ್ನು ಸೋಮವಾರದವರೆಗೂ ಮುಚ್ಚಲಾಗುವುದು ಎಂದು ತೆಲಂಗಾಣ ಸರ್ಕಾರ ತಿಳಿಸಿದೆ. ಮುಖ್ಯಮಂತ್ರಿ ಕೆ. ಚಂದ್ರಶೇಖರ ರಾವ್ ಶಿಕ್ಷಣ ಸಚಿವೆ ಪಿ.ಸಬಿತಾ ಇಂದ್ರಾ ರೆಡ್ಡಿ ಮತ್ತು ಶಿಕ್ಷಣ ಇಲಾಖೆ ಕಾರ್ಯದರ್ಶಿ ವಿ. ಕರುಣಾ ಜೊತೆ ಸಭೆ ನಡೆಸಿ, ರಜೆ ನೀಡುವ ನಿರ್ಧಾರ ಕೈಗೊಂಡಿದ್ದಾರೆ.
ಹೈದರಾಬಾದ್: ಭೇಟಿಗೂ ಮೊದಲೇ ಪ್ರಧಾನಿ ಮೋದಿಗೆ ಬೈ ಬೈ ಹೋರ್ಡಿಂಗ್
ಈ ಹಿಂದೆ ರಾಜ್ಯದಲ್ಲಿ ಭಾರೀ ಮಳೆಯಾದ ಹಿನ್ನೆಲೆಯಲ್ಲಿ ಜುಲೈ 11 ರಿಂದ 13ರವರೆಗೆ ಎಲ್ಲಾ ಶಿಕ್ಷಣ ಸಂಸ್ಥೆಗಳಿಗೆ ಸರ್ಕಾರ ರಜೆ ಘೋಷಿಸಿತ್ತು. ಇದೀಗ ಮತ್ತೆ ರಜೆಯನ್ನು ಮುಂದುವರೆಸಲು ತೆಲಂಗಾಣ ಸರ್ಕಾರ ನಿರ್ಧರಿಸಿದೆ. ಭಾರತೀಯ ಹವಾಮಾನ ಇಲಾಖೆ ತೆಲಂಗಾಣದಲ್ಲಿ ಆರೆಂಜ್ ಅಲರ್ಟ್ ಘೋಷಿಸಿತ್ತು.
ಆದರೆ ರಾಜ್ಯದಲ್ಲಿ ಮತ್ತೆ ಮಳೆ ಹೆಚ್ಚಾಗಿ ಪ್ರವಾಹದಂತಹ ವಾತಾವರಣ ನಿರ್ಮಾಣವಾಗಿದೆ. ಆದ್ದರಿಂದ ಉತ್ತರ ಮತ್ತು ಪೂರ್ವ ತೆಲಂಗಾಣ ಜಿಲ್ಲೆಗಳಲ್ಲಿ ಇದೀಗ ರೆಡ್ ಅಲರ್ಟ್ ಘೋಷಣೆ ಮಾಡಿದ್ದಾರೆ. ಉತ್ತರ ತೆಲಂಗಾಣದ ಮಂಚೇರಿಯಲ್, ಕುಮಾರಭೀಮ್, ಅದಿಲಾಬಾದ್, ನಿಜಾಮಾಬಾದ್, ರಾಜಣ್ಣ ಸಿರ್ಸಿಲ್ಲಾ, ಜಗ್ತಿಯಾಲ್, ಪೆದ್ದಪಲ್ಲಿ ಮತ್ತು ಕರೀಂನಗರ ಜಿಲ್ಲೆಗಳಲ್ಲಿಇಂದು ಮತ್ತೆ ಅತೀ ಅತಿ ಹೆಚ್ಚು ಮಳೆಯಾಗುವ ಸಾಧ್ಯತೆಯಿದೆ ಎಂದು ಹವಾಮಾನ ಇಲಾಖೆ ಮುನ್ಸೂಚನೆ ನೀಡಿದೆ.
