ತೆಲಂಗಾಣ ರೈತರಿಂದ ಸಂಪೂರ್ಣ ಭತ್ತ ಖರೀದಿ; ಅಮಿತ್ ಶಾ ಭರವಸೆ
ಹೈದರಾಬಾದ್, ಮೇ 15: "ತೆಲಂಗಾಣದಲ್ಲಿ ಬಿಜೆಪಿ ಅಧಿಕಾರಕ್ಕೆ ಬಂದರೆ ರೈತರು ಬೆಳೆಯುವ ಸಂಪೂರ್ಣ ಭತ್ತವನ್ನು ಸರಕಾರ ಖರೀದಿಸಲಿದೆ" ಎಂದು ಕೇಂದ್ರ ಗೃಹ ಸಚಿವ ಅಮಿತ್ ಶಾ ಭರವಸೆ ನೀಡಿದರು.
ಹೈದರಾಬಾದ್ನ ಹೊರವಲಯದಲ್ಲಿ ಭಾನುವಾರ ಬಿಜೆಪಿ ಆಯೋಜಿಸಿದ್ದ ಪ್ರಚಾರ ಸಭೆಯಲ್ಲಿ ಮಾತನಾಡಿದ ಅವರು, "ರಾಜ್ಯದಲ್ಲಿ ಬಿಜೆಪಿ ಸರಕಾರವು ಧರ್ಮದ ಆಧಾರದಲ್ಲಿ ಮಾಡಿರುವ ಎಲ್ಲಾಅಲ್ಪಸಂಖ್ಯಾತರ ಮೀಸಲನ್ನು ರದ್ದುಗೊಳಿಸಿ, ಪರಿಶಿಷ್ಟ ಜಾತಿ, ಪರಿಶಿಷ್ಟ ಪಂಗಡ ಹಾಗೂ ಇತರೆ ಹಿಂದುಳಿದ ವರ್ಗಗಳ ಮೀಸಲಾತಿಯನ್ನು ಹೆಚ್ಚಿಸಲಿದೆ'' ಎಂದರು.
"ಭತ್ತ ಖರೀದಿಯು ರಾಜ್ಯ ಸರಕಾರದ ಹೊಣೆಯಾಗಿದೆ. ಆದರೆ ತೆಲಂಗಾಣ ಮುಖ್ಯಮಂತ್ರಿ ಕೆ. ಚಂದ್ರಶೇಖರ ರಾವ್ ನೇತೃತ್ವದ ಸರಕಾರವು ಈ ಹೊಣೆಗಾರಿಕೆಯನ್ನು ನಿಭಾಯಿಸಲು ವಿಫಲವಾಗಿದೆ. ಭತ್ತ ಖರೀದಿ ವಿಷಯದಲ್ಲಿ ಹೊಣೆಗಾರಿಕೆ ಮರೆತಿರುವ ಟಿಆರ್ಎಸ್ ಸರಕಾರವು, ತನ್ನ ವೈಫಲ್ಯವನ್ನು ಮುಚ್ಚಿಕೊಳ್ಳಲು ಕೇಂದ್ರ ಸರಕಾರದ ಮೇಲೆ ಗೂಬೆ ಕೂರಿಸುತ್ತಿದೆ'' ಎಂದು ದೂರಿದರು.
"ರೈತರಿಂದ ಸಂಪೂರ್ಣವಾಗಿ ಭತ್ತ ಖರೀದಿಸಲು ಸಾಧ್ಯವಾಗದಿದ್ದರೆ ಕೆ. ಚಂದ್ರಶೇಖರ ರಾವ್ ರಾಜೀನಾಮೆ ನೀಡಿ, ಸರಕಾರವನ್ನು ವಿಸರ್ಜಿಸಲಿ. ಬಿಜೆಪಿಯು ಇದರ ಹೊಣೆಗಾರಿಕೆ ವಹಿಸಲಿದ್ದು, ರಾಜ್ಯದ ಪ್ರತಿಯೊಬ್ಬ ರೈತರಿಂದ ಬಿಜೆಪಿ ಸರಕಾರವು ಸಂಪೂರ್ಣ ಭತ್ತವನ್ನು ಖರೀದಿಸಲಿದೆ'' ಎಂದು ಅಮಿತ್ ಶಾ ಹೇಳಿದರು.
"ಮುಸ್ಲಿಮರು ಮತ್ತು ಇತರ ಅಲ್ಪಸಂಖ್ಯಾತರಿಗೆ ಸದ್ಯ ನೀಡಿರುವ ಮೀಸಲಾತಿಯು ಎಸ್, ಎಸ್ಟಿ, ಒಬಿಸಿ ಸೇರಿದಂತೆ ಸಾಮಾಜಿಕವಾಗಿ ಹಿಂದುಳಿದ ವರ್ಗಗಳ ಮೇಲೆ ನಕಾರಾತ್ಮಕ ಪರಿಣಾಮ ಬೀರಿದೆ. ಬಿಜೆಪಿ ಸರಕಾರ ಅಧಿಕಾರಕ್ಕೆ ಬಂದರೆ ರಾಜ್ಯದಲ್ಲಿ ಧರ್ಮದ ಆಧಾರದಲ್ಲಿ ಕಲ್ಪಿಸಿರುವ ಅಲ್ಪಸಂಖ್ಯಾತರ ಮೀಸಲಾತಿಯನ್ನು ರದ್ದುಗೊಳಿಸಲಿದೆ. ಈ ಕ್ರಮವು ಅವಕಾಶ ವಂಚಿತರಿಗೆ ವರದಾನವಾಗಲಿದೆ'' ಎಂದು ಅಮಿತ್ ಶಾ ಭರವಸೆ ನೀಡಿದರು.