ದೆಹಲಿಯಲ್ಲಿ ಯುವತಿ ಕೊಲೆ: ಹಿಂದೂ ಹುಡುಗಿಯರು ಎಚ್ಚರಗೊಳ್ಳಲಿ ಎಂದ ಪ್ರಮೋದ್ ಮುತಾಲಿಕ್
ಧಾರವಾಡ, ನವೆಂಬರ್ 16 : ದೆಹಲಿಯಲ್ಲಿ ನಡೆದ ಯುವತಿಯ ಭೀಕರ ಕೊಲೆ ಪ್ರಕರಣ ಅತ್ಯಂತ ಕ್ರೌರ್ಯವಾಗಿದೆ. ತಾಲಿಬಾನ್ಗಿಂತಲೂ ಮಿತಿಮೀರಿದ ಕ್ರೂರ ಕೃತ್ಯ ಇದಾಗಿದೆ. ದೇಹವನ್ನು 35 ಪೀಸ್ ಮಾಡುತ್ತಾನೆ ಎಂದರೆ ಆತ ಅಮಾನುಷ ವ್ಯಕ್ತಿತ್ವವುಳ್ಳವನು. ಇಂತಹ ಕೃತ್ಯದ ನಂತರವಾದರೂ ಹಿಂದೂ ಯುವತಿಯರು ಎಚ್ಚರಗೊಳ್ಳುವ ಅಗತ್ಯವಿದೆ ಎಂದು ಧಾರವಾಡದಲ್ಲಿ ಶ್ರೀರಾಮ ಸೇನೆ ಸಂಸ್ಥಾಪಕ ಪ್ರಮೋದ್ ಮುತಾಲಿಕ್ ತಮ್ಮದೇ ದಾಟಿಯಲ್ಲಿ ಎಚ್ಚರಿಕೆ ನೀಡಿದ್ದಾರೆ.
ಈ ರೀತಿಯ ಪ್ರವೃತ್ತಿ ನೂರಕ್ಕೆ ನೂರರಷ್ಟು ಲವ್ ಜಿಹಾದ್ ಪ್ರಕರಣದಂತಿದೆ. ನಾವು ಕಳೆದ 15 ವರ್ಷದಿಂದ ಹಿಂದೂ ಹುಡುಗಿಯರಿಗೆ ಈ ಕುರಿತು ಎಚ್ಚರಿಕೆ ಕೊಡುತ್ತಾ ಬಂದಿದ್ದೇವೆ. ಆದರೂ ಇಂತಹ ಅನಾಹುತಗಳು ನಡೆಯುತ್ತಿವೆ. ಈ ಘಟನೆ ಯುವತಿಯರಿಗೆ ದೊಡ್ಡ ಪಾಠ. ಹಿಂದೂ ಹುಡುಗಿಯರು ಎಚ್ಚರಿಕೆಯಿಂದಿರುವುದನ್ನು ಕಲಿಯಬೇಕು. ಯಾರ ಜೊತೆ ಪ್ರೀತಿ ಮಾಡುತ್ತಿದ್ದೀನಿ, ಯಾರ ಜೊತೆ ಡೇಟಿಂಗ್ ಮಾಡುತ್ತಿದ್ದೀನಿ ಎನ್ನುವುದನ್ನು ತಿಳಿದುಕೊಳ್ಳಬೇಕು. ಯಾರ ಜೊತೆ ಲಿವಿಂಗ್ ಟುಗೆದರ್ ಇರಬೇಕೆ ಎಂಬುದನ್ನು ವಿಚಾರ ಮಾಡಬೇಕು ಎಂದು ಕಿವಿ ಮಾತು ಹೇಳಿದ್ದಾರೆ.