ಉತ್ತರ ತೆಲಂಗಾಣ ಜಿಲ್ಲೆಗಳಲ್ಲಿ 5ನೇ ದಿನವೂ ಮಂಗಳವಾರ ಭಾರೀ ಮಳೆಯು ಮುಂದುವರಿದಿತ್ತು. ಕನಿಷ್ಠ 42 ಸ್ಥಳಗಳಲ್ಲಿ 20 ಸೆಂ.ಮೀ. ಗಿಂತ ಹೆಚ್ಚಿನ ಮಳೆ ದಾಖಲಾಗಿದೆ. ಮತ್ತೆ ಬುಧವಾರ ಬೆಳಗ್ಗೆ 8.30ರ ಸುಮಾರಿಗೆ ಕೋಮರಂ ಭೀಮ್ ಆಸಿಫಾಬಾದ್ ಜಿಲ್ಲೆಯ ಜೈನೂರು ಮತ್ತು ಲಿಂಗಾಪುರದಲ್ಲಿ 39.1 ಸೆಂ.ಮೀ ಮಳೆಯಾಗಿದ್ದು, ಇದು ಕಳೆದ 24 ಗಂಟೆಗಳಲ್ಲಿ ಅತ್ಯಧಿಕವಾಗಿ ಸುರಿದ ಮಳೆಯಾಗಿದೆ.
ನಿರಂತರ ಮಳೆಗೆ ಗ್ರಾಮಗಳು ಜಲಾವೃತವಾಗಿದ್ದು ಜನರು ಕಂಗಾಲಾಗಿದ್ದಾರೆ. ಅಪಾರ ಪ್ರಮಾಣದ ಬೆಳೆ ಹಾನಿಯಾಗಿ ರೈತರು ತತ್ತರಿಸಿ ಹೋಗಿದ್ದಾರೆ. ಮತ್ತೊಂಡೆ ಎನ್ಡಿಆರ್ಎಫ್ ತಂಡಗಳು ರಕ್ಷಣಾ ಕಾರ್ಯ ಮಾಡುತ್ತಿದ್ದು, ಮಳೆ ನೀರಿನಲ್ಲಿ ಸಿಲುಕಿರುವವರನ್ನು ದಡ ಸೇರಿಸುತ್ತಲೇ ಇವೆ.
ಗೋದಾವರಿ ನದಿ ಪ್ರವಾಹದ ಮಟ್ಟ ಮೀರಿ ಹರಿಯುತ್ತಿರುವ ಕಾರಣ ಅಲ್ಲಿನ ಸುತ್ತಮುತ್ತ ವಾಸಿಸುವ ಜನರಿಗೆ ರಾಜ್ಯ ಸರ್ಕಾರ ಎಚ್ಚರಿಕೆ ನೀಡಿದೆ. ನೀರಾವರಿ ಇಲಾಖೆ ಅಧಿಕಾರಿಗಳಿಗೆ ನೀರಿನ ಮಟ್ಟವನ್ನು ಪುನಃಸ್ಥಾಪಿಸಲು ಮತ್ತು ರೈತರ ಅಗತ್ಯಕ್ಕೆ ಅನುಗುಣವಾಗಿ ನೀರು ಬಿಡುವಂತೆ ಮುಖ್ಯಮಂತ್ರಿ ಕೆ. ಚಂದ್ರಶೇಖರ್ ರಾವ್ ಸೂಚಿಸಿದ್ದಾರೆ. ನದಿಗಳು ಅಪಾಯದ ಮಟ್ಟ ಮೀರಿ ಹರಿಯುತ್ತಿರುವ ಕಾರಣ ತೆಲಂಗಾಣದಲ್ಲಿ ಶಾಗಳಿಗೆ ರಜೆಯನ್ನು ಮುಂದುವರೆಸಲು ಸರ್ಕಾರ ನಿರ್ಧರಿಸಿದೆ.