ತೆಲಂಗಾಣದಲ್ಲಿ ಟಿಡಿಪಿ, ಕಾಂಗ್ರೆಸ್, ಸಿಪಿಐ ಮೈತ್ರಿ; ರಾಷ್ಟ್ರಪತಿ ಆಡಳಿತಕ್ಕೆ ಮನವಿ
ಹೈದರಾಬಾದ್, ಸೆಪ್ಟೆಂಬರ್ 11: ಕೆ ಚಂದ್ರಶೇಖರ್ ರಾವ್ ಅವರ ತೆಲಂಗಾಣ ರಾಷ್ಟ್ರೀಯ ಸಮಿತಿ ವಿರುದ್ಧ ತೆಲಂಗಾಣದಲ್ಲಿ ಮುಂದಿನ ವಿಧಾನಸಭೆಯಲ್ಲಿ ಹೋರಾಡಲು ಟಿಡಿಪಿ, ಕಾಂಗ್ರೆಸ್ ಹಾಗೂ ಸಿಪಿಐ ಸೇರಿ ಮೈತ್ರಿ ಮಾಡಿಕೊಂಡಿವೆ. ಈ ಬಗ್ಗೆ ಮಂಗಳವಾರ ಘೋಷಣೆ ಮಾಡಲಾಗಿದೆ. ಈ ಮಧ್ಯೆ ಚುನಾವಣಾ ಆಯೋಗವು ಹೈದರಾಬಾದ್ ಗೆ ಎರಡು ದಿನಗಳ ಭೇಟಿಗಾಗಿ ಬಂದಿದೆ.
ಚುನಾವಣೆ ನಡೆಸಲು ಬೇಕಾದ ಸಿದ್ಧತೆ ಬಗ್ಗೆ ಪರಿಶೀಲನೆ ನಡೆಸುತ್ತಿದೆ. ಇನ್ನು ಕಾಂಗ್ರೆಸ್ ನ ಹಿರಿಯ ನಾಯಕರೊಬ್ಬರು ಮಾತನಾಡಿ, ಯಾವ ಪಕ್ಷಗಳ ಸಾಮರ್ಥ್ಯ ಏನು ಹಾಗೂ ಎಲ್ಲಿ ಗೆಲ್ಲುವ ಸಾಧ್ಯತೆಗಳು ಹೆಚ್ಚು ಎಂಬ ಬಗ್ಗೆ ಚರ್ಚೆ ನಡೆಸಿದ ನಂತರವೇ ಸೀಟು ಹಂಚಿಕೆ ಬಗ್ಗೆ ಮಾತುಕತೆ ನಡೆಸಲಾಗುವುದು ಎಂದು ತಿಳಿಸಿದ್ದಾರೆ.
119 ಸ್ಥಾನ ಬಲದ ತೆಲಂಗಾಣದಲ್ಲಿ 90 ಕ್ಷೇತ್ರಕ್ಕೆ ಕಡಿಮೆ ಇಲ್ಲದಂತೆ ಸ್ಪರ್ಧೆ ನಡೆಸಲು ಕಾಂಗ್ರೆಸ್ ಉತ್ಸುಕವಾಗಿದೆ. ತೆಲಂಗಾಣದಲ್ಲಿ ಸ್ವತಂತ್ರವಾಗಿ ಅಧಿಕಾರ ಹಿಡಿಯಲು 60 ಸ್ಥಾನಗಳಲ್ಲಿ ಗೆಲ್ಲಬೇಕಾಗುತ್ತದೆ. ಕಾಂಗ್ರೆಸ್ ಆ ಬಗ್ಗೆಯೇ ಗಮನ ಕೇಂದ್ರೀಕರಿಸಲಿದೆ ಎಂದು ಆ ಪಕ್ಷದ ನಾಯಕರು ತಿಳಿಸಿದ್ದಾರೆ.

29 ಸೀಟುಗಳನ್ನು ಮೈತ್ರಿ ಕೂಟಕ್ಕೆ ಬಿಟ್ಟುಕೊಡಬಹುದು ಎಂಬುದು ಇದರ ಲೆಕ್ಕಾಚಾರ. ಇನ್ನು ಟಿಡಿಪಿಯಿಂದ 25ರಿಂದ 30 ಸ್ಥಾನಗಳಲ್ಲಿ ಸ್ಪರ್ಧಿಸುವ ಇರಾದೆ ಹೊಂದಿದೆ. "ಕೊಟ್ಟು-ತೆಗೆದುಕೊಳ್ಳುವ ಒಪ್ಪಂದಕ್ಕೆ ಸಹಮತ ವ್ಯಕ್ತವಾದರೆ ಮೈತ್ರಿಗೆ ಯಾವುದೇ ಸಮಸ್ಯೆ ಇಲ್ಲ" ಎಂದು ಕಾಂಗ್ರೆಸ್ ನಾಯಕರು ತಿಳಿಸಿದ್ದಾರೆ.
ಕಾಂಗ್ರೆಸ್, ಟಿಡಿಪಿ, ಟಿಜೆಎಸ್ ಮತ್ತು ಸಿಪಿಐ ನಾಯಕರ ನಿಯೋಗ ಮಂಗಳವಾರ ಸಂಜೆ ರಾಜಭವನಕ್ಕೆ ತೆರಳಿ, ರಾಜ್ಯಪಾಲ ಇಎಸ್ಎಲ್ ನರಸಿಂಹನ್ ಅವರಿಗೆ ಮನವಿ ಸಲ್ಲಿಸಿ, ತೆಲಂಗಾಣದಲ್ಲಿ ರಾಷ್ಟ್ರಪತಿ ಆಡಳಿತ ಹೇರುವಂತೆ ಕೇಳಿಕೊಂಡಿದ್ದಾರೆ.
ಉಸ್ತುವಾರಿ ಮುಖ್ಯಮಂತ್ರಿ ಕೆ.ಚಂದ್ರಶೇಖರ್ ರಾವ್ ಅವರು ವಿಪಕ್ಷದ ನಾಯಕರ ಹಳೆ ಪ್ರಕರಣಗಳನ್ನು ಕೆದಕಿ, ಬಂಧನ ಆಗುವಂತೆ ಮಾಡುತ್ತಿದ್ದಾರೆ. ಕೆಸಿಆರ್ ಇದೇ ಸ್ಥಾನದಲ್ಲಿ ಮುಂದುವರಿದರೆ ನ್ಯಾಯಸಮ್ಮತ ಚುನಾವಣೆ ನಡೆಯುವುದು ಅನುಮಾನ. ಆದ್ದರಿಂದ ರಾಷ್ಟ್ರಪತಿ ಆಡಳಿತ ಹೇರಬೇಕು ಎಂದು ಪ್ರದೇಶ ಕಾಂಗ್ರೆಸ್ ಸಮಿತಿ ಅಧ್ಯಕ ಕ್ಯಾ.ಎನ್.ಉತ್ತಮ್ ಕುಮಾರ್ ರೆಡ್ಡಿ ತಿಳಿಸಿದ್ದಾರೆ.












Click it and Unblock the Notifications