75ನೇ ವರ್ಷದ ಸ್ವಾತಂತ್ರ್ಯ ಸಂಭ್ರಮ: ಮಹಾತ್ಮ ಗಾಂಧಿಯನ್ನು ನೋಡಲು ದೇವಸ್ಥಾನಕ್ಕೆ ಬರುತ್ತಿರುವ ಜನ
ಹೈದರಾಬಾದ್, ಆಗಸ್ಟ್ 14: ಇಡೀ ದೇಶವೇ 75ನೇ ವರ್ಷದ ಸ್ವಾತಂತ್ರ್ಯ ಸಂಭ್ರಮದಲ್ಲಿ ಮಿಂದೇಳುತ್ತಿದೆ. ಪ್ರತಿಯೊಬ್ಬರ ಮನೆಯಲ್ಲೂ ತ್ರಿವರ್ಣ ಧ್ವಜ ಹಾರಾಡುತ್ತಿದೆ. ದೇಶಕ್ಕೆ ಸ್ವಾತಂತ್ರ್ಯ ತಂದುಕೊಡಲು ಹೋರಾಡಿದ ಮಹನೀಯರನ್ನು ಸ್ಮರಿಸಲಾಗುತ್ತಿದೆ.
ತೆಲಂಗಾಣದ ನಲ್ಗೊಂಡ ಜಿಲ್ಲೆಯಲ್ಲಿರುವ ಮಹಾತ್ಮ ಗಾಂಧೀಜಿ ದೇವಸ್ಥಾನಕ್ಕೆ ಬರುವ ಭಕ್ತರ ಸಂಖ್ಯೆಯಲ್ಲಿ ಗಣನೀಯ ಹೆಚ್ಚಳವಾಗಿದೆ. ಪಾದಯಾತ್ರೆಯ ಮೂಲಕ ಬಂದು ಮಹಾತ್ಮ ಗಾಂಧಿಯ ದರ್ಶನ ಪಡೆಯುತ್ತಿದ್ದಾರೆ. ಸುತ್ತಮುತ್ತಲಿನ ಹಲವು ಗ್ರಾಮಸ್ಥರು ದೇವಸ್ಥಾನಕ್ಕೆ ಭೇಟಿ ಕೊಡುತ್ತಿದ್ದು, ಮಹಾತ್ಮ ಗಾಂಧಿ ದರ್ಶನ ಪಡೆಯುತ್ತಿದ್ದಾರೆ.
ಮಾನವ ತಿರಂಗದ ಮೂಲಕ ಗಿನ್ನಿಸ್ ದಾಖಲೆ ಮಾಡಿದ ಚಂಡೀಗಢ
ಹೈದರಾಬಾದ್ನಿಂದ ಸುಮಾರು 75 ಕಿ. ಮೀ. ದೂರದಲ್ಲಿರುವ ತೆಲಂಗಾಣದ ಚಿತ್ಯಾಲ್ ಪಟ್ಟಣದ ಸುತ್ತಮುತ್ತಲಿನ ಅನೇಕ ಜನರಿಗೆ ಮಹಾತ್ಮಾ ಗಾಂಧಿ ದೇವಸ್ಥಾನಕ್ಕೆ ಭೇಟಿ ನೀಡುವುದು ಭಾವನಾತ್ಮಕ ಬೆಸುಗೆಯಾಗಿ ಮಾರ್ಪಟ್ಟಿದೆ.
ಜಿಲ್ಲೆಯ ಚಿತ್ಯಾಲ್ ಪಟ್ಟಣದ ಸಮೀಪದಲ್ಲಿರುವ ಪೆದ್ದ ಕಪರ್ತಿ ಗ್ರಾಮದಲ್ಲಿ ಮೊದಲ ಬಾರಿಗೆ ಈ ರೀತಿಯ ದೇವಾಲಯವು ದೂರದ ಜನರ ಗಮನ ಸೆಳೆಯುತ್ತಿದೆ ಎಂದು ದೇಗುಲವನ್ನು ನಿರ್ವಹಿಸುವ ಮಹಾತ್ಮ ಗಾಂಧಿ ಚಾರಿಟಬಲ್ ಟ್ರಸ್ಟ್ನ ಕಾರ್ಯದರ್ಶಿ ಪಿ. ವಿ. ಕೃಷ್ಣರಾವ್ ಹೇಳುತ್ತಾರೆ.
