ಒಂದೇ ಕುಟುಂಬದ ಐವರ ಸಾವಿನ ಹಿಂದೆ ನೂರೆಂಟು ಪ್ರಶ್ನೆ
ಹೈದರಾಬಾದ್, ಅಕ್ಟೋಬರ್ 17 : ಹೈದರಾಬಾದ್ನಲ್ಲಿ ಒಂದೇ ಕುಟುಂಬದ ಐವರ ಶವ ಅನುಮಾನಾಸ್ಪದ ರೀತಿಯಲ್ಲಿ ಪತ್ತೆಯಾಗಿದೆ. ಎರಡು ದಿನಗಳಿಂದ ಇವರೆಲ್ಲರೂ ಕಾಣೆಯಾಗಿದ್ದರು, ಇಂದು ಶವವಾಗಿ ಪತ್ತೆಯಾಗಿದ್ದಾರೆ. ಈ ಸಾವು ಹಲವು ಅನುಮಾನಗಳಿಗೆ ಕಾರಣವಾಗಿದೆ.
ಹೈದರಾಬಾದ್ ಆಸ್ಪತ್ರೆಯಲ್ಲಿ ಯುವತಿ ಆತ್ಮಹತ್ಯೆ: ಕಾರಣ ನಿಗೂಢ
ಮೃತಪಟ್ಟವರನ್ನು ಪ್ರಭಾಕರ ರೆಡ್ಡಿ, ಲಕ್ಷ್ಮೀ, ಸಿಂಧುಜಾ, ವಂಶಿ ಮತ್ತು ಮಾಧವಿ ಎಂದು ಗುರುತಿಸಲಾಗಿದೆ. ನಗರದ ಪತನಚೇರು ಬಳಿಯ ಕೊಲ್ಲೂರು ಔಟರ್ ರಿಂಗ್ ರಸ್ತೆಯಲ್ಲಿ ಮಂಗಳವಾರ ಶವಗಳು ಪತ್ತೆಯಾಗಿವೆ.
ಮೂವರು ಮಹಿಳೆಯರ ಶವಗಳು ಪೊದೆಯಲ್ಲಿ ಪತ್ತೆಯಾಗಿವೆ. 2 ಕಿ.ಮೀ.ದೂರದಲ್ಲಿನ ಅಂಡರ್ ಪಾಸ್ ಬಳಿ ಕಾರಿನಲ್ಲಿ ಇಬ್ಬರ ಶವ ಪತ್ತೆಯಾಗಿದೆ. ಮೃತರೆಲ್ಲರೂ ಅಮೀನ್ಪುರ ನಿವಾಸಿಗಳು ಎಂದು ತಿಳಿದುಬಂದಿದೆ. ಎರಡು ದಿನಗಳಿಂದ ಎಲ್ಲರೂ ಕಾಣೆಯಾಗಿದ್ದರು.
ಕಾರಿನ ಸಮೀಪ ಅರ್ಧತಿಂದ ಕೇಕ್ ಪತ್ತೆಯಾಗಿದೆ. ಕಾರಿನಲ್ಲಿ ಕ್ರಿಮಿನಾಶಕದ ಬಾಟಲಿಗಳು ಸಿಕ್ಕಿವೆ. ಕಾರಿನಲ್ಲಿ ಇಬ್ಬರ ಶವವಿದ್ದು, ಹೊರಗಡೆಯಿಂದ ಕಾರು ಲಾಕ್ ಆಗಿದೆ. ಇದು ಆತ್ಮಹತ್ಯೆಯೋ?, ಕೊಲೆಯೋ? ಎಂದು ಪೊಲೀಸರು ತನಿಖೆ ನಡೆಸುತ್ತಿದ್ದಾರೆ.
ಜಲಪಾತ ನೋಡಲು ಹೋಗುತ್ತೇವೆ : ಎರಡು ದಿನಗಳ ಹಿಂದೆ ರವೀಂದ್ರ ಎಂಬ ಸಂಬಂಧಿಕರಿಗೆ ಕರೆ ಮಾಡಿದ್ದ ಪ್ರಭಾಕರ ರೆಡ್ಡಿ, ಜಲಪಾತ ನೋಡಲು ಹೋಗುತ್ತಿದ್ದೇವೆ ಎಂದು ಹೇಳಿದ್ದರು. ಬಳಿಕ ಮೊಬೈಲ್ ಸ್ವಿಚ್ ಆಫ್ ಆಗಿತ್ತು. ಇದರಿಂದ ಭಯಗೊಂಡ ರವೀಂದ್ರ ಅವರು ನರಸಿಂಗ್ ಪೊಲೀಸರಿಗೆ ದೂರು ನೀಡಿದ್ದರು.
ಮಂಗಳವಾರ ರವೀಂದ್ರ ಅವರೇ ಬಂದು ಶವಗಳನ್ನು ಗುರುತಿಸಿದ್ದಾರೆ. ಕಾರಿನಲ್ಲಿ ಇಬ್ಬರ ಶವ ಪತ್ತೆಯಾಗಿದೆ. ಮಹಿಳೆಯರ ಶವಗಳು 2 ಕಿ.ಮೀ.ದೂರಲ್ಲಿನ ಪೊದೆಯಲ್ಲಿ ಪತ್ತೆಯಾಗಿವೆ. ಶವಗಳ ಮೇಲೆ ಯಾವುದೇ ಗಾಯದ ಗುರುತುಗಳಿಲ್ಲ. ಒಬ್ಬ ಯುವತಿಯ ಕೈಯಲ್ಲಿ ಮೊಬೈಲ್ ಪತ್ತೆಯಾಗಿದೆ.
ಪ್ರಭಾಕರ ರೆಡ್ಡಿ ಅವರ ಮೂವರು ಸಂಬಂಧಿಕರನ್ನು ಪೊಲೀಸರು ವಿಚಾರಣೆ ನಡೆಸುತ್ತಿದ್ದಾರೆ. ಇವರಲ್ಲಿ ಒಬ್ಬರು ಇಂಜಿನಿಯರಿಂಗ್ ವಿದ್ಯಾರ್ಥಿಯಾಗಿದ್ದು, ಅಕ್ಟೋಬರ್ 16ರಂದು ಅವರಿಗೆ ಪ್ರಭಾಕರ ಕೆಡ್ಡಿ ಕರೆ ಮಾಡಿದ್ದರು ಎಂದು ತಿಳಿದುಬಂದಿದೆ.
ಹಿರಿಯ ಅಧಿಕಾರಿಗಳು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಆತ್ಮಹತ್ಯೆಯೋ?, ಕೊಲೆಯೋ ಎಂದು ಪೊಲೀಸರು ತನಿಖೆ ನಡೆಸುತ್ತಿದ್ದು, ಎಲ್ಲರ ಮೊಬೈಲ್ಗಳನ್ನು ವಶಕ್ಕೆ ಪಡೆದು, ಕರೆಗಳ ಮಾಹಿತಿ ಸಂಗ್ರಹಣೆ ಮಾಡುತ್ತಿದ್ದಾರೆ.