ಕಥುವಾ ಅತ್ಯಾಚಾರ ಕೊಲೆ ಪ್ರಕರಣ: ವಯಸ್ಕನಂತೆ ಬಾಲಾಪರಾಧಿ ವಿಚಾರಣೆಗೆ ಸುಪ್ರೀಂ ಆದೇಶ
ಈ ಪ್ರವೃತ್ತಿ ಸರಿ ಅಲ್ಲ ಇದೊಂದು ದೊಡ್ಡ ಅನಾಹುತ. ಘಟನೆ ಬಳಿಕ ಆತ 4 ಜನ ಹಿಂದೂ ಹುಡುಗಿಯರ ಜೊತೆ ಓಡಾಡಿದ್ದಾನೆ. ಇಂತಹ ನೀಚ, ಕ್ರೂರ ಪಾಪಿ ಅಫ್ತಾಬ್ಗೆ ಗಲ್ಲು ಶಿಕ್ಷೆ ನೀಡಬೇಕು. ಕೋರ್ಟ್ ಸಹ ಈ ಪ್ರಕರಣವನ್ನು ವಿಳಂಬ ಮಾಡಬಾರದು. ಒಂದೇ ತಿಂಗಳಲ್ಲಿ ಈ ಪ್ರಕ್ರಿಯೆ ಮುಗಿಸಿ ಗಲ್ಲು ಶಿಕ್ಷೆ ಕೊಟ್ಟರೆ ಮುಂದೆ ಇಂತಹ ಪ್ರವೃತ್ತಿ ಮೇಲಿಂದ ಮೇಲೆ ಆಗಲ್ಲ ಎಂದು ಹೇಳಿದರು.
ಮತಾಂತರ ತಡೆಯುವಲ್ಲಿ ಸರ್ಕಾರ ವಿಫಲ
ಹುಬ್ಬಳ್ಳಿಯಲ್ಲಿ ಮೇಲಿಂದ ಮೇಲೆ ಮತಾಂತರ ಪ್ರಕ್ರಿಯೆ ನಡೆಯುತ್ತಿದೆ. ಈ ಹಿಂದೆ ಎರಡು ಪ್ರಕರಣಗಳು ನಡೆದಿದ್ದವು. ಇದೀಗ ಚಿಕ್ಕಲಗೇರಿ ಎನ್ನುವ ಸಣ್ಣ ಬಡ ಕುಟುಂಬದ ಮೇಲೆ ಮತಾಂತರ ಆಗಿದೆ. ಪತಿ ಪತ್ನಿಯರಿಗೆ ಜಗಳ ಹಚ್ಚಿ ಪತ್ನಿಯನ್ನ ಮತಾಂತರ ಮಾಡಿದ್ದಾರೆ. ಪತ್ನಿಯ ಮೂಲಕ ಗಂಡನಿಗೆ ಒತ್ತಾಯ ಮಾಡುವ ಪ್ರಕ್ರಿಯೆ ನಡೆದಿದೆ. ಇದು ಜಗಳ ಆಗಿ ವಿಕೋಪಕ್ಕೆ ಹೋಗಿದೆ. ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದೆ. ಮತಾಂತರ ಕಾಯ್ದೆ ನಿಷೇಧ ಇದ್ದರೂ ಈ ರೀತಿ ಆಗುತ್ತಿದೆ. ಸರ್ಕಾರದಿಂದ ಈ ಬಗ್ಗೆ ನಿರ್ಲಕ್ಷ್ಯವಾಗುತ್ತಿದೆ. ಕೇವಲ ಕಾನೂನು ಮಾತ್ರ ಮಾಡುವುದಲ್ಲ, ಅದನ್ನ ಸರಿಯಾಗಿ ಜಾರಿ ಮಾಡಬೇಕು ಎಂದು ಸರ್ಕಾರವನ್ನು ಟೀಕಿಸಿದರು.
ಕೋಮು ಭಾವನೆ ಕೆರಳಿಸುವ ಕೆಲಸ
ಉಡುಪಿಯ ಶಂಕರ ನಾರಾಯಣ ಎಂಬ ಗ್ರಾಮದ ಮದರ್ ತೆರೆಸಾ ಶಾಲೆಯಲ್ಲಿ ಅಜಾನ್ ಸಂಬಂಧಿಸಿದ ನೃತ್ಯ ಮಾಡಿದ್ದಾರೆ. ಆಜಾನ್, ನೃತ್ಯ ಹಾಗೂ ಶಾಲೆಗೆ ಸಂಬಂಧವೇ ಇಲ್ಲ. ಅನಾವಶ್ಯಕ ಕೋಮು ಭಾವನೆಯನ್ನ ಕೆರಳಿಸುವ ಕೆಲಸ ನಡೆದಿದೆ. ಅದೂ ಕೂಡಾ ಹಿಂದೂ ವಿದ್ಯಾರ್ಥಿಗಳ ಕಡೆಯಿಂದ ನೃತ್ಯ ಮಾಡಿಸಿದ್ದಾರೆ, ಅಜಾನ್ನಲ್ಲಿ ಅಲ್ಲಾ ಒಬ್ಬನೇ ದೇವರು, ಉಳಿದವರು ಕಾಫಿರ್ ಎಂದು ಹೇಳಲಾಗುತ್ತದೆ. ಅದು ಇವತ್ತು ಪ್ರಾರ್ಥನೆ ಹಾಗೂ ಸ್ವಾಗತ ಗೀತೆ ಹೇಗೆ ಆಗುತ್ತಿದೆ. ಮುಸ್ಲಿಂ ಅಜಾನ್, ಕ್ರಿಶ್ಚಿಯನ್ ಶಾಲೆ, ಹಿಂದು ಹುಡುಗರು, ಒಂದಕ್ಕೆ ಒಂದು ಸಂಬಂಧ ಇಲ್ಲ.