ಸಂದರ್ಶಕರ ಸಂಖ್ಯೆಯಲ್ಲಿ ಹೆಚ್ಚಳ
ಸಾಮಾನ್ಯ ದಿನದಲ್ಲಿ 60-70 ಸಂದರ್ಶಕರು ಮಾತ್ರ ಮಹಾತ್ಮ ಗಾಂಧಿ ದೇವಸ್ಥಾನಕ್ಕೆ ಭೇಟಿ ನೀಡುತ್ತಿದ್ದರು. ತೆಲಂಗಾಣ ಸರ್ಕಾರ ಮತ್ತು 75 ನೇ ಸ್ವಾತಂತ್ರ್ಯದ ವರ್ಷವನ್ನು ಆಚರಿಸಲು ಕೇಂದ್ರ ಹಲವು ಕ್ರಮಗಳನ್ನು ತೆಗೆದುಕೊಂಡ ನಂತರ ಪ್ರತಿದಿನ ಸುಮಾರು 350 ಮಂದಿ ಭಕ್ತರು ಗಾಂಧೀಜಿ ದೇವಸ್ಥಾನಕ್ಕೆ ಭೇಟಿ ನೀಡುತ್ತಿದ್ದಾರೆ ಎಂದು ಎಂದು ಮಹಾತ್ಮ ಗಾಂಧಿ ಚಾರಿಟಬಲ್ ಟ್ರಸ್ಟ್ನ ಕಾರ್ಯದರ್ಶಿ ಪಿ. ವಿ. ಕೃಷ್ಣರಾವ್ ಹೇಳುತ್ತಾರೆ.
"ಸಾಮಾನ್ಯವಾಗಿ ಪ್ರತಿದಿನ ಸುಮಾರು 60 ರಿಂದ 70 ಜನರು ದೇವಸ್ಥಾನಕ್ಕೆ ಪ್ರಾರ್ಥನೆ ಸಲ್ಲಿಸಲು ಬರುತ್ತಾರೆ. ಈಗ ಕೇಂದ್ರದ ಆಜಾದಿ ಕಾ ಅಮೃತ್ ಮಹೋತ್ಸವ ಮತ್ತು ತೆಲಂಗಾಣ ಸರ್ಕಾರದಿಂದ ಸ್ವತಂತ್ರ ಭಾರತ ವಜ್ರೋತ್ಸವದ ಹೆಸರಿನಲ್ಲಿ ವ್ಯಾಪಕ ಪ್ರಚಾರ ನೀಡುತ್ತಿರುವುದರಿಂದ, ಪ್ರವಾಸಿಗರ ಸಂಖ್ಯೆ ದಿನಕ್ಕೆ 300 ರಿಂದ 340 ಕ್ಕೆ ಏರಿದೆ" ಎಂದು ಅವರು ಪಿಟಿಐಗೆ ತಿಳಿಸಿದರು.
2014ರಲ್ಲಿ ದೇವಾಲಯ ನಿರ್ಮಾಣ
2014ರಲ್ಲಿ ನಿರ್ಮಾಣವಾದ ಈ ದೇವಾಲಯದಲ್ಲಿ ಆಗಸ್ಟ್ 15ರ ಸ್ವಾತಂತ್ರ್ಯೋತ್ಸವದ ಪ್ರಯುಕ್ತ ಯಾವುದೇ ವಿಶೇಷ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳದಿದ್ದರೂ ಅಕ್ಟೋಬರ್ 2ರ ಗಾಂಧಿ ಜಯಂತಿಯಂದು ವಿಶೇಷ ಪೂಜೆಗಳನ್ನು ಆಯೋಜಿಸಲಾಗುತ್ತದೆ ಎಂದರು.
ಜನರು ನಿಯಮಿತವಾಗಿ ಬಂದು ತಮ್ಮ ಕುಟುಂಬ ಸದಸ್ಯರೊಂದಿಗೆ ಪ್ರಾರ್ಥನೆ ಸಲ್ಲಿಸುವ ಮೂಲಕ ದೇವಾಲಯವು ನಿಧಾನವಾಗಿ ಪ್ರಾಮುಖ್ಯತೆಯನ್ನು ಪಡೆಯುತ್ತಿದೆ ಎಂದು ಅವರು ಹೇಳಿದರು.
