ರಾಜ್ಯ ಸಾರಿಗೆ ಇಲಾಖೆಗೆ 55 ಕೋಟಿ ರು ನಷ್ಟ: ರಾಮಲಿಂಗ ರೆಡ್ಡಿ
ಹುಬ್ಬಳ್ಳಿ, ಜನವರಿ. 08 : ಒಂದು ವರ್ಷದಲ್ಲಿ ಸಂಸ್ಥೆಯು ನೌಕರರ ವೇತನ ಹೆಚ್ಚಳ, ಸತತ ಬಂದ್, ಹಣದ ಅಪಮೌಲ್ಯ ಮುಂತಾದ ಸಮಸ್ಯೆಗಳಿಗೆ ರಾಜ್ಯ ಸಾರಿಗೆ ಇಲಾಖೆ ಸಿಕ್ಕು 55 ಕೋಟಿ ರು ನಷ್ಟವಾಗಿದೆ ಎಂದು ಸಾರಿಗೆ ಸಂಪರ್ಕ ಸಚಿವ ರಾಮಲಿಂಗ ರೆಡ್ಡಿ ಹೇಳಿದರು.
ನಗರದ ವಾಕರಾರ. ಸಂಸ್ಥೆಯ ಪ್ರಾದೇಶಿಕ ತರಬೇತಿ ಕೇಂದ್ರದಲ್ಲಿ 20ನೇ ಸಂಸ್ಥಾಪನಾ ದಿನಾಚರಣೆ ಹಾಗೂ ಅಪಘಾತ ರಹಿತ ಚಾಲಕರಿಗೆ ಬೆಳ್ಳಿ ಪದಕ ನೀಡುವ ಸಮಾರಂಭವನ್ನು ಉದ್ಘಾಟಿಸಿ ಮಾತನಾಡಿದ ಅವರು, 10 ವರ್ಷ ಅಪಘಾತ ರಹಿತ ಚಾಲನೆ ಮಾಡಿದ ಚಾಲಕರಿಗೆ ಬಂಗಾರದ ಪದಕ ನೀಡಲಾಗುವುದು. ಬೆಳ್ಳಿ ಪದಕ ಪಡೆದ ಚಾಲಕರು ಬಂಗಾರದ ಪದಕ ಪಡೆಯುವಂತಾಗಲಿ ಎಂದು ಹಾರೈಸಿದರು.
ಧಾರವಾಡ ಪೂರ್ವ ವಿಭಾಗದ ಕಚೇರಿಯನ್ನು ನಗರದ ಗಬ್ಬೂರ್ ಕ್ರಾಸ್ ಬಳಿ ಖಾಸಗಿ ಕಟ್ಟಡದಲ್ಲಿ ಆರಂಭಿಸಲಾಗಿದ್ದು, ಶೀಘ್ರದಲ್ಲಿಯೇ 10 ಕೋಟಿ ರು. ವೆಚ್ಚದಲ್ಲಿ ಕಟ್ಟಡವನ್ನು ನಿರ್ಮಿಸಲಾಗುವುದು ಎಂದು ಹೇಳಿದರು.
ಹು-ಧಾ ಮಹಾನಗರ ಪಾಲಿಕೆ ನೀಡಿರುವ 1 ಎಕರೆ 20 ಗುಂಟೆಯಲ್ಲಿ ನಿರ್ಮಾಣವಾಗಲಿರುವ ಹೊಸ ಕಟ್ಟಡದಲ್ಲಿ ಆಧುನಿಕ ಸೌಕರ್ಯ ಮತ್ತು ಎಲ್ಲವೂ ಪೇಪರಲೆಸ್ ಆಗಿ ಕಾರ್ಯ ನಿರ್ವಹಿಸಲಾಗುವುದು. ಈ ಹೊಸ ಕಚೇರಿಗೆ 33 ಸಿಬ್ಬಂದಿಗಳನ್ನು ನೀಡಲಾಗಿದೆ ಎಂದರು.
ಹುಬ್ಬಳ್ಳಿಯ ವಾಹನ ಪಾಸಿಂಗ್ ಇನ್ಮುಂದೆ ಕೆಎ-63 : ಇನ್ಮುಂದೆ ಹುಬ್ಬಳ್ಳಿ-ಧಾರವಾಡದಲ್ಲಿ ಕೆಎ 25 ನೋಂದಣಿ ಜೊತೆಗೆ ಕೆಎ 63 ಸೇರ್ಪಡೆಯಾಗಿದೆ.
2750 ಚಾಲಕರ ನೇಮಕ : ರಾಜ್ಯ ಸಾರಿಗೆ ಸಂಸ್ಥೆಯಲ್ಲಿ ಹೆಚ್ಚುವರಿಯಾಗಿ ಆಯ್ಕೆಯಾಗಿದ್ದ 2750ಜನ ಚಾಲಕರ ನೇಮಕಾತಿಯನ್ನು ಸರಕಾರ ಕ್ರಮಬದ್ದಗೊಳಿಸಿ ನೇಮಕಾತಿಯನ್ನು ನೀಡಲಾಗಿದೆ ಎಂದು ಸಾರಿಗೆ ಸಚಿವ ರಾಮಲಿಂಗರಡ್ಡಿ ಹೇಳಿದ್ದದಾರೆ.