ತೆಲಂಗಾಣ ವಿಷಯದಲ್ಲಿ ಬಿಜೆಪಿ ನಿಲುವೇನು?
ಹೈದರಾಬಾದ್, ಫೆ.8: ಲೋಕಸಭಾ ಚುನಾವಣೆ ಸಂದರ್ಭದಲ್ಲಿ ಬಿಸಿತುಪ್ಪವಾಗಿರುವ ತೆಲಂಗಾಣ ವಿಷಯದಲ್ಲಿ ಬಿಜೆಪಿ ನಿಲುವೇನು ಎಂಬುದು ಕುತೂಹಲಕಾರಿಯಾಗಿದೆ. ಒಂದು ರೀತಿ advantage positionನಲ್ಲಿರುವ ಕಾಂಗ್ರೆಸ್ಸಿಗೆ ಬಿಜೆಪಿ ಸಾಥ್ ನೀಡುತ್ತದಾ?
ತೆಲಂಗಾಣ ವಿಷಯವನ್ನು ತನ್ನ ಹಿಡಿತದಲ್ಲೇ ಭದ್ರವಾಗಿಸಿಕೊಂಡಿರುವ ಕಾಂಗ್ರೆಸ್ ಪಕ್ಷವು ಬಿಜೆಪಿಯ ಬೆಂಬಲ ಕೋರಲಿದೆಯಾ? ಅದಕ್ಕಿಂತ ಹೆಚ್ಚಾಗಿ ಬಿಜೆಪಿಗೆ ತಾನಾಗಿಯೇ ಬೆಂಬಲ ನೀಡುವುದು ಅನಿವಾರ್ಯವಾಗಲಿದೆಯಾ?
ಫೆಬ್ರವರಿ 12ರಂದು ಸಂಸತ್ತಿನಲ್ಲಿ ತೆಲಂಗಾಣ ರಚನೆ ಸಂಬಂಧ ವಿಧೇಯಕವು ಮಂಡನೆಯಾಗಲಿದೆ. ಅದಕ್ಕೂ ಮುನ್ನ, ಆಂಧ್ರ ಪ್ರದೇಶ ವ್ಯವಹಾರಗಳ ಹೊಣೆಹೊತ್ತಿರುವ ಕಾಂಗ್ರೆಸ್ಸಿನ ಅಹಮದ್ ಪಟೇಲ್ ಮತ್ತು ದಿಗ್ವಿಜಯ್ ಸಿಂಗ್ ಅವರುಗಳು ಆಂಧ್ರದ ಬಿಜೆಪಿಯ ಪ್ರಭಾವಿ ನಾಯಕ ವೆಂಕಯ್ಯ ನಾಯ್ಡು ಅವರನ್ನು ಶುಕ್ರವಾರ ರಾತ್ರಿ ತಮ್ಮಲ್ಲಿಗೆ ಕರೆಯಿಸಿಕೊಂಡು, ವಿಧೇಯಕಕ್ಕೆ ಸಮ್ಮತಿ ಸೂಚಿಸುವಂತೆ ಕೋರಿದ್ದಾರೆ.
ಕೇಂದ್ರ ಸಚಿವ, ಆಂಧ್ರದ ಪಲ್ಲಂ ರಾಜು ಅವರು ಹೈದರಾಬಾದನ್ನು ಕೇಂದ್ರಾಡಳಿತ ಪ್ರದೇಶವೆಂದು ಘೋಷಿಸುವಂತೆ ಪಟ್ಟು ಹಿಡಿದ್ದಾರೆ. ಆದರೆ ಈಗ ಮಂಡನೆಯಾಗಿರುವ ವಿಧೇಯಕದಲ್ಲಿ ಇದಕ್ಕೆ ಅವಕಾಶ ಇಲ್ಲವಾಗಿದೆ. 10 ವರ್ಷ ಕಾಲ ಹೈದರಾಬಾದು ಜಂಟಿ ರಾಜಧಾನಿಯಾಗಿ ಉಳಿಯಲಿದೆ. ಇದು ಕಾಂಗ್ರೆಸ್ ನೇತೃತ್ವದ ಯುಪಿಎಗೆ ಇರುಸುಮುರುಸು ತಂದಿದೆ. ಹಾಗಾಗಿ, to be on safer sideನಲ್ಲಿರಲು ಕಾಂಗ್ರೆಸ್ ಪಕ್ಷವು ಬಿಜೆಪಿಯ ಬೆಂಬಲ ಯಾಚಿಸುವ ಮೂಲಕ ಆ ಪಕ್ಷವನ್ನು ಅಡಕತ್ತರಿಯಲ್ಲಿ ಸಿಲುಕಿಸಿದೆ.
ಹಾಗಾಗಿ 15ನೇ ಲೋಕಸಭೆ ಅಂತ್ಯ ಕಾಲದಲ್ಲಿ ತೆಲಂಗಾಣ ರಚನೆ ವಿಧೇಯಕಕ್ಕೆ ಅಂಗೀಕಾರ ಪಡೆಯಲು ಕಾಂಗ್ರೆಸ್ ಎಲ್ಲ ಅವಕಾಶಗಳನ್ನೂ ಮುಕ್ತವಾಗಿಟ್ಟಿದೆ. ಈ ಮಧ್ಯೆ, ಅಖಂಡ ಆಂಧ್ರಕ್ಕೆ ಪಟ್ಟು ಹಿಡಿದಿರುವ ಆಂಧ್ರದ ಹಾಲಿ ಮುಖ್ಯಮಂತ್ರಿ ಕಿರಣ್ ಕುಮಾರ್ ವಿರುದ್ಧ ಕ್ರಮ ಕೈಗೊಳ್ಳುವ ನಿಟ್ಟಿನಲ್ಲಿ ಅವರನ್ನು ಅಧಿಕಾರದಿಂದ ಇಳಿಸಲು ಕಾಂಗ್ರೆಸ್ ಸಜ್ಜಾಗಿದೆ ಎಂದು ತಿಳಿದುಬಂದಿದೆ.