ಅಲ್ಲಿ ಒಂದೆ ಒಂದು ಮುಸ್ಲಿಂ ಮನೆ ಇಲ್ಲ, ಮೇಲಿಂದ ಮೇಲೆ ಉಡುಪಿ ಹಾಗೂ ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಇಂತಹ ಘಟನೆ ಆಗುತ್ತಿದೆ. ಇದರ ಹಿಂದೆ ವ್ಯವಸ್ಥಿತ ಷಡ್ಯಂತ್ರ ನಡೆದಿದೆ. ಮಕ್ಕಳ ಮನಸ್ಸಿನಲ್ಲಿ ವಿಷ ಬೀಜ ಬಿತ್ತುವ ಪ್ರಯತ್ನ ನಡೆದಿದೆ. ಈಗಾಗಲೇ ಅವರು ಕ್ಷಮೆ ಕೇಳಿದ್ದಾರೆ. ಕ್ಷಮೆಗೆ ಸಾಲದು ಇದು ಅವರ ಹಿಂದೆ ಯಾರು ಇದಾರೆ, ಯಾಕೆ ಮಾಡಿದಾರೆ ಎಂದು ತನಿಖೆಯಾಗಬೇಕು ಎಂದು ಆಗ್ರಹಿಸಿದರು.
ಪ್ರತಾಪ್ ಸಿಂಹಗೆ ನನ್ನ ಬೆಂಬಲ
ಗುಮ್ಮಟದ ವಿಚಾರ ಅತ್ಯಂತ ವ್ಯವಸ್ಥಿತ ಷಡ್ಯಂತ್ರ, ಅದಕ್ಕೆ ಈಗ ಸಮರ್ಥ ಕೊಡುತ್ತಿದ್ದಾರೆ. ಮೈಸೂರು ಮಾದರಿಯಲ್ಲಿ ಮಾಡಿದ್ದೇವೆ ಎನ್ನುತ್ತಿದ್ದಾರೆ. ಇದು ಮೈಸೂರು ಅರಮನೆ ಮಾದರಿಯಲ್ಲಿ ಮಾಡುವದು ಸರಿಯಲ್ಲ. ಗುಮ್ಮಟ ಎದ್ದು ಕಾಣುತ್ತೆ, ಮಸೀದಿ ಮಾದರಿಯಲ್ಲೇ ಇದೆ. ಅದನ್ನ ತೆಗೆಯಬೇಕು ಎಂದು ನನ್ನ ನಿಲುವಿದೆ, ಪ್ರತಾಪ್ ಸಿಂಹ ಅವರ ನಿಲುವು ಸರಿ ಇದೆ. ಅವರಿಗೆ ನನ್ನ ಬೆಂಬಲ ಇದೆ ಎಂದರು.
ಡಿಸೆಂಬರ್ರನಲ್ಲಿ ಕ್ಷೇತ್ರ ಘೋಷಣೆ
ಚುನಾವಣೆಗೆ ನಿಲ್ಲುವ ಬಗ್ಗೆ ಸರ್ವೆ ನಡೆಯುತ್ತಿದೆ. ನಾನು ಕಾರ್ಕಳಕ್ಕೆ ಹೋಗುತ್ತೇನೆ. ಎಲ್ಲಾ ಕಡೆ ಒಂದು ರೌಂಡ್ ಓಡಾಡಿದ ನಂತರ ಡಿಸೆಂಬರ್ 2 ನೇ ವಾರದಲ್ಲಿ ಚುನಾವಣೆ ಸ್ಫರ್ಧಿಸುವ ಕುರಿತು ಅಧಿಕೃತ ಘೋಷಣೆ ಮಾಡುತ್ತೇನೆ ಎಂದು ಪ್ರಮೋದ್ ಮುತಾಲಿಕ್ ಹೇಳಿದರು.