ಆಂಧ್ರ ಬಿಕ್ಕಟ್ಟಿಗೆ ಚಿರಂಜೀವಿ 'ಸಿಎಂ' ಆಗೋದು ಪರಿಹಾರ?
ನವದೆಹಲಿ, ಫೆ.27: ಆಂಧ್ರಪ್ರದೇಶ ವಿಭಜನೆ ಮಾಡಿ ತೆಲಂಗಾಣ ರಾಜ್ಯ ರಚನೆ ಮಾಡಿದ ಮೇಲೆ ಯುಪಿಎ ಸರ್ಕಾರ ಎಚ್ಚರಿಕೆಯ ಹೆಜ್ಜೆಯಿಡುತ್ತಿದೆ. ಈ ನಡುವೆ ಸೀಮಾಂಧ್ರ ವ್ಯಾಪ್ತಿಯಲ್ಲಿ ಉಂಟಾಗಿರುವ ಬಿಕ್ಕಟ್ಟನ್ನು ಪರಿಹರಿಸಲು ಮುಂದಾಗಿರುವ ಕೇಂದ್ರ ವರಿಷ್ಠರು ಮೆಗಾಸ್ಟಾರ್ ಚಿರಂಜೀವಿಗೆ ಪಟ್ಟ ಕಟ್ಟಲು ಮುಂದಾಗಿದ್ದಾರೆ ಎಂಬ ಸುದ್ದಿ ಬಂದಿದೆ.
ಮುಖ್ಯಮಂತ್ರಿ ಸ್ಥಾನಕ್ಕೆ ಕಿರಣ್ ಕುಮಾರ್ ರೆಡ್ಡಿ ರಾಜೀನಾಮೆ ನೀಡಿದ ಬಳಿಕ ತೆರವಾಗಿರುವ ಸ್ಥಾನವನ್ನು ಚಿರಂಜೀವಿಗೆ ನೀಡುವುದರ ಮೂಲಕ ಪಕ್ಷವನ್ನು ಭದ್ರ ಪಡಿಸಿಕೊಳ್ಳುವುದು ಕಾಂಗ್ರೆಸ್ ಲೆಕ್ಕಾಚಾರವಾಗಿದೆ. ಕಿರಣ್ ಕುಮಾರ್ ರೆಡ್ಡಿ ಅವರು ಹೊಸ ಪಕ್ಷ ಸ್ಥಾಪಿಸುತ್ತಾರೆ ಅದಕ್ಕೆ 'ಚಪ್ಪಲಿ' ಚಿನ್ಹೆ ಪಡೆಯಲಿದ್ದಾರೆ ಎಂಬ ಮಾಹಿತಿಯೂ ಇದೆ.
ತೆಲಂಗಾಣ ರಾಜ್ಯ ರಚನೆ ನಂತರ ಹಂಗಾಮಿ ಮುಖ್ಯಮಂತ್ರಿಯಾಗಲು ಕಿರಣ್ ರೆಡ್ಡಿ ನಿರಾಕರಿಸಿದ್ದರಿಂದ ಆಂಧ್ರ ಪ್ರದೇಶದಲ್ಲಿ ಮುಖ್ಯಮಂತ್ರಿ ಸ್ಥಾನ ಖಾಲಿ ಉಳಿದಿದೆ. ಸೀಮಾಂಧ್ರಕ್ಕೆ ಹೊಸ ರಾಜಧಾನಿ ಹುಡುಕಾಟವೂ ಜಾರಿಯಲ್ಲಿದೆ.ಇತ್ತ ರಾಷ್ಟ್ರಪತಿ ಆಡಳಿತವನ್ನೂ ಹೇರದೆ, ವಿಧಾನಸಭೆಯನ್ನು ಅಮಾನತಿನಲ್ಲಿಡದೆ ಅತಂತ್ರ ಸ್ಥಿತಿಯಲ್ಲಿ ರಾಜ್ಯಪಾಲರು ಇದ್ದಾರೆ.[ಆಂಧ್ರ ವಿಭಜನೆ, ಕರ್ನಾಟಕ ದೊಡ್ಡಣ್ಣ, ಲಾಭ ಏನಣ್ಣ?]
ಚಿರಂಜೀವಿ ಜನಪ್ರಿಯತೆಯನ್ನು ಮನಗಂಡಿರುವ ಕೇಂದ್ರ ವರಿಷ್ಠರು ಅವರಿಗೆ ಮುಖ್ಯಮಂತ್ರಿ ಸ್ಥಾನ ನೀಡಲು ಮುಂದಾಗಿದ್ದಾರೆಂದು ನಂಬಲರ್ಹ ಮೂಲಗಳು ತಿಳಿಸಿವೆ. ಆಂಧ್ರ ವಿಭಜನೆ ನಂತರ ಸೀಮಾಂಧ್ರದಲ್ಲಿ ಕಾಂಗ್ರೆಸ್ ಪರಿಸ್ಥಿತಿ ದಯನೀಯವಾಗಿದೆ.

