ಬಿಎಸ್ವೈ ಸಿಎಂ ಮಾಡುವೆ : ಕೆ.ಎಸ್.ಈಶ್ವರಪ್ಪ ಯೂ ಟರ್ನ್
ಹುಬ್ಬಳ್ಳಿ, ಆಗಸ್ಟ್ 20 : ಕ್ರಾಂತಿವೀರ ಸಂಗೊಳ್ಳಿ ರಾಯಣ್ಣ ಬ್ರಿಗೇಡ್ ರಚನೆ ವಿಚಾರದಲ್ಲಿ ಭಾರೀ ಸುದ್ದಿಯಲ್ಲಿರುವ ಬಿಜೆಪಿ ನಾಯಕ ಕೆ.ಎಸ್.ಈಶ್ವರಪ್ಪ ಅವರು ಯೂ ಟರ್ನ್ ತೆಗೆದುಕೊಂಡಿದ್ದಾರೆ. 'ಮಾಜಿ ಸಿಎಂ ಬಿ.ಎಸ್.ಯಡಿಯೂರಪ್ಪ ಅವರನ್ನು ಮತ್ತೆ ಸಿಎಂ ಮಾಡಿಯೇ ತೀರುತ್ತೇನೆ' ಎಂದು ಹೇಳಿದರು.
ಶನಿವಾರ ಹುಬ್ಬಳ್ಳಿಯಲ್ಲಿ ಮಾತನಾಡಿದ ಅವರು, 'ಯಡಿಯೂರಪ್ಪನವರು ಈ ಹಿಂದೆ ಪಕ್ಷ ಬಿಟ್ಟು ಹೋಗಿದ್ದರು, ತಮ್ಮಿಂದ ತಪ್ಪಾಗಿರುವುದನ್ನು ಅರಿತುಕೊಂಡು ಮತ್ತೆ ಪಕ್ಷಕ್ಕೆ ಮರಳಿದ್ದಾರೆ. ಅವರನ್ನು ಮತ್ತೆ ಮುಖ್ಯಮಂತ್ರಿಯನ್ನಾಗಿ ಮಾಡಲು ಪಕ್ಷವನ್ನು ರಾಜ್ಯದಲ್ಲಿ ಮತ್ತೆ ಅಧಿಕಾರಕ್ಕೆ ತರುತ್ತೇವೆ' ಎಂದರು.[ಈಶ್ವರಪ್ಪ ಕಿವಿ ಹಿಂಡಲು ಹೈಕಮಾಂಡಿಗೆ ದೂರು?]

'ರಾಜ್ಯಮಟ್ಟದಲ್ಲಿ ಪದಾಧಿಕಾರಿಗಳನ್ನು ನೇಮಕ ಮಾಡುವಾಗ ಯಾರ ಜೊತೆಯೂ ಯಡಿಯೂರಪ್ಪನವರು ಚರ್ಚಿಸಿಲ್ಲ ಎಂಬುದು ನಮಗೆ ಸ್ವಲ್ಪ ನೋವಾಗಿತ್ತು. ಆದರೆ, ಈಗ ನಾವು ಅಣ್ಣ-ತಮ್ಮಂದಿರ ಹಾಗೆ ಇದ್ದೇವೆ. ರಾಯಣ್ಣ ಬ್ರಿಗೇಡ್ ಹೆಸರಿನಲ್ಲಿ ಜಾತಿ ಸಂಘಟನೆ ಮಾಡುವ ಇರಾದೆ ತಮ್ಮದಲ್ಲ. ನಾನು ಪಕ್ಕಾ ಆರೆಸ್ಸೆಸ್ ಕಾರ್ಯಕರ್ತನಾಗಿದ್ದು ಜೀವನದಲ್ಲಿ ಎಂದೂ ಜಾತಿ ರಾಜಕಾರಣ, ಪಕ್ಷವಿರೋಧಿ ಚಟುವಟಿಕೆ ನಡೆಸಿಲ್ಲ' ಎಂದು ಸ್ಪಷ್ಟನೆ ನೀಡಿದರು.[ಸೆ.26ರಂದು ಸಂಗೊಳ್ಳಿ ರಾಯಣ್ಣ ಬ್ರಿಗೇಡ್ ಸ್ಥಾಪನೆ]
'ಯಡಿಯೂರಪ್ಪ ಅವರಿಂದಲೇ ಸಂಗೊಳ್ಳಿ ರಾಯಣ್ಣ ಬ್ರಿಗೇಡ್ ಉದ್ಘಾಟನೆ ಮಾಡಿಸುತ್ತೇನೆ. ಅಹಿಂದ ನಾಯಕರ ಸಭೆಯನ್ನು ನಾನಾಗಿಯೇ ನಡೆಸಿಲ್ಲ. ಸಿದ್ದರಾಮಯ್ಯನವರಿಂದ ಅನ್ಯಾಯಕ್ಕೊಳಗಾದವರು ತಮ್ಮ ಸಭೆಗೆ ನನ್ನನ್ನು ಕರೆದಿದ್ದರು. ಹೀಗಾಗಿ ಹೋಗಿದ್ದೆ. ಕಾಂಗ್ರೆಸ್ಸಿನ ಹಿಂದುಳಿದ ವರ್ಗದ ಧುರೀಣರು ಬಿಜೆಪಿ ಸೇರ್ಪಡೆಗೆ ಒಲವು ತೋರಿದ್ದಾರೆ' ಎಂದು ಹೇಳಿದರು.












Click it and Unblock the Notifications