C.T.Ravi: ಸಿ.ಟಿ.ರವಿ ಫೋಟೋಗೆ ಚಪ್ಪಲಿ ಏಟು, ನರಕಕ್ಕೆ ಹೋಗೆಂದು ಮಹಿಳಾ ಕಾಂಗ್ರೆಸ್ ಪ್ರತಿಭಟನೆ
ಕಾಂಗ್ರೆಸ್ ಸಚಿವೆ ಲಕ್ಷ್ಮಿ ಹೆಬ್ಬಾಳ್ಕರ್ ಅವರನ್ನು ಬಿಜೆಪಿ ನಾಯಕ ಸಿ.ಟಿ.ರವಿ ಅಧಿವೇಶದನದಲ್ಲಿ ಅಶ್ಲೀಲವಾಗಿ ನಿಂದಿಸಿದ್ದಾರೆ ಎಂದು ಆರೋಪಿಸಿ ರವಿ ಅವರನ್ನು ಬಂಧಿಸಲಾಗಿದೆ. ಈ ವಿಚಾರವಾಗಿ ರಾಜ್ಯಾದ್ಯಂತ ಮಹಿಳಾ ಕಾಂಗ್ರೆಸ್ ಕಾರ್ಯಕರ್ತರು ಬೀದಿಗಿಳಿದಿದ್ದಾರೆ. ಸಿ.ಟಿ.ರವಿ ಅವರ ಫೋಟೋಗೆ ಚಪ್ಪಲಿಯಿಂದ ಹೊಡೆದು ಈ ಘಟನೆಯನ್ನು ಖಂಡಿಸಿದ್ದಾರೆ.
ಹುಬ್ಬಳ್ಳಿಯಲ್ಲೂ ಮಹಿಳಾ ಕಾಂಗ್ರೆಸ್ ಕಾರ್ಯಕರ್ತರು ಸಿ.ಟಿ.ರವಿ ವಿರುದ್ಧ ಪ್ರತಿಭಟನೆ ನಡೆಸಿದ್ದಾರೆ. ಮಹಿಳಾ ಕಾರ್ಯಕರ್ತರು ಸಿ.ಟಿ.ರವಿ ಫೋಟೋ ಹಿಡಿದು ಅದಕ್ಕೆ ಚಪ್ಪಲಿಗಳಿಂದ ಏಟು ಕೊಟ್ಟಿದ್ದಾರೆ. ರಸ್ತೆಯಲ್ಲೇ ಸಿ.ಟಿ.ರವಿ ಅವರ ಫೋಟೋಗೆ ಪೂಜೆ ಮಾಡುವ ಮೂಲಕ ರವಿ ನರಕಕ್ಕೆ ಹೋಗು ಎಂದು ಹಿಡಿಶಾಪ ಹಾಕಿದ್ದಾರೆ.

ಸತ್ತಾನಪ್ಪ ಸತ್ತಾನು... ಸಿಟಿ ರವಿ ಸತ್ತಾನು ಎಂದು ಫೋಟೋಗೆ ಪೂಜೆ ಮಾಡುವ ಮೂಲಕ ಮಹಿಳಾ ಕಾರ್ಯಕರ್ತರು ಆಕ್ರೋಶ ಹೊರಹಾಕಿದ್ದಾರೆ. ಅಲ್ಲದೆ ಸಿಟಿ ರವಿ ಅವರು ಮಹಿಳೆಯರ ಬಗ್ಗೆ ನಾಲಿಗೆ ಹರಿಬಿಟ್ಟಿದ್ದು, ಅವರ ಮೇಲೆ ಕಠಿಣ ಕಾನೂನು ಕ್ರಮ ಜರುಗಿಸುವಂತೆ ಆಗ್ರಹಿಸಿದ್ದಾರೆ.
ಸಿ.ಟಿ.ರವಿ ಅವರ ಮೇಲೆ ಬೆಳಗಾವಿ ಸುವರ್ಣ ವಿಧಾನಸೌಧದಲ್ಲಿ ನಡೆದ ಮಾರಣಾಂತಿಕ ಹಲ್ಲೆಯನ್ನು ಖಂಡಿಸಿ ಕಾಂಗ್ರೆಸ್ ಸರ್ಕಾರದ ವಿರುದ್ಧ ಇಂದು ದಾವಣಗೆರೆಯಲ್ಲೂ ಹೋರಾಟ ನಡೆದಿದೆ. ಹೋರಾಟದಲ್ಲಿ ಬಿಜೆಪಿ ಮಾಜಿ ಸಚಿವ ಎಂ.ಪಿ.ರೇಣುಕಾಚಾರ್ಯ ಪಾಲ್ಗೊಂಡು, ಎಸಿ ಕಚೇರಿಗೆ ಮುತ್ತಿಗೆ ಕೂಡ ಹಾಕಿದ್ದಾರೆ.

