ಗಡ್ಡ ಬಿಟ್ಟಿರುವ ವ್ಯಕ್ತಿ ಜತೆ ಚರ್ಚೆ ಮಾಡಿ: ಅಮಿತ್ ಶಾಗೆ ಓವೈಸಿ ಸವಾಲು
ಹೈದರಾಬಾದ್, ಜನವರಿ 22: ವಿವಾದಾತ್ಮಕ ಪೌರತ್ವ ತಿದ್ದುಪಡಿ ಕಾಯ್ದೆ ಕುರಿತು ತಾಕತ್ತಿದ್ದರೆ ತಮ್ಮೊಂದಿಗೆ ಚರ್ಚೆಗೆ ಬರುವಂತೆ ಎಐಎಂಐಎಂ ಪಕ್ಷದ ನಾಯಕ ಅಸಾದುದ್ದೀನ್ ಓವೈಸಿ, ಗೃಹ ಸಚಿವ ಅಮಿತ್ ಶಾಗೆ ಸವಾಲು ಹಾಕಿದ್ದಾರೆ.
ಲಕ್ನೋದಲ್ಲಿ ಮಂಗಳವಾರ ಸಿಎಎ ಪರ ಸಮಾವೇಶದಲ್ಲಿ ಮಾತನಾಡಿದ ಅಮಿತ್ ಶಾ, ವಿವಾದಾತ್ಮಕ ಕಾನೂನಿನ ಬಗ್ಗೆ ದೇಶದ ಯಾವುದೇ ಮೂಲೆಯಲ್ಲಿ ಬೇಕಾದರೂ ಬಹಿರಂಗ ಚರ್ಚೆಗೆ ಸಿದ್ಧ ಎಂದು ರಾಹುಲ್ ಗಾಂಧಿ, ಮಮತಾ ಬ್ಯಾನರ್ಜಿ, ಅಖಿಲೇಶ್ ಯಾದವ್ ಮುಂತಾದವರಿಗೆ ಸವಾಲು ಹಾಕಿದ್ದರು.
'ಮಮತಾ ದೀದಿ, ರಾಹುಲ್ ಜಿ, ಅಖಿಲೇಶ್ಜಿ, ಮಾಯಾವತಿ ಜಿ, ದೇಶದ ಯಾವುದೇ ಭಾಗದಲ್ಲಿ ಪೌರತ್ವ ಕಾಯ್ದೆಯ ಕುರಿತು ಚರ್ಚೆಗೆ ಸವಾಲು ಹಾಕುತ್ತೇನೆ. ಯಾರದ್ದೇ ಪೌರತ್ವವನ್ನು ಕಸಿದುಕೊಳ್ಳುವ ಬಗ್ಗೆ ಮಸೂದೆಯ ಯಾವುದಾದರೂ ಭಾಗ ಹೇಳಿದ್ದರೆ ತಾಕತ್ತಿದ್ದರೆ ತೋರಿಸಿ' ಎಂದು ಅಮಿತ್ ಶಾ ಹೇಳಿದ್ದರು.

ನನ್ನ ಜತೆ ಚರ್ಚಿಸಿ
'ಅವರೊಂದಿಗೆ ಚರ್ಚೆ ಏಕೆ? ನನ್ನೊಂದಿಗೆ ಚರ್ಚೆ ಮಾಡಿ' ಎಂದು ತೆಲಂಗಾಣದ ಕರೀಂನಗರದಲ್ಲಿ ಎಐಎಂಐಎಂ ಪಕ್ಷದಿಂದ ನಡೆದ ಸಮಾವೇಶದ ವೇಳೆ ಅಸಾದುದ್ದೀನ್ ಓವೈಸಿ, ಪೌರತ್ವ ತಿದ್ದುಪಡಿ ಕಾಯ್ದೆ ಕುರಿತ ಚರ್ಚೆಗಾಗಿ ಗೃಹ ಸಚಿವ ಅಮಿತ್ ಶಾಗೆ ಸವಾಲೊಡ್ಡಿದ್ದಾರೆ.

ಗಡ್ಡಬಿಟ್ಟವನೊಂದಿಗೆ ಚರ್ಚಿಸಿ
'ನೀವು ನನ್ನೊಂದಿಗೆ ಚರ್ಚೆ ನಡೆಸಬೇಕು. ನಾನು ಇಲ್ಲಿದ್ದೇನೆ. ಅವರೊಂದಿಗೆ ಚರ್ಚೆ ಏಕೆ? ಈ ಚರ್ಚೆಯು ಗಡ್ಡ ಬಿಟ್ಟಿರುವ ವ್ಯಕ್ತಿಯೊಂದಿಗೆ ನಡೆಯಬೇಕು. ನಾನು ಅವರೊಂದಿಗೆ ಸಿಎಎ, ಎನ್ಪಿಆರ್ (ರಾಷ್ಟ್ರೀಯ ಜನಸಂಖ್ಯಾ ನೋಂದಣಿ) ಮತ್ತು ಎನ್ಆರ್ಸಿ (ರಾಷ್ಟ್ರೀಯ ಪೌರತ್ವ ನೋಂದಣಿ) ಬಗ್ಗೆ ಅವರೊಂದಿಗೆ ಚರ್ಚೆ ನಡೆಸಬಲ್ಲೆ' ಎಂದ ಓವೈಸಿ, ಮುಖದ ಮೇಲಿನ ಕೂದಲು ಮುಸ್ಲಿಂ ಪುರುಷರು ನಿಭಾಯಿಸಬೇಕಾದ ನಿಯಮಗಳಲ್ಲಿ ಒಂದು ಎಂದರು.