ಸೀಮಾಂಧ್ರದಲ್ಲಿ ಈಗ ನಡೆದಿದೆ ಜಾತಿ ಲೆಕ್ಕಾಚಾರ
ಸೀಮಾಂಧ್ರದಲ್ಲಿ ಅರಾಜಕತೆ ಸೃಷ್ಟಿಯಾಗಬಹುದು ಎಂಬ ಹಿನ್ನೆಲೆಯಲ್ಲಿ ಕೇಂದ್ರ ಸರ್ಕಾರ ಒಂದೇ ಕಲ್ಲಿನಲ್ಲಿ ಎರಡು ಹಕ್ಕಿ ಹೊಡೆಯಲು ಮುಂದಾಗಿದೆ. ರೆಡ್ಡಿ ರಾಜೀನಾಮೆಯಿಂದ ಮುನಿಸಿಕೊಂಡಿರುವ ಬಹುಸಂಖ್ಯಾತ ಮತಗಳನ್ನು ಓಲೈಸಿಕೊಳ್ಳಲು ಮೆಗಾಸ್ಟಾರ್ ಚಿರಂಜೀವಿಗೆ ಪಟ್ಟ ಕಟ್ಟಲು ಗಂಭೀರ ಆಲೋಚನೆ ನಡೆದಿದೆ.
ಆಂಧ್ರದಲ್ಲಿ ಶೇ 19ರಷ್ಟಿರುವ ಕಾಪು ಜನಾಂಗಕ್ಕೆ ಸೇರಿರುವ ಚಿರಂಜೀವಿ ಸಿಎಂ ಸ್ಥಾನದ ಕನಸು ಕಾಣುತ್ತಿದ್ದಾರೆ. ಕ್ರಿಶ್ಚಿಯನ್ ಆಗಿದ್ದರೂ ರೆಡ್ಡಿ ಟ್ಯಾಗ್ ಧರಿಸಿ ಓಡಾಡಿಕೊಂಡಿರುವ ವೈಎಸ್ಸಾರ್ ಜಗನ್ ಪ್ರಾಬಲ್ಯ ಮುರಿಯಬೇಕಿದೆ. ಇಬ್ಬರ ಜಗಳದ ನಡುವೆ ಲಾಭ ಪಡೆಯಲು ಚಂದ್ರಬಾಬು ನಾಯ್ಡು ಯತ್ನಿಸುತ್ತಿದ್ದಾರೆ.
ತೆಲಂಗಾಣದಲ್ಲಿ ಶೇ 86 ರಷ್ಟು ಹಿಂದುಗಳು, ಶೇ12 ರಷ್ಟು ಮುಸ್ಲಿಂ ಹಾಗೂ ಶೇ 1 ರಷ್ಟು ಕ್ರೈಸ್ತ್ರರಿದ್ದಾರೆ. ಭಾಷೆ ಅಂಕಿ ಅಂಶ : ತೆಲಂಗಾಣದಲ್ಲಿ ಶೇ 77 ರಷ್ಟು ಜನ ತೆಲುಗು ಭಾಷೆ ಮಾತನಾಡುತ್ತಾರೆ. ಶೇ 12ರಷ್ಟು ಉರ್ದು ಹಾಗೂ ಶೇ 11 ರಷ್ಟು ಇತರೆ ಭಾಷಿಗರು ಇದ್ದಾರೆ.

ಸೀಮಾಂಧ್ರ ರಾಜ್ಯ ಸ್ಥಿತಿ ಗತಿ ಏನಾಗಲಿದೆ?
ತೆಲಂಗಾಣ ರಚನೆ ನಂತರ ಸೀಮಾಂಧ್ರ ಭೂಗೋಳ : ಜಿಲ್ಲೆ 13: ಶ್ರೀಕಾಕುಳಂ, ವಿಜಯನಗರಂ, ವಿಶಾಖಪಟ್ಟಣ, ಪೂರ್ವಗೋದಾವರಿ, ಪಶ್ಚಿಮಗೋದಾವರಿ, ಕೃಷ್ಣಾ, ಗುಂಟೂರು, ಪ್ರಕಾಶಂ, ನೆಲ್ಲೂರು, ಚಿತ್ತೂರು, ಕಡಪ, ಕರ್ನೂಲು, ಅನಂತಪುರ ಜನಸಂಖ್ಯೆ:ಸುಮಾರು 5 ಕೋಟಿ,
ವಿಸ್ತೀರ್ಣ: 1,60 ಲಕ್ಷ ಚ.ಕಿ.ಮೀ.,
ಒಟ್ಟು ವಿಧಾನಸಭೆ ಸದಸ್ಯರ ಸಂಖ್ಯೆ: 175, ಒಟ್ಟು ಲೋಕಸಭಾ ಕ್ಷೇತ್ರಗಳು: 25
ಹೈದರಾಬಾದ್ 10 ವರ್ಷಕ್ಕೆ ರಾಜಧಾನಿ ನಂತರ ಹೊಸ ರಾಜಧಾನಿ ಸ್ಥಾನಕ್ಕೆ ಕರ್ನೂಲು ಅಥವಾ ವಿಶಾಖಪಟ್ಟಣಂ ನಡುವೆ ಪೈಪೋಟಿ

