2022ರೊಳಗೆ ಕಸ ಮುಕ್ತ ಹೈದರಾಬಾದ್, ಕಾಂಗ್ರೆಸ್ ಭರವಸೆ
ಹೈದರಾಬಾದ್, ನ. 24: ಗ್ರೇಟರ್ ಹೈದರಾಬಾದ್ ಮುನ್ಸಿಪಲ್ ಕಾರ್ಪೊರೇಷನ್ ಚುನಾವಣೆಗಾಗಿ ಆಡಳಿತಾರೂಢ ತೆಲಂಗಾಣ ರಾಷ್ಟ್ರ ಸಮಿತಿ ಪ್ರಣಾಳಿಕೆ ಬಿಡುಗಡೆ ಮಾಡಿದ ಬಳಿಕ ಕಾಂಗ್ರೆಸ್ ಪಕ್ಷ ಇಂದು ತನ್ನ ಪ್ರಣಾಳಿಕೆಗಳನ್ನು ಹೊರ ತಂದಿದೆ. ಕಸಮುಕ್ತ ಹೈದರಾಬಾದ್, ಉಚಿತ ನೀರು ಪೂರೈಕೆ, ಆರೋಗ್ಯ ಸಂರಕ್ಷಣೆ ಬಗ್ಗೆ ಭರಪೂರ ಭರವಸೆಗಳನ್ನು ತೆಲಂಗಾಣ ಪ್ರದೇಶ ಕಾಂಗ್ರೆಸ್ ಸಮಿತಿ(ಟಿಪಿಸಿಸಿ) ನೀಡಿದೆ.
ಗಾಂಧಿಭವನದಲ್ಲಿ ತೆಲಂಗಾಣ ಉಸ್ತುವಾರಿ ಮಾಣಿಕಂ ಠಾಗೋರ್ ಅವರು ಪ್ರಣಾಳಿಕೆ ಬಿಡುಗಡೆ ಮಾಡಿ ಮಾತನಾಡಿ, ಕೊವಿಡ್ 19 ಸಂದರ್ಭದಲ್ಲಿ ಆರೋಗ್ಯ ಸಂರಕ್ಷಣೆಗೆ ಹೆಚ್ಚಿನ ಒತ್ತು ನೀಡಲಾಗಿದೆ. ಆರೋಗ್ಯಶ್ರೀ ಯೋಜನೆಯಡಿಯಲ್ಲಿ ಉಚಿತವಾಗಿ ಕೊವಿಡ್ 19 ಚಿಕಿತ್ಸೆ ನೀಡಲಾಗುವುದು ಎಂದರು.

ಪ್ರಣಾಳಿಕೆ ಮುಖ್ಯಾಂಶಗಳು:
* 30,000 ಲೀಟರ್ ಗಳಷ್ಟು ಕುಡಿಯುವ ನೀರು ಉಚಿತವಾಗಿ ಜನರಿಗೆ ಒದಗಿಸಲಾಗುವುದು.
* ಮಳೆಯಿಂದ ಸಂತ್ರಸ್ತ ಕುಟುಂಬಗಳಿಗೆ 50, 000 ರು, ಮನೆ ಕಳೆದುಕೊಂಡವರಿಗೆ 2.5 ಲಕ್ಷ ರು ನಿಂದ 5 ಲಕ್ಷ ನೀಡಲಾಗುವುದು.
* ಪ್ರವಾಹದಲ್ಲಿ ಮೃತಪಟ್ಟವರ ಕುಟುಂಬದ ನೆರವಿಗಾಗಿ 25 ಲಕ್ಷ ರು ಮೀಸಲಿಡಲಾಗಿದೆ.
* ನೈಸರ್ಗಿಕ ವಿಪತ್ತು ನಿರ್ವಹಣೆಗಾಗಿ ಎನ್ ಡಿ ಎಂಎ ನೀಡಿದ ನಿಯಮಾವಳಿ ಪಾಲಿಸಲು ಸೂಚನೆ.
* ಜಪಾನ್ ತಂತ್ರಜ್ಞಾನ ಬಳಸಿ ಭೂಗತ ಜಲ ಸಂರಕ್ಷಣಾ ವ್ಯವಸ್ಥೆ ಕಲ್ಪಿಸಲಾಗುವುದು, ಪ್ರವಾಹ ನಿಯಂತ್ರಣ ಸಾಧಿಸಲಾಗುವುದು.
* 2022ರೊಳಗೆ ಹೈದರಾಬಾದ್ ನಗರವನ್ನು ಸಂಪೂರ್ಣ ಕಸಮುಕ್ತಗೊಳಿಸಲಾಗುವುದು.
* ಭೂ ಸುಧಾರಣಾ ನಿಯಮ(ಎಲ್ ಆರ್ ಎಸ್) ಹಾಗೂ ಕಟ್ಟಡ ಸುಧಾರಣಾ ನಿಯಮಗಳನ್ನು ಯಾವುದೇ ಶುಲ್ಕವಿಲ್ಲದೆ ಜಾರಿಗೆ ತರಲಾಗುವುದು.
* ಮಾಜಿ ಯೋಧ, ಹುತಾತ್ಮ ಯೋಧರ ಕುಟುಂಬಗಳಿಗೆ ಆಸ್ತಿ ತೆರಿಗೆಯನ್ನು ವಿಧಿಸುವುದಿಲ್ಲ.
150 ಸದಸ್ಯರ ಆಯ್ಕೆಗಾಗಿ ಡಿಸೆಂಬರ್ 01ರಂದು ಬೆಳಗ್ಗೆ 7 ರಿಂದ ಸಂಜೆ 6 ತನಕ ಮತದಾನದ ನಡೆಯಲಿದೆ. ಡಿಸೆಂಬರ್ 4ರಂದು ಮತ ಎಣಿಕೆ ನಡೆಯಲಿದೆ. ನಾಮಪತ್ರ ಸಲ್ಲಿಸಲು ನವೆಂಬರ್ 20 ಕೊನೆ ದಿನಾಂಕವಾಗಿತ್ತು. ಹಾಲಿ ಪಾಲಿಕೆ ಅವಧಿ ಫೆಬ್ರವರಿ 10, 2021ರಂದು ಕೊನೆಗೊಳ್ಳಲಿದೆ. ಸಾಮಾನ್ಯ ವರ್ಗದ ಮಹಿಳೆಗೆ ಈ ಬಾರಿ ಮೇಯರ್ ಸ್ಥಾನ ಮೀಸಲಾಗಿದೆ.












Click it and Unblock the Notifications