ವಿಠಲಾಪುರದಲ್ಲಿ ಕ್ಷುಲ್ಲಕ ಕಾರಣಕ್ಕೆ ಮನೆ ಧ್ವಂಸ, ಸಾಮಾಜಿಕ ಬಹಿಷ್ಕಾರ!
ಹುಬ್ಬಳ್ಳಿ, ಮಾರ್ಚ್ 07:ಕುಂದಗೋಳ ತಾಲೂಕಿನ ವಿಠಲಾಪುರ ಗ್ರಾಮದಲ್ಲಿ ಒಂದು ಸಮುದಾಯದ ಜನ ಇನ್ನೊಂದು ಸಮುದಾಯದವರ ಮನೆಯನ್ನು ಧ್ವಂಸ ಮಾಡಿ, ಊರಿನಿಂದ ಬಹಿಷ್ಕಾರ ಹಾಕಿದ್ದಾರೆ ಎಂಬ ಆರೋಪ ಕೇಳಿಬಂದಿದೆ.
ಈ ಬಗ್ಗೆ ಅಳಲು ತೋಡಿಕೊಂಡಿರುವ ನೊಂದ ಸಮುದಾಯದ ಲಕ್ಷ್ಮವ್ವ ಎಂಬಾಕೆ, ಹಲವಾರು ವರ್ಷಗಳಿಂದ ಇದೇ ಗ್ರಾಮದಲ್ಲಿ ವಾಸವಿರುವ ನಮ್ಮ ಮನೆಯ ಮೇಲೆ ಮತ್ತೊಂದು ಸಮುದಾಯದ ಜನ ಏಕಾಏಕಿ ದಾಳಿ ಮಾಡಿದರು. ನಮ್ಮ ಮನೆಯನ್ನು ಕೆಡವಿದ್ದಲ್ಲದೆ, ನಮ್ಮನ್ನು ಹಿಗ್ಗಾಮುಗ್ಗಾ ಥಳಿಸಿದರು. ಊರಿನಿಂದ ಬಹಿಷ್ಕಾರವನ್ನೂ ಹಾಕಿದ್ದಾರೆ ಎಂದು ದೂರಿದ್ದಾಳೆ.
ಮಾತಂಗಿ ದೇವರ ಗುಡಿಯ ವಿಚಾರವಾಗಿ ಅನಾವಶ್ಯಕವಾಗಿ ಜಗಳ ತೆಗೆದು ಫೆ.26ರಂದು ಲಕ್ಷ್ಮವ್ವ ಹರಿಜನ ಹಾಗೂ ಅವರ ಕುಟುಂಬದ ಮೇಲೆ ಹಲ್ಲೆ ನಡೆಸಲಾಗಿದೆ ಎಂದು ಆರೋಪಿಸಲಾಗಿದೆ. ಜಾತಿ ನಿಂದನೆ ಮಾಡಿ, ನಾವು ವಾಸವಿದ್ದ ಮನೆಯನ್ನು ಹಾಗೂ ದೇವಸ್ಥಾನವನ್ನು ಧ್ವಂಸ ಮಾಡಿದ್ದಾರೆ ಎಂದು ಲಕ್ಷ್ಮವ್ವ ಹರಿಜನ ಆರೋಪಿಸಿದ್ದಾಳೆ.

ಈ ಬಗ್ಗೆ ಕುಂದಗೋಳ ಪೊಲೀಸ್ ಠಾಣೆಯಲ್ಲಿ ಪ್ರಕರಣ ಸಹ ದಾಖಲಾಗಿದೆ. ಆದರೆ ಇಲ್ಲಿಯವರೆಗೂ ಆರೋಪಿಗಳನ್ನು ಬಂಧಿಸಲು ಪೊಲೀಸರು ಮೀನಾಮೇಷ ಎಣಿಸುತ್ತಿದ್ದಾರೆ ಎಂಬ ಅನುಮಾನ ವ್ಯಕ್ತಪಡಿಸಿದ್ದಾರೆ ಎನ್ನುತ್ತಾರೆ ಲಕ್ಷ್ಮವ್ವನ ಕುಟುಂಬಸ್ಥರು.
ಈ ಕುರಿತು ಶೀಘ್ರವೇ ಸೂಕ್ತ ಕ್ರಮ ಕೈಗೊಂಡು ನೊಂದವರ ಸಮಸ್ಯೆಯನ್ನು ಆಲಿಸಬೇಕು. ಇಲ್ಲವಾದರೆ ಉಗ್ರ ಹೋರಾಟ ಕೈಗೊಳ್ಳಲಾಗುವುದು ಎಂದು ನೊಂದ ಸಮುದಾಯದ ಮುಖಂಡರು ಎಚ್ಚರಿಕೆ ನೀಡಿದ್ದಾರೆ. ಲಕ್ಷ್ಮವ್ವಗೆ ನ್ಯಾಯ ದೊರಕಿಸಿಕೊಡುವಂತೆ ಲೋಹಿತ ಗಾಮನಗಟ್ಟಿ, ಪಕ್ಕಣ್ಣ ದೊಡ್ಡಮನಿ ಸೇರಿದಂತೆ ಮುಂತಾದವರು ಆಗ್ರಹಿಸಿದ್ದಾರೆ.












Click it and Unblock the Notifications