ಸಾರಿಗೆ ಇಲಾಖೆಯಿಂದ ಟ್ಯಾಕ್ಸಿ, ಆಟೋ ಚಾಲಕರ ಮಕ್ಕಳಿಗೆ ವಿದ್ಯಾನಿಧಿ ಯೋಜನೆ ಜಾರಿ
ಹುಬ್ಬಳ್ಳಿ, ಮಾರ್ಚ್, 14: ಸಾರಿಗೆ ಇಲಾಖೆಯು ಟ್ಯಾಕ್ಸಿ, ಆಟೋ ಚಾಲಕ ಹಾಗೂ ಮ್ಯಾಕ್ಸಿಕ್ಯಾಬ್ ಚಾಲಕರ ಮಕ್ಕಳಿಗೆ ವಿದ್ಯಾನಿಧಿ ನೀಡಲು ಮುಂದಾಗಿದೆ.
ಆಟೋ, ಟ್ಯಾಕ್ಸಿ ಚಾಲಕರ ಮಕ್ಕಳಲ್ಲಿ ಶಿಕ್ಷಣ ಪಡೆಯುವ ಕನಸು ಇರುತ್ತದೆ. ಆದರೆ ಆರ್ಥಿಕ ಪರಿಸ್ಥಿತಿ ಸರಿದೂಗಿಸಲು ಸಾಧ್ಯವಾಗದೇ ಓದನ್ನು ಅರ್ಧಕ್ಕೆ ನಿಲ್ಲಿಸುತ್ತಾರೆ. ಇಂತಹ ಪರಿಸ್ಥಿತಿಯನ್ನು ನಿವಾರಣೆ ಮಾಡಲು ಇದೀಗ ಸಾರಿಗೆ ಇಲಾಖೆಯು ಪ್ರಾದೇಶಿಕ ಸಾರಿಗೆ ಅಧಿಕಾರಗಳ ನೇತೃತ್ವದಲ್ಲಿ ಅರ್ಹ ಪಲಾನುಭವಿಗಳಿಗೆ ಸೂಕ್ತ ರೀತಿಯಲ್ಲಿ ಯೋಜನೆ ತಲುಪಿಸುವ ಕಾರ್ಯಕ್ಕೆ ಮುಂದಾಗಿದೆ.

ಚಾಲಕರ ಮಕ್ಕಳಿಗೆ ಮೆಟ್ರಿಕ್ ನಂತರದ ಶಿಕ್ಷಣಕ್ಕೆ ವಿದ್ಯಾನಿಧಿ ಸ್ಕಾಲರ್ಶಿಪ್ ವ್ಯವಸ್ಥೆ ಮಾಡಲಾಗಿದೆ. ಅಲ್ಲದೇ ಟೆಕ್ನಿಕಲ್, ನಾನ್ ಟೆಕ್ನಿಕಲ್ ಸೇರಿದಂತೆ ಎಲ್ಲಾ ರೀತಿಯ ಸ್ನಾತಕ, ಸ್ನಾತಕೋತ್ತರ ಪದವಿಗೆ ಸೂಕ್ತ ರೀತಿಯಲ್ಲಿ ಸ್ಕಾಲರ್ಶಿಪ್ ನೀಡಲು ಮುಂದಾಗಿದೆ.
ಬಡಮಕ್ಕಳ ಶಿಕ್ಷಣಕ್ಕೆ ನೆರವಾದ ಇಲಾಖೆ
ಇನ್ನು ಪಿಯುಸಿ, ಐಟಿಐ, ಡಿಪ್ಲೊಮಾ ವ್ಯಾಸಂಗಕ್ಕೆ ಪುರುಷರಿಗೆ 2,500 ರೂ., ಮಹಿಳೆಯರಿಗೆ 3,000 ರೂಪಾಯಿ ಸಹಾಯಧನವನ್ನು ನೀಡಲಾಗುತ್ತದೆ. ಬಿಎ, ಬಿಎಸ್ಸಿ, ಬಿ.ಕಾಂ, ಬಿ.ಟೆಕ್, ಬಿಬಿಎ ಸೇರಿದಂತೆ ಪದವಿ ವಿದ್ಯಾರ್ಥಿಗಳಿಗೆ 5,000-5,500 ರೂ., ಹಾಗೂ ಸ್ನಾತಕೋತ್ತರ ಪದವಿ ಓದುತ್ತಿರುವವರಿಗೆ 10,000-11,000 ವಿದ್ಯಾರ್ಥಿ ವೇತನ ನೀಡಲಾಗುತ್ತದೆ.
ಒಟ್ಟಿನಲ್ಲಿ ಸಾರಿಗೆ ಇಲಾಖೆಯು ಇಂತಹದೊಂದು ಮಹತ್ವದ ಕಾರ್ಯಕ್ಕೆ ಮುಂದಾಗಿದ್ದು, ಆಟೋ ಚಾಲಕರು, ಟ್ಯಾಕ್ಸಿ ಚಾಲಕರು, ಅರ್ಜಿ ಸಲ್ಲಿಸುವ ಮೂಲಕ ಸದುಪಯೋಗ ಪಡಿಸಿಕೊಳ್ಳಲು ಸಾರಿಗೆ ಇಲಾಖೆ ಮನವಿ ಮಾಡಿದೆ.

