ಚುನಾವಣಾ ಕಣಕ್ಕೆ ಧುಮುಕಿದ ನಟ ಬಾಲಕೃಷ್ಣ
ಹೈದರಾಬಾದ್, ಏ.1: ತೆಲುಗು ದೇಶಂ ಪಾರ್ಟಿ ಸಂಸ್ಥಾಪಕ, ಮಾಜಿ ಮುಖ್ಯಮಂತ್ರಿ ದಿವಂಗತ ಎನ್. ಟಿ ರಾಮರಾವ್ ಅವರ ಪುತ್ರ ನಟ ಬಾಲಕೃಷ್ಣ ಅವರು ಕೊನೆಗೂ ರಾಜಕೀಯ ಪ್ರವೇಶದ ಸುಳಿವು ನೀಡಿದ್ದಾರೆ. ಇತ್ತೀಚಿನ ಲೆಜೆಂಡ್ ಚಿತ್ರದ ಭರ್ಜರಿ ಓಪನಿಂಗ್ ನಿಂದ ಖುಷಿಯಾಗಿರುವ ಜನಪ್ರಿಯ ನಟ ಬಾಲಕೃಷ್ಣ ಅವರು ವಿವಿಧ ದೇಗುಲಗಳಲ್ಲಿ ವಿಶೇಷ ಪೂಜೆ ಸಲ್ಲಿಸಿದ ನಂತರ ಈ ಸುದ್ದಿ ಹೊರ ಹಾಕಿದ್ದಾರೆ.
ಸಿಂಹಾಚಲಂನಲ್ಲಿರುವ ಶ್ರೀಲಕ್ಷ್ಮಿ ನರಸಿಂಗ ಸ್ವಾಮಿ ದೇಗುಲದಲ್ಲಿ ಮಂಗಳವಾರ ವಿಶೇಷ ಪೂಜೆ ಸಲ್ಲಿಸಿದ ನಂತರ ಪಿಟಿಐ ಸುದ್ದಿಗಾರರೊಂದಿಗೆ ಮಾತನಾಡುತ್ತಾ, ನಂದಮೂರಿ ಕುಟುಂಬಕ್ಕೂ ರಾಜಕೀಯಕ್ಕೂ ಬಿಡಿಸಲಾರದ ನಂಟಿದೆ. ತಂದೆ (ಎನ್.ಟಿ ರಾಮರಾವ್) ಅವರ ಆಶಯಗಳನ್ನು ಪೂರೈಸಲು ನಾನು ಸಕ್ರಿಯ ರಾಜಕೀಯ ಪ್ರವೇಶಿಸುವ ಅವಶ್ಯಕತೆ ಕಂಡು ಬಂದಿದೆ ಎಂದಿದ್ದಾರೆ.
ಲೋಕಸಭೆ ಚುನಾವಣೆ ಸ್ಪರ್ಧೆ, ಕ್ಷೇತ್ರ ಆಯ್ಕೆ ಬಗ್ಗೆ ಟಿಡಿಪಿ ಮುಖ್ಯಸ್ಥ ಎನ್. ಚಂದ್ರಬಾಬು ನಾಯ್ಡು ಅವರೊಡನೆ ಚರ್ಚಿಸಿ ಮುಂದಿನ ತೀರ್ಮಾನ ಕೈಗೊಳ್ಳುವುದಾಗಿ ಹೇಳಿದ್ದಾರೆ. ಬಾಲಕೃಷ್ಣ ಅವರು ಸಕ್ರಿಯ ರಾಜಕಾರಣದಲ್ಲಿ ತಮ್ಮನ್ನು ತಾವು ತೊಡಗಿಸಿಕೊಂಡ ಮೇಲೆ ಸಿನಿಮಾರಂಗದಿಂದ ದೂರಾಗುತ್ತಾರೆ ಎಂಬ ಆತಂಕಕ್ಕೂ ಉತ್ತರ ಸಿಕ್ಕಿದೆ. ರಾಜಕೀಯ ಪ್ರವೇಶಿಸಿದರೂ ಸಿನಿಮಾಗಳಲ್ಲಿ ನಟಿಸುವುದನ್ನು ನಿಲ್ಲಿಸುವುದಿಲ್ಲ ಎಂದು ನಂದಮೂರಿ ಬಾಲಕೃಷ್ಣ ಘೋಷಿಸಿದ್ದಾರೆ. [ಮೋದಿ ಮಾತನ್ನು ಕನ್ನಡದಲ್ಲಿ ಕೇಳಿರಿ]
2009ರಲ್ಲಿ ಚಂದ್ರಬಾಬು ನಾಯ್ಡು ಅವರ ಪರ ಚುನಾವಣಾ ಪ್ರಚಾರ ನಡೆಸಿದ್ದ ಬಾಲಕೃಷ್ಣ ಅವರ ರಾಜಕೀಯ ಪ್ರವೇಶ ಸುದ್ದಿ ದಟ್ಟವಾಗುತ್ತಿದ್ದಂತೆ ಆಂಧ್ರಪ್ರದೇಶದಲ್ಲಿ ಹೊಸ ಸಂಚಲನ ಉಂಟಾಗುತ್ತಿದೆ. 1982ರಲ್ಲಿ ಜನಪ್ರಿಯ ನಟ, ಮಾಜಿ ಮುಖ್ಯಮಂತ್ರಿ ಎನ್ ಟಿ ರಾಮರಾವ್ ಅವರು ತೆಲುಗು ದೇಶಂ ಪಕ್ಷ ಸ್ಥಾಪಿಸಿದ ಕೆಲ ತಿಂಗಳುಗಳಲ್ಲೇ ಅಧಿಕಾರ ಗದ್ದುಗೇರಿದ್ದರು. 1995ರಲ್ಲಿ ಅಳಿಯ ಚಂದ್ರಬಾಬು ನಾಯ್ಡು ಅವರಿಗೆ ಪಕ್ಷದ ಉಸ್ತುವಾರಿ ವಹಿಸಿಕೊಂಡಿದ್ದರು. ಇದಾದ ಕೆಲ ತಿಂಗಳ ನಂತರ ಅಸುನೀಗಿದ್ದರು.
ಬಾಲಕೃಷ್ಣ ಅವರು ಟಿಡಿಪಿ ಪರವಾಗಿ ಪ್ರಚಾರ ನಡೆಸಿದ್ದರೂ ಸಕ್ರಿಯವಾಗಿ ಪಕ್ಷದ ಚಟುವಟಿಕೆಗಳಲ್ಲಿ ತೊಡಗಿಸಿಕೊಂಡಿರಲಿಲ್ಲ. ಬಾಲಕೃಷ್ಣ ಅವರ ಪುತ್ರಿ ಬ್ರಹ್ಮಣಿ ಅವರನ್ನು ಚಂದ್ರಬಾಬು ನಾಯ್ಡು ಅವರ ಪುತ್ರ ಲೋಕೇಶ್ ವರಿಸಿದ್ದು ನಾಯ್ಡು ಅವರ ಅಣತಿಯಂತೆ ಈಗ ಬಾಲಕೃಷ್ಣ ರಾಜಕೀಯಕ್ಕೆ ಎಂಟ್ರಿ ಕೊಡುತ್ತಿದ್ದಾರೆ. ಇತ್ತೀಚೆಗಷ್ಟೇ ಬಿಜೆಪಿ-ಟಿಡಿಪಿ ಮರು ಮೈತ್ರಿ ಸಾಧಿಸಿಕೊಂಡಿದೆ. (ಪಿಟಿಐ)