ಗಾಂಧಿ ಕುರಿತ ಹೇಳಿಕೆ: ವಿವಾದ ಸೃಷ್ಟಿಸಿದ ರಾಜಮೌಳಿಯ ತಂದೆ ವಿಜಯೇಂದ್ರ ಪ್ರಸಾದ್
ಹೈದರಾಬಾದ್, ಜು. 10: ಟಾಲಿವುಡ್ ಸ್ಟಾರ್ ಡೈರೆಕ್ಟರ್ ರಾಜಮೌಳಿ ಅವರ ತಂದೆ ವಿಜಯೇಂದ್ರ ಪ್ರಸಾದ್ ಅವರು ಮಹಾತ್ಮ ಗಾಂಧೀಜಿ ಬಗ್ಗೆ ಕೊಟ್ಟಿರುವ ಹೇಳಿಕೆ ಭಾರೀ ವಿವಾದ ಸೃಷ್ಟಿಸಿದೆ. ಸದ್ಯ ರಾಜ್ಯಸಭೆಗೆ ಆಯ್ಕೆಯಾಗಿರುವ ವಿಜಯೇಂದ್ರ ಪ್ರಸಾದ್ ಅವರು ಈ ಹಿಂದೆ ಸಂದರ್ಶನವೊಂದರಲ್ಲಿ ಕೊಟ್ಟಿದ್ದ ಮಹಾತ್ಮ ಗಾಂಧೀಜಿ ಅವರ ನೆಹರು ಒಲವಿನ ಕುರಿತ ಅಭಿಪ್ರಾಯದ ವಿಡಿಯೋ ಸಾಮಾಜಿಕ ಜಾಲ ತಾಣದಲ್ಲಿ ವೈರಲ್ ಆಗಿದೆ. ಟ್ವಿಟ್ಟರ್ನಲ್ಲಿ ವಿಜಯೇಂದ್ರ ಪ್ರಸಾದ್ ವಿರುದ್ಧ ಟೀಕೆ ಮಾಡಲಾಗುತ್ತಿದೆ.
ದಕ್ಷಿಣ ಭಾರತದ ಸಿನಿ ಇತಿಹಾಸದಲ್ಲಿ ಸಿನಿಮಾ ಕಥೆಗಾರ ವಿಜಯೇಂದ್ರ ಪ್ರಸಾದ್ಅವರದ್ದು ದೊಡ್ಡ ಹೆಸರು. ವಿಜಯೇಂದ್ರ ಪ್ರಸಾದ್ ಅವರ ಕಥೆಗಳಿಗೆ ಪುತ್ರ ರಾಜಮೌಳಿಯೇ ಪರದೆ ಮೇಲೆ ತೆರೆ ಮೇಲೆ ತರುತ್ತಾರೆ. - ಅಪ್ಪ- ಮಗ ಸಿನಿ ಜೋಡಿಯ ಒಂದು ಸಿನಿಮಾ ಕೂಡ ವೈಫಲ್ಯವೇ ಕಂಡಿಲ್ಲ. ಬಾಹುಬಲಿ, RRR ಸಿನಿಮಾಗಳ ಮೂಲಕ ಭಾರತದಲ್ಲಿ ದಾಖಲೆ ನಿರ್ಮಿಸಿದ ಸಿನಿಮಾಗಳ ಕಥೆ ಬರೆದಿದ್ದ ವಿಜಯೇಂದ್ರ ಪ್ರಸಾದ್ ಅವರ ಸೇವೆ ಪರಿಗಣಿಸಿ ಅವರನ್ನು ರಾಜ್ಯಸಭೆಗೆ ನಾಮ ನಿರ್ದೇಶನ ಮಾಡಿದ್ದು, ಇನ್ನೇನು ಕೇಂದ್ರದ ರಾಜ್ಯ ಸಭೆಯಲ್ಲಿ ಸದಸ್ಯರಾಗಿ ಕಾರ್ಯ ನಿರ್ವಹಿಸಲಿದ್ದಾರೆ. ಇಂತಹ ಸಂದರ್ಭದಲ್ಲಿ ಅವರು ಈ ಹಿಂದೆ ಸಂದರ್ಶನದಲ್ಲಿ ನೀಡಿದ್ದ ಹೇಳಿಕೆ ಇದೀಗ ವಿವಾದದ ಸ್ವರೂಪ ಪಡೆದುಕೊಂಡಿದೆ.
ಜವಾಹರ ಲಾಲ್ ನೆಹರು ಅವರ ಮೇಲಿನ ಗಾಂಧಿ ಒಲವಿನಿಂದ ಸರ್ದಾರ ವಲ್ಲಭಾಯಿ ಪಟೇಲ್ ಭಾರತದ ಪ್ರಧಾನ ಮಂತ್ರಿ ಹುದ್ದೆಯಿಂದ ಅವಕಾಶ ವಂಚಿತರಾದರು. ಕಾಂಗ್ರೆಸ್ನ ಬಹುತೇಕ ನಾಯಕರಿಗೆ ಸರ್ದಾರ್ ವಲ್ಲಬಾಯಿ ಪಾಟೀಲ್ ಪ್ರಧಾನಿಯಾಗಲು ಅಭಿಪ್ರಾಯ ವ್ಯಕ್ತಪಡಿಸಿದ್ದರು. ಆದರೆ, ಮಹಾತ್ಮ ಗಾಂಧೀಜಿ ಜವಾಹರ ಲಾಲ್ ನೆಹರು ಅವರೇ ಪಿಎಂ ಆಗಬೇಕು ಎಂದ ಪಟ್ಟು ಹಿಡಿದು ಕೂತಿದ್ದರು. ಒಂದು ವೇಳೆ ಸರ್ದಾರ್ ವಲ್ಲಬಾಯಿ ಪಟೇಲ್ ಸ್ವತಂತ್ರ್ಯ ಭಾರತದ ಪ್ರಧಾನಿಯಾಗಿದ್ದಲ್ಲಿ, ಕಾಶ್ಮೀರ ಇಂದು ಹೀಗೆ ಕುದಿಯುತ್ತಿರಲಿಲ್ಲ. ಬೇರೆಯದ್ದೇ ಕಥೆ ಆಗಿರುತ್ತಿತ್ತು ಎಂದು ವಿಜಯೇಂದ್ರ ಪ್ರಸಾದ್ ಸಂದರ್ಶನದಲ್ಲಿ ಹೇಳಿಕೆ ಕೊಟ್ಟಿದ್ದರು.