ಹೈದರಾಬಾದ್-ವಿಜಯವಾಡ ಹೆದ್ದಾರಿಗೆ ಸಮೀಪವಿರುವ ನಾಲ್ಕು ಎಕರೆ ಭೂಮಿಯಲ್ಲಿ ನಿರ್ಮಿಸಲಾದ ಈ ದೇವಾಲಯದಲ್ಲಿ ಮಹಾತ್ಮ ಗಾಂಧೀಜಿ ಕುಳಿತ ಭಂಗಿಯಲ್ಲಿ ಜನರಿಗೆ ಆಶೀರ್ವಾದ ನೀಡುತ್ತಾರೆ.
ಮಹಾತ್ಮನ ಆಶೀರ್ವಾದ ಪಡೆಯುವ ದಂಪತಿಗಳು
ದೇವಸ್ಥಾನದ ಟ್ರಸ್ಟ್ ಕೂಡ ಚಿತ್ಯಾಲ್ನ ಹತ್ತಿರದ ಹಳ್ಳಿಗಳಲ್ಲಿ ದಂಪತಿಗಳಿಗೆ ಅವರ ಮದುವೆಯ ದಿನದಂದು ರೇಷ್ಮೆ ವಸ್ತ್ರಗಳನ್ನು ನೀಡಲು ಪ್ರಾರಂಭಿಸಿತು ಎಂದು ಪಿ. ವಿ. ಕೃಷ್ಣರಾವ್ ಹೇಳಿದ್ದಾರೆ.
ಬಂಧುಗಳು, ಸ್ನೇಹಿತರಿಗೆ ಮದುವೆಯ ಆಮಂತ್ರಣ ಪತ್ರಿಕೆಗಳನ್ನು ವಿತರಿಸುವ ಮೊದಲು ಗ್ರಾಮಸ್ಥರು ದೇವಾಲಯಕ್ಕೆ ಭೇಟಿ ನೀಡಿ ಪ್ರಾರ್ಥನೆ ಸಲ್ಲಿಸಿ ಬಾಪುವಿನ ಆಶೀರ್ವಾದ ಪಡೆಯುವುದು ಹೊಸ ಸಂಪ್ರದಾಯವಾಗಿದೆ ಎಂದು ಅವರು ಹೇಳಿದರು.
ಗಾಂಧೀಜಿ ದೈವಿಕತೆಯ ವ್ಯಕ್ತಿ
ಸ್ವಾತಂತ್ರ್ಯದ 75 ನೇ ವರ್ಷದ ಸಂದರ್ಭದಲ್ಲಿ ಯಾವುದೇ ವಿಶೇಷ ಕಾರ್ಯಕ್ರಮಗಳು ನಡೆಯುತ್ತವೆಯೇ ಎಂದು ಕೇಳಿದಾಗ, ಕೃಷ್ಣರಾವ್ ಅವರು ಗಾಂಧೀಜಿಯನ್ನು ಕೇವಲ ಸ್ವಾತಂತ್ರ್ಯ ಹೋರಾಟಕ್ಕೆ ಸೀಮಿತಗೊಳಿಸುವುದಿಲ್ಲ ಎಂದು ಹೇಳಿದರು. "ನಾವು ಅವರನ್ನು ಮಹಾತ್ಮ ಎನ್ನುವುದಕ್ಕಿಂತ ದೈವಿಕತೆಯ ವ್ಯಕ್ತಿ ಎಂದು ನೋಡುತ್ತೇವೆ" ಎಂದು ಅವರು ಹೇಳಿದರು.
ತೆಲಂಗಾಣ ಪ್ರವಾಸೋದ್ಯಮ ಇಲಾಖೆಯು ಈ ದೇವಾಲಯವನ್ನು ರಾಜ್ಯದ ದೈವಿಕ ತಾಣಗಳಲ್ಲಿ ಒಂದಾಗಿ ಸೇರಿಸಿದೆ. ಮದ್ಯ ಮತ್ತು ಮಾಂಸಾಹಾರ ಸೇವನೆಯನ್ನು ದೇವಸ್ಥಾನದಲ್ಲಿ ನಿಷೇಧಿಸಲಾಗಿದೆ. ಅಂತರ್ಜಾತಿ ವಿವಾಹಗಳಿಗೆ ದೇವಾಲಯದ ಟ್ರಸ್ಟ್ ಆವರಣದಲ್ಲಿರುವ ಮದುವೆ ಮಂಟಪವನ್ನು ಅತಿ ಕಡಿಮೆ ಬಾಡಿಗೆಗೆ ನೀಡುತ್ತದೆ.