ಬಿಜೆಪಿ ಧ್ವಜ ನೀತಿಗೆ ವಿರೋಧ; ಕೆಕೆಜಿಎಸ್ಎಸ್ ಪ್ರತಿಭಟನೆ ರಾಹುಲ್ ಬೆಂಬಲ
ಹುಬ್ಬಳ್ಳಿ, ಆಗಸ್ಟ್ 4: ಕರ್ನಾಟಕ ಖಾದಿ ಗ್ರಾಮೋದ್ಯೋಗ ಸಂಯುಕ್ತ ಸಂಘದ ಪ್ರತಿಭಟನೆಗೆ ಎಐಸಿಸಿ ಮಾಜಿ ಅಧ್ಯಕ್ಷ ಹಾಗೂ ಸಂಸದ ರಾಹುಲ್ ಗಾಂಧಿ ಬೆಂಬಲ ಸೂಚಿಸಿದ್ದಾರೆ.
ಹುಬ್ಬಳ್ಳಿಯ ಬೆಂಗೇರಿಯಲ್ಲಿ ಕರ್ನಾಟಕ ಖಾದಿ ಗ್ರಾಮೋದ್ಯೋಗ ಸಂಯುಕ್ತ ಸಂಘದ (ಕೆಕೆಜಿಎಸ್ಎಸ್) ಖಾದಿ ಧ್ವಜ ತಯಾರಿಕಾ ಘಟಕಕ್ಕೆ ಕಾಂಗ್ರೆಸ್ ಮುಖಂಡ ರಾಹುಲ್ ಗಾಂಧಿ ಭೇಟಿ ನೀಡಿದ್ದು, ಪ್ರತಿಭಟನಾ ನಿರತ ಕಾರ್ಯಕರ್ತರಿಗೆ ಬೆಂಬಲ ಘೋಷಿಸಿದ್ದಾರೆ.
ಧ್ವಜ ಸಂಹಿತೆಯನ್ನು ತಿದ್ದುಪಡಿ ಮಾಡುವ ಮತ್ತು ಪಾಲಿಯೆಸ್ಟರ್ ಧ್ವಜಗಳಿಗೆ ಅನುಮತಿ ನೀಡುವುದಕ್ಕೆ ಕೇಂದ್ರ ಸರ್ಕಾರ ಮುಂದಾಗಿದೆ. ಈ ಹಿನ್ನೆಲೆ ಭಾರತದ ಏಕೈಕ ಬ್ಯೂರೋ ಆಫ್ ಇಂಡಿಯನ್ ಸ್ಟ್ಯಾಂಡರ್ಡ್ಸ್-ಪ್ರಮಾಣೀಕೃತ ಧ್ವಜ ತಯಾರಿಕೆ ಘಟಕವಾಗಿರುವ ಕೆಕೆಜಿಎಸ್ಎಸ್ ಕಾರ್ಮಿಕರು ಮತ್ತು ಸದಸ್ಯರು ಪ್ರತಿಭಟನೆ ನಡೆಸುತ್ತಿದ್ದಾರೆ.

ಖಾದಿ ಮತ್ತು ಚರಕಾ ಮಹಾತ್ಮ ಗಾಂಧಿಯ ಸಂಕೇತ
ಬುಧವಾರ ಹುಬ್ಬಳ್ಳಿಯ ಬೆಂಗೇರಿಯಲ್ಲಿರುವ ಧ್ವಜ ತಯಾರಿಕೆ ಘಟಕಕ್ಕೆ ಭೇಟಿ ನೀಡಿದ ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಅಲ್ಲಿನ ಕಾರ್ಯಕರ್ತರ ಜೊತೆಗೆ ಸಂವಾದ ನಡೆಸಿದರು. ನಂತರ ಮಾಧ್ಯಮಗಳಿಗೆ ಪ್ರತಿಕ್ರಿಯೆ ನೀಡಿದ ಅವರು, ಖಾದಿ ಮತ್ತು ಚರಕಾ ಮಹಾತ್ಮ ಗಾಂಧಿ ಮತ್ತು ಭಾರತವನ್ನು ಪ್ರತಿನಿಧಿಸುತ್ತದೆ ಎಂದರು.

