ತೆಲಂಗಾಣದ ಜಲ ವಿದ್ಯುತ್ ಸ್ಥಾವರದಲ್ಲಿ ಅಗ್ನಿ ಅವಘಡ: 6 ಮಂದಿ ಸಾವು
ತೆಲಂಗಾಣ, ಆಗಸ್ಟ್ 21: ತೆಲಂಗಾಣದ ಜಲವಿದ್ಯುತ್ ಸ್ಥಾವರದಲ್ಲಿ ಭೀಕರ ಅಗ್ನಿ ಅವಘಡ ಸಂಭವಿಸಿದೆ. 6 ಮಂದಿ ಸಾವನ್ನಪ್ಪಿದ್ದಾರೆ. ಈ ಘಟಕದಿಂದ ಭಯಾನಕ ಸ್ಫೋಟದ ಶಬ್ಧವೂ ಕೇಳಿ ಬಂದಿದ್ದು, ಕೆಲವು ಸಮಯಗಳ ವರೆಗೆ ಜನರನ್ನು ಆತಂಕಕ್ಕೆ ದೂಡಿತ್ತು.
ಶ್ರೀಶೈಲಂ ಜಲವಿದ್ಯುತ್ ಸ್ಥಾವರದಲ್ಲಿ ಶುಕ್ರವಾರ ಬೆಳಗಿನ ಜಾವ ಈ ಘಟನೆ ಸಂಭವಿಸಿದೆ. ವಿದ್ಯುತ್ ಸ್ಥಾವರದ ನಾಲ್ಕನೇ ಘಟಕದಲ್ಲಿ ಬೆಂಕಿ ಕಾಣಿಸಿಕೊಂಡಿತ್ತು. ಘಟನೆ ವೇಳೆ ಒಟ್ಟು 19 ಮಂದಿ ನಾಲ್ಕನೇ ಘಟಕದಲ್ಲಿ ಕಾರ್ಯ ನಿರ್ವಹಿಸುತ್ತಿದ್ದರು ಎಂದು ತಿಳಿದುಬಂದಿದೆ.
ಅಸ್ಸಾಂನ ತೈಲ ಬಾವಿಯಲ್ಲಿ ಅಗ್ನಿ ಅವಘಡ: ಭಾರಿ ಪ್ರಮಾಣದಲ್ಲಿ ಬೆಂಕಿ
ಈ ಪೈಕಿ 10 ಮಂದಿ ಘಟನೆ ವೇಳೆ ಟನಲ್ ಮೂಲಕ ಹೊರಬಂದು ಬಚಾವ್ ಆಗಿದ್ದಾರೆ ಎನ್ನಲಾಗಿದೆ. ಒಳಗಡೆ ಇದ್ದ ಆರು ಮಂದಿ ಮೃತಪಟ್ಟಿದ್ದಾರೆ.
ಬೆಂಕಿ ಅವಘಡಕ್ಕೆ ಶಾರ್ಟ್ ಸರ್ಕ್ಯೂಟ್ ಮೂಲ ಕಾರಣ ಎಂದು ವಿದ್ಯುತ್ ಸ್ಥಾವರದ ಮೂಲಗಳು ತಿಳಿಸಿವೆ. ಆದರೆ ತನಿಖೆ ಬಳಿಕವಷ್ಟೆ ಸತ್ಯ ಏನೆಂಬುದು ತಿಳಿದುಬರಬೇಕಿದೆ. ಮೂಲಗಳ ಪ್ರಕಾರ ಪ್ಯಾನೆಲ್ ಬೋರ್ಡ್ನಲ್ಲಿ ಶಾರ್ಟ್ ಸರ್ಕ್ಯೂಟ್ನಿಂದಾಗಿ ಬೆಂಕಿ ಅವಘಡ ಸಂಭವಿಸಿದೆ ಎಂದು ತಿಳಿದುಬಂದಿದೆ.
ಈ ಸ್ಪೋಟದಿಂದಾಗಿ ನಾಲ್ಕನೇ ಘಟಕದಲ್ಲಿ ಸಂಪೂರ್ಣ ಬೆಂಕಿ ಆವರಿಸುವ ಜೊತೆಗೆ ಸಂಪೂರ್ಣವಾಗಿ ಹೊಗೆ ತುಂಬಿಕೊಂಡಿತ್ತು. ಹೀಗಾಗಿ ಅಗ್ನಿಶಾಮಕ ಸಿಬ್ಬಂದಿಗಳು ಒಳ ಪ್ರವೇಶಕ್ಕೆ ಸಾಧ್ಯವಾಗಿರಲಿಲ್ಲ.
ಇದೀಗ ಶ್ರೀಶೈಲಂ ಜಲವಿದ್ಯುತ್ ಕೇಂದ್ರದಲ್ಲಿ ಎಲ್ಲಾ ಸಂಪೂರ್ಣ ಕೆಲಸವನ್ನು ಸ್ಥಗಿತಗೊಳಿಸಲಾಗಿದ್ದು, ರಕ್ಷಣಾ ಕಾರ್ಯಾಚರಣೆ ಆರಂಭವಾಗಿದೆ. ಅಲ್ಲದೇ ಹೊರ ಬಂದ ಹತ್ತು ಮಂದಿಯನ್ನು ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಗುತ್ತಿದೆ.