ಪಿಎಫ್ಐ ಮೇಲೆ ಕಾಂಗ್ರೆಸ್, ಸಿದ್ದರಾಮಯ್ಯಗೆ ಒಳಗೊಳಗೆ ಪ್ರೀತಿ; ಪ್ರಹ್ಲಾದ್ ಜೋಶಿ
ಹುಬ್ಬಳ್ಳಿ, ಸೆ.29: ಪಿಎಫ್ಐ ಮೇಲೆ ಸಿದ್ದರಾಮಯ್ಯ ಸೇರಿದಂತೆ ಕಾಂಗ್ರೆಸ್ಗೆ ಈಗಲೂ ಒಳಗೊಳಗೆ ಪ್ರೀತಿ ಇದೆ ಎಂದು ಕೇಂದ್ರ ಸಂಸದೀಯ ವ್ಯವಹಾರಗಳ ಸಚಿವ ಪ್ರಹ್ಲಾದ್ ಜೋಶಿ ವಾಗ್ದಾಳಿ ನಡೆಸಿದ್ದಾರೆ.
ಪಿಎಫ್ ಐ ಬ್ಯಾನ್ ಕುರಿತಂತೆ ಮಾಧ್ಯಮದವರಿಗೆ ಪ್ರತಿಕ್ರಿಯೆ ನೀಡಿದ ಪ್ರಹ್ಲಾದ್ ಜೋಶಿ, ರಾಷ್ಟ್ರೀಯ ಸುರಕ್ಷತೆ ವಿಚಾರದಲ್ಲಿ ಬಿಜೆಪಿ ಯಾವತ್ತು ಮತಬ್ಯಾಂಕ್ ರಾಜಕಾರಣ ಮಾಡಿಲ್ಲ ಎಂದು ಹೇಳಿದ್ದಾರೆ.
ಕೇಂದ್ರ ಬಿಜೆಪಿ ಸರ್ಕಾರ ಪಿಎಫ್ಐ ಬ್ಯಾನ್ ಮಾಡಿರುವುದನ್ನ ಕಂಡು ಸಿದ್ದರಾಮಯ್ಯ ಹಾಗು ಕಾಂಗ್ರೆಸ್ ಒಳಗೊಳಗೆ ಕುದಿಯುತ್ತಿದೆ. ಪಿಎಫ್ಐ ಭಯೋತ್ಪಾದಕ ಚಟುವಟಿಕೆಗಳು, ದೇಶ ದ್ರೋಹ ಕೃತ್ಯಗಳ ಬಗ್ಗೆ ಜನರಿಗೆ ಮಾಹಿತಿ ಇದೆ ಎಂದಿದ್ದಾರೆ.

ಪಿಎಫ್ಐ ಬ್ಯಾನ್ ವಿರೋಧಿಸಿದರೆ ಜನ ಒದೆಯುತ್ತಾರೆ
"ಪಿಎಫ್ಐನ ದೇಶದ್ರೋಹದ ಕೆಲಸಗಳ ಬಗ್ಗೆ ಜನರಿಗೆ ಮಾಹಿತಿಯಿರುವ ಈ ಸಂದರ್ಭದಲ್ಲಿ ಪಿಎಫ್ಐ ಬ್ಯಾನ್ ಮಾಡಿರುವುದನ್ನ ವಿರೋಧಿಸಿದರೆ ಜನ ಒದೆಯುತ್ತಾರೆ ಅಷ್ಟೇ. ಪಿಎಫ್ಐ ಪರ ಮಾತನಾಡಿದ್ರೆ ಏಲ್ಲಿ ದೇಶದ ಜನರ ಕೆಂಗಣ್ಣಿಗೆ ಗುರಿಯಾಗಬೇಕಾಗುತ್ತೆ ಎಂಬುದು ಕಾಂಗ್ರೆಸ್ಗೆ ಚಿಂತೆಯಾಗಿದೆ" ಎಂದಿದ್ದಾರೆ.
"ಪಿಎಫ್ಐ ಬ್ಯಾನ್ ಮಾಡಿರುವ ಬಿಜೆಪಿ ಸರ್ಕಾರದ ನಿಲುವನ್ನ ವಿರೋಧಿಸಲು ಕಾಂಗ್ರೆಸ್ ನವರಿಗೆ ಸಾಧ್ಯವಾಗ್ತಿಲ್ಲ. ಏಕೆಂದರೆ ಪಿಎಫ್ಐ ವಿರುದ್ಧ ದೇಶ ದ್ರೋಹದ ಕೃತ್ಯಗಳ ಸಾಕಷ್ಟು ಸಾಕ್ಷಿಗಳು ನಮ್ಮ ಬಳಿ ಇವೆ. ಹೀಗಾಗಿ ಏನಾದರು ಮಾಡಿ ಮುಸ್ಲಿಂ ಒಲೈಕೆ ಮಾಡಬೇಕು ಎಂಬ ಕಾರಣಕ್ಕೆ ಆರ್ಎಸ್ಎಸ್ ಬಗ್ಗೆ ಕಾಂಗ್ರೆಸ್ ಸುಮ್ಮನೆ ಟೀಕೆ ಮಾಡುತ್ತಿದೆ" ಎಂದು ಆರೋಪಿಸಿದ್ದಾರೆ.