ಭಾರತವನ್ನು ಬಿಟ್ಟು ಬ್ರಿಟೀಷರು ಇನ್ನೇನು ತೊಲಗಲಿದ್ದರು. ಪ್ರಧಾನಿ ಅಭ್ಯರ್ಥಿಯನ್ನು ಆಯ್ಕೆ ಮಾಡಲು ಬ್ರಿಟೀಷರು ಮಹಾತ್ಮ ಗಾಂಧೀಜಿಗೆ ಹೇಳಿಕೆ ನೀಡಿದ್ದರು. ಈ ವೇಳೆ ಕಾಂಗ್ರೆಸ್ ಕಮಿಟಿಯ 17 ಮಂದಿಯನ್ನು ಪಿಎಂ ಅಭ್ಯರ್ಥಿ ಸೂಚಿಸುವಂತೆ ಕೇಳಲಾಗಿತ್ತು. 17 ಮಂದಿಯಲ್ಲಿ ಹದಿನೈದು ಮಂದಿ ಸರ್ದಾರ್ ವಲ್ಲಬಾಯಿ ಪಟೇಲ್ ಅವರ ಹೆಸರನ್ನು ಪ್ರಧಾನಿ ಹುದ್ದೆಗೆ ಸೂಚಿಸಿ ಮತ ಹಾಕಿದ್ದರು. ಕಾಂಗ್ರೆಸ್ ಕಮಿಟಿಯ 17 ಮಂದಿಯ ಪೈಕಿ ಒಬ್ಬರು ಮಾತ್ರ ನೆಹರುಗೆ ಮತ ಹಾಕಿದ್ದರು. ಇನ್ನೊಬ್ಬರು ಖಾಲಿ ಪೇಪರ್ ಬಿಟ್ಟಿದ್ದರು. ಇದರ ನಡುವೆಯೂ ಗಾಂಧಿ ಅವರ ಪ್ರಭಾವದಿಂದ ನೆಹರು ಅವರು ಸ್ವತಂತ್ರ ಭಾರತದ ಪ್ರಧಾನಿಯಾದರು.

ಮಹಾತ್ಮ ಗಾಂಧೀ ಪ್ರಜಾಪ್ರಭುತ್ವ ತತ್ವಕ್ಕೆ ವಿರುದ್ಧವಾಗಿ ನಡೆದುಕೊಂಡಿದ್ದರು ಎಂದು ವಿಜಯೇಂದ್ರ ಪ್ರಸಾದ್ ಅಭಿಪ್ರಾಯಪಟ್ಟಿರುವ ವಿಡಿಯೋ ಇದೀಗ ವೈರಲ್ ಆಗಿದೆ. ಬಾಹುಬಲಿ ಸಿನಿಮಾದಲ್ಲಿ ಎತ್ತರ ಜಂಡಾ ದೇಶಭಕ್ತಿ ಹಾಡಿನಲ್ಲಿ ಪಟೇಲ್ ಅವರನ್ನು ಮಾತ್ರ ತೋರಿಸಲಾಗಿತ್ತು. ನೆಹರು ಹಾಗೂ ಗಾಂಧೀಜಿಯವರನ್ನು ತೋರಿಸಿಲ್ಲ. ಈ ಬಗ್ಗೆ ಪ್ರಸ್ತಾಪ ಮಾಡಿದಾಗ ಮೇಲ್ಕಂಡಂತೆ ಉತ್ತರ ನೀಡಿದ್ದರು. ಇದೀಗ ಅದೇ ವಿವಾದಕ್ಕೆ ಎಡೆ ಮಾಡಿಕೊಟ್ಟಿದೆ.












Click it and Unblock the Notifications