'ಅಧಿಕಾರ ಕಳೆದುಕೊಳ್ಳಲು ಟಿಆರ್ಎಸ್ ದಿನಗಣನೆ ಆರಂಭ'
ಹೈದರಾಬಾದ್, ಡಿಸೆಂಬರ್ 4: ಹೈದರಾಬಾದ್ ಮಹಾನಗರ ಪಾಲಿಕೆ ಚುನಾವಣೆಯಲ್ಲಿ ಒಂದಷ್ಟು ಪೈಪೋಟಿ ನೀಡುವ ನಿರೀಕ್ಷೆ ಹೊಂದಿದ್ದ ಬಿಜೆಪಿಗೆ ಅಚ್ಚರಿಯ ಭರ್ಜರಿ ಮುನ್ನಡೆ ಸಿಕ್ಕಿದೆ. ಆರಂಭಿಕ ಮತಗಳ ಎಣಿಕೆಯಲ್ಲಿ ಬಿಜೆಪಿ 88 ಕ್ಷೇತ್ರಗಳಲ್ಲಿ ಮುನ್ನಡೆ ಸಾಧಿಸಿದ್ದು, 150 ಕ್ಷೇತ್ರಗಳ ಪಾಲಿಕೆಯಲ್ಲಿ ಮೊದಲ ಬಾರಿಗೆ ಅಧಿಕಾರಕ್ಕೇರುವ ಮೂಲಕ ಇತಿಹಾಸ ನಿರ್ಮಿಸುವ ಆಸೆ ಚಿಗುರಿದೆ.
ಈ ಅನಿರೀಕ್ಷಿತ ಮುನ್ನಡೆ ಬಿಜೆಪಿ ಪಾಳೆಯದಲ್ಲಿ ಸಂಭ್ರಮ ಉಂಟಮಾಡಿದೆ. 'ಆರಂಭಿಕ ಟ್ರೆಂಡ್ಗಳನ್ನು ಗಮನಿಸಿದರೆ ರಾಜ್ಯದಲ್ಲಿ ಪ್ರಬಲ ಶಕ್ತಿಯಾಗಿ ಬಿಜೆಪಿ ತನ್ನ ನೆಲೆಯನ್ನು ಕಂಡುಕೊಂಡಿದೆ. ಹಣಬಲದಿಂದ ನಡೆಯುತ್ತಿದ್ದ ಟಿಆರ್ಎಸ್ಗೆ ಅದೀಗ ತಿರುಗೇಟು ನೀಡಲು ಸಿದ್ಧವಾಗಿದೆ. ಟಿಆರ್ಎಸ್ ಆಡಳಿತದ ದಿನಗಣನೆ ಆರಂಭವಾಗಿದೆ' ಎಂದು ಬಿಜೆಪಿ ರಾಷ್ಟ್ರೀಯ ಕಾರ್ಯದರ್ಶಿ ವೈ. ಸತ್ಯಕುಮಾರ್ ಹೇಳಿದ್ದಾರೆ.
'ಸಂಜೆಯವರೆಗೂ ಫಲಿತಾಂಶಕ್ಕಾಗಿ ಕಾಯೋಣ. ಆದರೆ ಜನರು ಬದಲಾವಣೆ ಬಯಸಿದ್ದಾರೆ ಎಂದು ಟಿಆರ್ಎಸ್ಗೆ ಇದು ಸ್ಪಷ್ಟ ಸಂದೇಶವಾಗಿದೆ' ಎಂದು ತೆಲಂಗಾಣದ ಬಿಜೆಪಿ ಸಂಸದ ಡಿ. ಅರವಿಂದ್ ಹೇಳಿದ್ದಾರೆ. ತೆಲಂಗಾಣದಲ್ಲಿ ಪರಿವರ್ತನೆಯ ಯುಗ ಆರಂಭವಾಗಿದೆ. ನೀವು ಲೋಕಸಭೆ ಚುನಾವಣೆಯ ಫಲಿತಾಂಶವನ್ನು ನೋಡಿದ್ದೀರಿ. ಬಳಿಕ ದುಬ್ಬಕಾ ಉಪ ಚುನಾವಣೆ, ಈಗ ಜಿಎಚ್ಎಂಸಿ ಚುನಾವಣೆ ಎಂದು ಅವರು ಹೇಳಿದ್ದಾರೆ.

"ವೆಲ್ ಡನ್ ಭಾಗ್ಯನಗರ'' ಎಂದು ಬಿಎಲ್ ಸಂತೋಷ್ ಅವರು ತೆಲಂಗಾಣ ಬಿಜೆಪಿಯ ಶ್ರಮವನ್ನು ಶ್ಲಾಘಿಸಿದ್ದಾರೆ. ''ಕೋಮುವಾದಿ, ಹಣ ಬಲ, ಕುತಂತ್ರ ರಾಜಕೀಯದ ಎದುರು ತೆಲಂಗಾಣ ಬಿಜೆಪಿ ಸಮರ್ಥ ಹೋರಾಟ ನಡೆಸಿದೆ. ಬಂಡಿ ಸಂಜಯ್ (ತೆಲಂಗಾಣ ಬಿಜೆಪಿ ಅಧ್ಯಕ್ಷ) ಹಾಗೂ ತಂಡದ ಶ್ರಮಕ್ಕೆ ನನ್ನ ಅಭಿನಂದನೆಗಳು'' ಎಂದು ಟ್ವೀಟ್ ಮಾಡಿದ್ದಾರೆ.












Click it and Unblock the Notifications