ಯಾವ ಆಧಾರದಲ್ಲಿ ಆರ್ಎಸ್ಎಸ್ ಬ್ಯಾನ್ ಮಾಡುತ್ತಿರಾ..?
ಮುಂದುವರಿದು, "ಆರ್ಎಸ್ಎಸ್ ಎಂದರೆ ನಾವೇ. ಈ ದೇಶದ ಪ್ರಧಾನಿ ನರೇಂದ್ರ ಮೋದಿ ಅವರೇ ಆರ್ಎಸ್ಎಸ್ ಸಂಘಟನೆಯಿಂದ ಬಂದವರು. ಆರ್ಎಸ್ಎಸ್ ಅನ್ನ ಯಾವ ಆಧಾರದ ಮೇಲೆ ಹೇಗೆ ಬ್ಯಾನ್ ಮಾಡ್ತೀರಾ..? ಈ ಹಿಂದೆ ಕಾಂಗ್ರೆಸ್ ಸರ್ಕಾರ ಮೂರು ಬಾರಿ ಆರ್ಎಸ್ಎಸ್ ಬ್ಯಾನ್ ಮಾಡಿತ್ತು. ಬ್ಯಾನ್ ಮಾಡಿ ಕಾಂಗ್ರೆಸ್ ಏನು ಸಾಧಿಸಿದೆ. ಸಂಘಟನೆ ವಿರುದ್ಧ ಒಂದೇ ಒಂದು ಸಾಕ್ಷಿಯನ್ನೂ ಪ್ರಸ್ತುತಪಡಿಸಲು ಕಾಂಗ್ರೆಸ್ ಗೆ ಸಾಧ್ಯವಾಗಿಲ್ಲ" ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಪಿಎಫ್ಐ ಭಯೋತ್ಪಾದನಾ ಚಟುವಟಿಕೆ ಮಾಡುವ ಸಂಘಟನೆ!
ಆರ್ಎಸ್ಎಸ್ ಒಂದು ರಾಷ್ಟ್ರೀಯವಾದಿ ಸಂಘಟನೆ. ದೇಶದ ಪರ ಕೆಲಸ ಮಾಡುತ್ತಿರುವ ಸಂಘಟನೆ. ಆದ್ರೆ ಪಿಎಫ್ಐ ಸಂಘಟನೆ ಭಯೋತ್ಪಾದನಾ ಚಟುವಟಿಕೆಗಳನ್ನು ಪ್ರೇರೆಪಿಸುತ್ತಿರುವ ಕುರಿತು ಹಲವು ಸಾಕ್ಷ್ಯಗಳು ದೊರೆತಿವೆ. ದೇಶದಾದ್ಯಂತ ಹಲವು ಹತ್ಯೆಗಳಲ್ಲಿ ಈ ಸಂಘಟನೆ ಕೈವಾಡವಿರುವುದು ಸ್ಪಷ್ಟವಾಗಿದೆ. ಎಲ್ಲ ಸಾಕ್ಷಿಗಳನ್ನ ಕಲೆಹಾಕಿಯೇ ಕೇಂದ್ರ ಬಿಜೆಪಿ ಸರ್ಕಾರ ಪಿಎಫ್ಐ ಬ್ಯಾನ್ ಮಾಡಿದೆ. ಇದು ರಾಷ್ಟ್ರೀಯ ಸುರಕ್ಷತೆಯ ವಿಚಾರ. ಇಂಥಹ ಸೂಕ್ಷ್ಮ ವಿಚಾರದಲ್ಲಿ ಬಿಜೆಪಿ ಯಾವತ್ತು ಮತಬ್ಯಾಂಕ್ ರಾಜಕಾರಣ ಮಾಡಿಲ್ಲ. ಎಸ್.ಡಿ.ಪಿ.ಐ ಒಂದು ಪೊಲಿಟಿಕಲ್ ಪಾರ್ಟಿ. ಚುನಾವಣಾ ಆಯೋಗ ಈ ನಿಟ್ಟಿನಲ್ಲಿ ತನ್ನ ತೀರ್ಮಾನ ತೆಗೆದುಕೊಳ್ಳಲಿದೆ ಎಂದು ಪ್ರಹ್ಲಾದ್ ಜೋಶಿ ಹೇಳಿದ್ದಾರೆ.

ಪಕ್ಷಪಾತ, ಪೂರ್ವಗ್ರಹಗಳಿಂದ ಸರ್ಕಾರ ವರ್ತಿಸಬಾರದು:ಸಿದ್ದು
ಪಿಎಫ್ಐ ಬ್ಯಾನ್ ಮಾಡಿ ಕೇಂದ್ರ ಸರ್ಕಾರ ಆದೇಶ ಹೊರಡಿಸಿದ್ದ ಬೆನ್ನಲ್ಲೇ ಟ್ವೀಟ್ ಮಾಡಿದ್ದ ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ, "ಕಾನೂನು ಬಾಹಿರ ಕೃತ್ಯಗಳಲ್ಲಿ ತೊಡಗಿರುವ ಸಂಸ್ಥೆಗಳು ಹಿಂದು,ಮುಸ್ಲಿಮ್ ಯಾರದ್ದೇ ಆಗಿರಲಿ ಮುಲಾಜಿಲ್ಲದೆ ರಾಜ್ಯ ಸರ್ಕಾರ ಕ್ರಮ ಕೈಗೊಳ್ಳಬೇಕೆಂದು ಹೇಳುತ್ತಲೇ ಬಂದಿದ್ದನ್ನು ಪುನರುಚ್ಚರಿಸುತ್ತೇನೆ. ಜಾತಿ, ಧರ್ಮಗಳ ಆಧಾರದ ಪಕ್ಷಪಾತ, ಪೂರ್ವಗ್ರಹಗಳಿಂದ ಸರ್ಕಾರ ವರ್ತಿಸಬಾರದು ಎನ್ನುವುದಷ್ಟೇ ನನ್ನ ಸಲಹೆ" ಎಂದಿದ್ದರು.












Click it and Unblock the Notifications