ಚಿರಂಜೀವಿ ಪ್ರಜಾರಾಜ್ಯಂ ಟುಸ್ ಪಟಾಕಿ
ಈ ಹಿಂದೆ ಚಿರಂಜೀವಿ ಪ್ರಜಾರಾಜ್ಯಂ ಪಕ್ಷವನ್ನು 2008ರಲ್ಲಿ ಸ್ಥಾಪಿಸಿ, 2009ರಲ್ಲಿ ಚುನಾವಣೆ ಕಣಕ್ಕಿಳಿದರೂ ಭರ್ಜರಿ ಯಶ ಸಾಧಿಸಿರಲಿಲ್ಲ. ನಂತರ ಕಾಂಗ್ರೆಸ್ ಪಕ್ಷದಲ್ಲಿ ಅದನ್ನು ವಿಲೀನ ಮಾಡಿದ್ದರು. ವಿಲೀನ ಪ್ರಕ್ರಿಯೆಯಲ್ಲಿ 300-500 ಕೋಟಿ ರು ಕೈ ಕೈ ಬದಲಾಯಿತ್ತು ಎಂಬ ಸುದ್ದಿಯೂ ಇದೆ.
ವಿಲೀನದ ನಂತರ ಹಲವು ಬಾರಿ ಮುಖ್ಯಮಂತ್ರಿಯಾಗಬೇಕೆಂಬ ಇಂಗಿತ ವ್ಯಕ್ತಪಡಿಸಿದ್ದರೂ ಸಾಧ್ಯವಾಗಿರಲಿಲ್ಲ. ತೆಲಂಗಾಣ ಮಸೂದೆಯನ್ನು ವಿರೋಧಿಸಿದ್ದ ಚಿರಂಜೀವಿ ಅವರು 11 ಕೋಟಿ ತೆಲುಗು ಜನರಿಗಾಗಿ ನಾನು ಭಾಷಣ ಮಾಡುತ್ತಿದ್ದೇನೆ ಎಂದು ಸದನದಲ್ಲಿ ಹೇಳಿದ್ದು ಜನರ ಮೇಲೆ ಪರಿಣಾಮ ಬೀರುವ ಸಾಧ್ಯತೆಯಿದೆ.[ಪ್ರಜಾರಾಜ್ಯಂ ಕಥೆ ಇಲ್ಲಿ ಓದಿ]

ಆಂಧ್ರದಲ್ಲಿ ಕಾಂಗ್ರೆಸ್ ಅಸ್ತಿತ್ವದ ಪ್ರಶ್ನೆ
ಕಿರಣ್ ರೆಡ್ಡಿ ರಾಜೀನಾಮೆ ಬಳಿಕ ಸಾಲು ಸಾಲಾಗಿ ಸಂಸದರು, ಶಾಸಕರು ಕಾಂಗ್ರೆಸ್ ಗೆ ಗುಡ್ ಬೈ ಹೇಳುತ್ತಿದ್ದಾರೆ. ಒಂದೆಡೆ ಪಕ್ಷದ ಜನಪ್ರಿಯತೆ ಪಾತಾಳಕ್ಕೆ ಕುಸಿದಿರುವುದು, ಮತ್ತೊಂದೆಡೆ ವೈಎಸ್ ಆರ್ ಕಾಂಗ್ರೆಸ್ ಜನಪ್ರಿಯತೆ ಹೆಚ್ಚುತ್ತಿರುವುದು ವರಿಷ್ಠರನ್ನು ಇಕ್ಕಟ್ಟಿಗೆ ಸಿಲುಕಿಸಿದೆ.
ಹೀಗಾಗಿ ಅಳೆದು ತೂಗಿರುವ ದೆಹಲಿ ನಾಯಕರು ಚಿರಂಜೀವಿಗೆ ಮುಖ್ಯಮಂತ್ರಿ ಸ್ಥಾನ ನೀಡಿದರೆ ಪಕ್ಷಕ್ಕೆ ಹೆಚ್ಚಿನ ಬಲ ಬರುತ್ತದೆ ಎಂಬ ಲೆಕ್ಕಾಚಾರದಲ್ಲಿದೆ. ಆಂಧ್ರದಲ್ಲಿ ಇಂದಿಗೂ ಜನಪ್ರಿಯತೆಯಲ್ಲಿ ಮೊದಲ ಸ್ಥಾನದಲ್ಲಿರುವ ಮೆಗಾಸ್ಟಾರ್ ಗೆ ಉನ್ನತ ಸ್ಥಾನ ನೀಡಿದರೆ ಸಹಜವಾಗಿ ಪಕ್ಷ ಬಲಪಡಿಸಬಹುದು.