ಸಿಎಂ ಹೇಳಿದ್ದೇನು?: ಸಿ.ಟಿ ರವಿ ಬಂಧನ ವಿರೋಧಿಸಿ ಬಿಜೆಪಿ ಪಕ್ಷ ಪ್ರತಿಭಟನೆ ಮಾಡುವ ಮೂಲಕ ಹೆಣ್ಣುಮಕ್ಕಳಿಗೆ ಅವಹೇಳನಕಾರಿಯಾಗಿ ಮಾತನಾಡುವುದನ್ನು ಬೆಂಬಲಿಸುತ್ತಿದ್ದಾರೆ. ಸಿ.ಟಿ.ರವಿಯವರು ಕೀಳುಭಾಷೆ ಬಳಸಿದ್ದು ಸುಳ್ಳಾದರೆ ಅವರ ಬಂಧನ ಯಾಕೆ ಆಯಿತು? ಎಂದು ಅವರು ಸಿಎಂ ಸಿದ್ದರಾಮಯ್ಯ ಪ್ರಶ್ನಿಸಿದ್ದಾರೆ.
ಇಂತಹ ಆರೋಪಗಳ ಬಗ್ಗೆ ಸಾಮಾನ್ಯವಾಗಿ ಹೆಣ್ಣುಮಕ್ಕಳು ಸುಳ್ಳು ದೂರು ಕೊಡಲು ಸಾಧ್ಯವಿಲ್ಲ. ಸಿ.ಟಿ. ರವಿ ಅವರು ಅವಾಚ್ಯ ಪದ ಏಕೆ ಬಳಸಿದರು ಎಂದು ನನಗೆ ತಿಳಿದಿಲ್ಲ. ಆದರೆ ಇದೊಂದು ಗಂಭೀರ ಸ್ವರೂಪದ ಅಪರಾಧ ಎಂದು ಸಿಎಂ ಖಂಡಿಸಿದ್ದಾರೆ.
ಸಿ.ಟಿ.ರವಿಯವರು ತಾವು 'ಫ್ರಸ್ಟ್ರೇಷನ್' ಪದ ಬಳಸಿರುವುದಾಗಿ ತಿಳಿಸಿದ್ದಾರೆ. ಆದರೆ ಅವಾಚ್ಯ ಪದ ಬಳಸಿರುವುದು ನಿಜವೆಂದು ಸಚಿವರೇ ಹೇಳಿದ್ದಾರೆ. ಕೀಳು ಪದಬಳಕೆಯನ್ನು ಕೇಳಿಸಿಕೊಂಡಿರುವುದಾಗಿ ಅಲ್ಲೇ ಇದ್ದ ಇತರ ಸದಸ್ಯರು ಕೂಡ ಹೇಳಿದ್ದಾರೆ. ಸಭಾಪತಿ ಅವರು ಪೀಠದಿಂದ ಹೊರನಡೆದ ನಂತರ ನಡೆದಿರುವ ಘಟನೆ ಬಗ್ಗೆ ಆಡಿಯೋ ಮತ್ತು ವಿಡಿಯೋ ಇರುವುದಾಗಿಯೂ ಹೇಳುತ್ತಿದ್ದಾರೆ, ಹಾಗಾಗಿ ಪದಬಳಕೆ ಆಗಿರುವುದು ಸತ್ಯ ಎಂದು ಸ್ಪಷ್ಟನೆ ನೀಡಿದ್ದಾರೆ.
ಸಿ.ಟಿ ರವಿಯವರು ಎಸಗಿರುವ ಅಪರಾಧ ಕೃತ್ಯಕ್ಕೆ ಅನುಗುಣವಾಗಿ ಕಾನೂನಿನ ಕ್ರಮ ಜರುಗಿಸಬೇಕಾಗುತ್ತದೆ. ಬೆಳಗಾವಿಯಲ್ಲಿ ಜನರ ಆಕ್ರೋಶದಿಂದ ಸಿ.ಟಿ.ರವಿಯವರನ್ನು ರಕ್ಷಿಸಲು ಖಾನಾಪುರಕ್ಕೆ ಅವರನ್ನು ಕರೆತರಲಾಗಿತ್ತು ಎಂದಿದ್ದಾರೆ. ಇನ್ನು ಘಟನೆ ಬಗ್ಗೆ ಪ್ರತಿಕ್ರಿಯಿಸಿರುವ ಕಾಂಗ್ರೆಸ್ ಸಚಿವೆ ಲಕ್ಷ್ಮಿ ಹೆಬ್ಬಾಳ್ಕರ್ ಅವರು ನಾನು ಹುಟ್ಟಿದಾಗಿನಿಂದ ಒಂದು ಇರುವೆಗೂ ಕೂಡ ಕಾಟ ಕೊಟ್ಟವಳಲ್ಲ, ಆದರೆ ವೇದಿಕೆಯಲ್ಲಿ ಮಾತನಾಡುವಾಗ ಎಲ್ಲರೂ ಧೃತರಾಷ್ಟ್ರರಾದರು ಎಂದು ಮಾಧ್ಯಮಗಳ ಮುಂದೆ ಕಣ್ಣೀರು ಹಾಕಿಕೊಂಡಿದ್ದಾರೆ.












Click it and Unblock the Notifications