ಹಾಡಹಗಲೇ ನಡುರಸ್ತೆಯಲ್ಲಿ ಎಐಎಂಐಎಂ ಮುಖಂಡನ ಬರ್ಬರ ಹತ್ಯೆ
ಹೈದರಾಬಾದ್, ಏಪ್ರಿಲ್ 1: ಅಸಾದುದ್ದೀನ್ ಓವೈಸಿ ಅವರ ಎಐಎಂಐಎಂ ಪಕ್ಷದ ಮುಖಂಡ ಅಸಾದ್ ಖಾನ್ (40) ಅವರನ್ನು ಹೈದರಾಬಾದ್ನ ಜನನಿಬಿಡ ರಸ್ತೆಯಲ್ಲಿ ಗುರುವಾರ ಹಾಡಹಗಲೇ ಬರ್ಬರವಾಗಿ ಹತ್ಯೆ ಮಾಡಲಾಗಿದೆ.
ಹೈದರಾಬಾದ್ ಓಲ್ಡ್ ಸಿಟಿಯ ಮೈಲಾರದೇವಪಲ್ಲಿ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿನ ವಟ್ಟಪಲ್ಲಿ ಪ್ರದೇಶದಲ್ಲಿ ಈ ಘಟನೆ ನಡೆದಿದೆ. ಎಐಎಂಐಎಂ ಮುಖ್ಯಸ್ಥ ಅಸಾದುದ್ದೀನ್ ಓವೈಸಿ ಅವರ ಭದ್ರಕೋಟೆ ಎಂದು ಪರಿಗಣಿಸಲಾದ ಪ್ರದೇಶ ಇದು. ಕೊಲೆಗಾರರನ್ನು ಇನ್ನೂ ಗುರುತಿಸಲು ಸಾಧ್ಯವಾಗಿಲ್ಲ.
ಕೊಲೆ ಪ್ರಕರಣ: ಎನ್ಐಎಯಿಂದ ಟಿಎಂಸಿ ಮುಖಂಡನ ಬಂಧನ
ಸ್ಥಳೀಯ ಎಐಎಂಐಎಂ ಮುಖಂಡರಾಗಿದ್ದ ಅಸಾದ್ ಖಾನ್ ಅಪರಾಧ ಹಿನ್ನೆಲೆ ಹೊಂದಿದ್ದು, ಸೇಡಿನ ಕಾರಣಕ್ಕೆ ಈ ಹತ್ಯೆ ನಡೆದಿರಬಹುದು ಎಂದು ಪೊಲೀಸರು ಹೇಳಿದ್ದಾರೆ. ಪೊಲೀಸರು ಪ್ರಕರಣದ ತನಿಖೆ ನಡೆಸುತ್ತಿದ್ದು, ಅಪರಾಧಿಗಳನ್ನು ಪತ್ತೆ ಹಚ್ಚಲು ಸಾಕ್ಷ್ಯಗಳನ್ನು ಸಂಗ್ರಹಿಸುತ್ತಿದ್ದಾರೆ.
ತೀವ್ರ ಜನಸಂದಣಿ ಇರುವ ಮುಖ್ಯ ರಸ್ತೆಯಲ್ಲಿ ದ್ವಿಚಕ್ರ ವಾಹನದಲ್ಲಿ ಶಾಸ್ತ್ರಿಪುರಂ ರಸ್ತೆಯ ಸಾರ್ವಜನಿಕ ಸಭಾಂಗಣದ ಸಮೀಪ ತೆರಳುತ್ತಿದ್ದಾಗ ಅಸಾದ್ ಖಾನ್ ಮೇಲೆ ಹಲ್ಲೆ ನಡೆಸಲಾಗಿದೆ. ಹರಿತವಾದ ಆಯುಧಗಳನ್ನು ಬಳಸಿದ ದುಷ್ಕರ್ಮಿಗಳು ಹಗಲಿನ ವೇಳೆ ಜನರ ಕಣ್ಣೆದುರೇ ಅವರನ್ನು ಕೊಚ್ಚಿ, ಕತ್ತರಿಸಿ ಹಾಕಿದ್ದಾರೆ. ಬಳಿಕ ಸ್ಥಳದಿಂದ ಪರಾರಿಯಾಗಿದ್ದಾರೆ.
ತೀವ್ರ ಗಾಯಗಳಿಂದ ರಕ್ತದ ಮಡುವಿನಲ್ಲಿ ಬಿದ್ದಿದ್ದ ಅಸಾದ್ ಖಾನ್ ಅವರನ್ನು ಒಸ್ಮಾನಿಯಾ ಆಸ್ಪತ್ರೆಗೆ ದಾಖಲಿಸಲಾಯಿತು. ಆದರೆ ಅವರನ್ನು ಕರೆತರುವಾಗಲೇ ಮೃತಪಟ್ಟಿದ್ದರು ಎಂದು ವೈದ್ಯರು ಘೋಷಿಸಿದರು. ಈ ಹಿಂದೆ ಕೊಲೆ ಪ್ರಕರಣವೊಂದರಲ್ಲಿ ಅಸಾದ್ ಬಂಧನಕ್ಕೆ ಒಳಗಾಗಿದ್ದರು. ಅನೇಕ ಅಪರಾಧ ಪ್ರಕರಣಗಳೂ ಅವರ ಮೇಲೆ ಇದೆ.