ನಿವೃತ್ತ ಸಾರಿಗೆ ನೌಕರನಿಂದ ಪ್ರಧಾನಿಗೆ ಪತ್ರ
ಸಾರಿಗೆ ಇಲಾಖೆ ಸದಾ ಸುದ್ದಿಯಲ್ಲಿರುತ್ತದೆ. ಕಳೆದ ಕೆಲ ದಿನಗಳಿಂದ ಇಲಾಖೆ ನೌಕರರ ಸಂಬಳ ವಿಚಾರವಾಗಿ ಇಲಾಖೆ ಸಾಕಷ್ಟು ಸುದ್ದಿಯಲ್ಲಿತ್ತು. ರಾಜ್ಯ ಸರ್ಕಾರ ತಮ್ಮ ಬಗ್ಗೆ ಹೊಂದಿರುವ ನಿರ್ಲಕ್ಷ್ಯದ ವಿರುದ್ಧ ಇದೀಗ ಮತ್ತೆ ಸಾರಿಗೆ ಇಲಾಖೆ ನೌಕರರು ಮುಷ್ಕರಕ್ಕೆ ಸಿದ್ಧರಾಗಿದ್ದಾರೆ. ರಾಜ್ಯ ಸರ್ಕಾರ ಸಾರಿಗೆ ಇಲಾಖೆ ನೌಕರರ ಬೇಡಿಕೆ ಈಡೇರಿಸುವುದಿರಲಿ, ಇಲಾಖೆಯಲ್ಲಿ ಕೆಲಸ ಮಾಡಿ ನಿವೃತ್ತರಾದವರಿಗೂ ಗ್ರ್ಯಾಚುಟಿ ಹಣ ನೀಡಿಲ್ಲ. ಇದರಿಂದ ಬೇಸತ್ತು ನಿವೃತ್ತ ಸಾರಿಗೆ ನೌಕರರೊಬ್ಬರು ಇದೀಗ ಪ್ರಧಾನ ಮಂತ್ರಿಗಳಿಗೆ ಪತ್ರ ಬರೆದಿದ್ದಾರೆ.
ಹುಬ್ಬಳ್ಳಿಯ ಗೋಕುಲ್ ರಸ್ತೆಯ ಕಿರ್ಲೋಸ್ಕರ್ ಲೇಔಟ್ನ ನಿವಾಸಿ ಹನುಮಂತ ಆರ್ ಅಂಕುಶ್ ತನಗೆ ಸಿಗಬೇಕಾದ ಗ್ರ್ಯಾಚುಟಿ ಹಣ ನೀಡದ ಸಾರಿಗೆ ಇಲಾಖೆ ಅಧಿಕಾರಿಗಳ ವಿರುದ್ಧ ರೋಸಿ ಹೋಗಿದ್ದಾರೆ. 36 ವರ್ಷಗಳಿಂದ ಸಾರಿಗೆ ಇಲಾಖೆಯಲ್ಲಿ ಕೆಲಸ ಮಾಡಿ ಕಳೆದ ವರ್ಷ ನಿವೃತ್ತರಾಗಿರೋ ಹನುಮಂತ ಅವರಿಗೆ ಇಲಾಖೆಯಿಂದ ಬರಬೇಕಾರ ಗ್ರ್ಯಾಚುಟಿ ಹಾಗೂ ರಜೆ ನಗದೀಕರಣದ ಸುಮಾರು 18 ಲಕ್ಷ ರೂ. ಹಣ ಬಂದಿಲ್ಲ ಎನ್ನಲಾಗಿದೆ.












Click it and Unblock the Notifications