ನಾವು ದೇಶವನ್ನು ಆಳಿದ್ದೇವೆ-ಅಕ್ಬರುದ್ದೀನ್ ಓವೈಸಿ
'ಯಾರೂ ಹೆದರುವ ಅಗತ್ಯವಿಲ್ಲ. ಇಂದು ಮುಸ್ಲಿಮರ ಬಳಿ ಏನು ಇದೆ ಎಂದು ಅವರು ಕೇಳುತ್ತಿದ್ದಾರೆ. ನೀವು ನನ್ನ ದಾಖಲೆ ನೋಡಲು ಬಯಸಿದ್ದೀರಾ? 800 ವರ್ಷಗಳವರೆಗೆ ನಾನು ಈ ದೇಶವನ್ನು ಆಳಿದ್ದೇನೆ. ಈ ದೇಶ ನನಗೆ ಸೇರಿದ್ದು, ನನಗೆ ಸೇರಿದ್ದು ಮತ್ತು ಅದು ನನ್ನದಾಗಿಯೇ ಇರಲಿದೆ. ನನ್ನ ಪೂರ್ವಜರು ಈ ದೇಶಕ್ಕೆ ಚಾರ್ಮಿನಾರ್, ಜಾಮೀಯಾ ಮಸೀದಿ, ಮೆಕ್ಕಾ ಮಸೀದಿ, ಕುತುಬ್ ಮಿನಾರ್ಗಳನ್ನು ನೀಡಿದ್ದಾರೆ. ಈ ದೇಶದ ಪ್ರಧಾನಿ ತ್ರಿವರ್ಣ ಧ್ವಜ ಹಾರಿಸುವ ಕೆಂಪುಕೋಟೆಯನ್ನು ಕೂಡ ನಿಮಗೆ ನೀಡಿದ್ದು ನನ್ನ ಪೂರ್ವಜರು. ನಿಮಗೆ ನನ್ನ ದಾಖಲೆ ಬೇಕೇ? ಚಾರ್ ಮಿನಾರ್ ನೋಡಿ. ಅದು ನನ್ನ ಪೂರ್ವಜರು ಮಾಡಿದ ಅತಿ ದೊಡ್ಡ ದಾಖಲೆ' ಎಂದು ಎಐಎಂಐಎಂ ಮುಖಂಡ ಅಕ್ಬರುದ್ದೀನ್ ಓವೈಸಿ ಮಂಗಳವಾರ ಹೇಳಿದ್ದರು.

ಪ್ರತಿಭಟನೆ ಮಾಡಿಕೊಳ್ಳಲಿ- ಅಮಿತ್ ಶಾ
ಸಿಎಎ ಕುರಿತು ವಿರೋಧಪಕ್ಷಗಳು ಸುಳ್ಳು ಸುದ್ದಿ ಹರಡುತ್ತಿವೆ. ಸಿಎಎದಲ್ಲಿ ಯಾರದ್ದೇ ಪೌರತ್ವವನ್ನು ಕಿತ್ತುಕೊಳ್ಳಲು ಅವಕಾಶವಿಲ್ಲ. ಕಾಂಗ್ರೆಸ್, ಎಸ್ಪಿ, ಬಿಎಸ್ಪಿ ಮತ್ತು ಟಿಎಂಸಿಗಳು ಸಿಎಎ ವಿರುದ್ಧ ಸುಳ್ಳು ವದಂತಿಗಳನ್ನು ಹಬ್ಬಿಸುತ್ತಿವೆ . ಏನೇ ಬಂದರೂ ಕಾಯ್ದೆಯ ನಿಲುವು ಬದಲಾಗುವುದಿಲ್ಲ. ಅವರು ಅಲ್ಲಿ ಇಲ್ಲಿ ಹೇಳಿಕೊಳ್ಳಲಿ. ಕಾಯ್ದೆಯನ್ನು ಹಿಂದಕ್ಕೆ ಪಡೆಯುವುದಿಲ್ಲ. ಯಾರು ಪ್ರತಿಭಟನೆ ಮಾಡುತ್ತಾರೋ ಮಾಡಿಕೊಳ್ಳಲಿ. ನಾವು ವಿರೋಧಿಗಳಿಗೆ ಹೆದರುವುದಿಲ್ಲ ಎಂದು ಅಮಿತ್ ಶಾ ಹೇಳಿದ್ದರು.












Click it and Unblock the Notifications