ಚಿರುಗೆ ಆತುರ, ಯುಪಿಎಗೆ ಅನಿವಾರ್ಯ
'ಒಂದು ದಿನದ ಮಟ್ಟಿಗಾದರೂ ಸಿಎಂ ಕುರ್ಚಿಯಲ್ಲಿ ಕುಳಿತು ಕೆಳಗಿದರೆ ಸಾಕು' ಎಂಬ ಆತುರದಲ್ಲಿ ಚಿರಂಜೀವಿ ಇದ್ದಾರೆ. ಯುಪಿಎಗೆ ಈ ಸಂದರ್ಭದಲ್ಲಿ ಚಿರಂಜೀವಿ ಮುಂದಿಟ್ಟುಕೊಂಡು ಕಾಂಗ್ರೆಸ್ ಉಳಿಸಿಕೊಳ್ಳುವುದು ಲೋಕಸಭೆ ಚುನಾವಣೆ ಹಿತದೃಷ್ಟಿಯಿಂದ ಮುಖ್ಯವಾಗಿದೆ. ಚಿರಂಜೀವಿ ಒಂದು ವೇಳೆ ಸಿಎಂ ಆದರೂ ಅಧಿಕಾರ ಎಷ್ಟು ದಿನ ಎಂದು ಹೇಳಲು ಬರುವುದಿಲ್ಲ. ಪಕ್ಷದ ಆಂತರಿಕ ಕಚ್ಚಾಟದ ನಡುವೆ ಪಕ್ಕದ ತೆಲಂಗಾಣ ನಾಯಕರ ವಿರೋಧ ಕಟ್ಟಿಕೊಂಡು ಬೆಂಕಿಯಲ್ಲಿ ಅರಳಿದ ಹೂವು ನಾನಮ್ಮ ಎಂದು ಮತ್ತೆ ಜನರ ಬಳಿ ಮೊರೆ ಹೋಗಬೇಕಾಗುತ್ತದೆ.

ಸಂಸತ್ತಿನಲ್ಲಿ ಚಿರಂಜೀವಿ ಭಾಷಣದ ಪರಿಣಾಮ
ಹೈದರಾಬಾದ್ ಜೊತೆ ಆಂಧ್ರ ಪ್ರದೇಶದ ಜನತೆಗೆ ಭಾವನಾತ್ಮಕ ನಂಟಿದೆ. ಜನರ ಭಾವನೆಯನ್ನು ನಾನಿಲ್ಲಿ ವ್ಯಕ್ತಪಡಿಸುತ್ತಿದ್ದೇನೆ. ಹೈದರಾಬಾದ್ ಅನ್ನು ಕೇಂದ್ರಾಡಳಿತ ಪ್ರದೇಶವಾಗಿ ಘೋಷಿಸಿ, ಸೀಮಾಂಧ್ರಕ್ಕೆ ಪ್ರತ್ಯೇಕ ರೈಲ್ವೆ ವಲಯ ನೀಡಬೇಕು ಎಂದು ಚಿರಂಜೀವಿ ಹೇಳಿದ್ದರು. ಕಾಂಗ್ರೆಸ್ ಆತುರದಲ್ಲಿ ತೆಲಂಗಾಣ ರಚನೆ ನಿರ್ಧಾರ ಕೈಗೊಂಡಿದೆ, ನನ್ನ ಪಕ್ಷದ ತೀರ್ಮಾನ ವೈಯಕ್ತಿಕವಾಗಿ ನನಗೆ ನೋವು ತಂದಿದೆ ಎಂದು ಹೇಳಿದರು. ಇದರಿಂದ ಸದನದಲ್ಲಿ ಕೆಲಕಾಲ ಗೊಂದಲದ ವಾತಾವರಣ ನಿರ್ಮಾಣವಾಯಿತು. ಚಿರಂಜೀವಿ ತಮ್ಮು ನಿಲುವು ಪ್ರಕಟಿಸಬೇಕು ಎಂದು ಬಿಜೆಪಿ ಸದಸ್ಯ ಅರುಣ್ ಜೇಟ್ಲಿ ಒತ್ತಾಯಿಸಿದ ಮೇಲೆ ಚಿರಂಜೀವಿ ಅವರು ಮೈಕ್ ಹಿಡಿದಿದ್ದು ವಿಶೇಷವಾಗಿತ್ತು.












Click it and Unblock the Notifications