ಬಿಜೆಪಿಯಿಂದ ಸಣ್ಣ ಮತ್ತು ಮಧ್ಯಮ ಉದ್ಯಮಗಳಿಗೆ ಹೊಡೆತ
"ದೇಶದಲ್ಲಿ ಸಣ್ಣ ಮತ್ತು ಮಧ್ಯಮ ವಲಯದ ಉದ್ಯಮಗಳಿಗೆ ಭಾರತೀಯ ಜನತಾ ಪಕ್ಷದಿಂದ ತೀವ್ರ ಹೊಡೆತ ಬೀಳುತ್ತಿದೆ. ಬಿಜೆಪಿಯು ಭಾರತದ ಸಣ್ಣ ಮತ್ತು ಮಧ್ಯಮ ಉದ್ಯಮಗಳಿಂದ ಏನನ್ನೂ ಮಾಡಬಾರದು ಎಂದು ಬಯಸುತ್ತದೆ. ಎಲ್ಲವನ್ನೂ ತಾನು ಒಲವು ಹೊಂದಿರುವ ಜನರಿಂದಲೇ ಉತ್ಪಾದಿಸುವುದಕ್ಕೆ ಎದುರು ನೋಡುತ್ತದೆ. ಆ ಮೂಲಕ ಖಾದಿ ಧ್ವಜ ನೇಕಾರರ ಜೇಬಿನಿಂದ ಹಣವನ್ನು ತೆಗೆದುಕೊಂಡು ಅವರ ನೆಚ್ಚಿನ ಜನರ ಜೇಬಿಗೆ ಹಾಕುವ ಆಲೋಚನೆ ಮಾಡುತ್ತಿದೆ. ಹೀಗಾಗಿಯೇ ಬಿಜೆಪಿಯು ಧ್ವಜ ನಿಯಮಗಳನ್ನು ಬದಲಾಯಿಸುತ್ತಿದೆ,'' ಎಂದು ರಾಹುಲ್ ಗಾಂಧಿ ಆರೋಪಿಸಿದರು.

ಪಾಲಿಯೆಸ್ಟರ್ ಧ್ವಜಕ್ಕೆ ಸೂರತ್ ಕಾರ್ಖಾನೆ
ಕೇಂದ್ರ ಸಚಿವರ ಪುತ್ರನ ಪಾಲುದಾರರಾಗಿರುವ ಗುಜರಾತಿನ ಸೂರತ್ನಲ್ಲಿರುವ ಒಂದೆರಡು ಕಾರ್ಖಾನೆಗಳಿವೆ. ಆ ಕಾರ್ಖಾನೆಗಳಲ್ಲಿಯೇ ಪಾಲಿಯೆಸ್ಟರ್ ಧ್ವಜಗಳನ್ನು ತಯಾರಿಸಲಾಗುತ್ತಿದೆ ಎಂದು ರಾಹುಲ್ ಗಾಂಧಿ ಆರೋಪಿಸಿದರು. ಕಳೆದ ತಿಂಗಳು ಇದೇ ಘಟಕಕ್ಕೆ ಕೆಪಿಸಿಸಿ ಅಧ್ಯಕ್ಷ ಡಿ. ಕೆ. ಶಿವಕುಮಾರ್, ಕಾರ್ಯಾಧ್ಯಕ್ಷ ಸತೀಶ್ ಜಾರಕಿಹೊಳಿ ಸೇರಿದಂತೆ ಹಲವು ಕಾಂಗ್ರೆಸ್ ಮುಖಂಡರು ಭೇಟಿ ನೀಡಿದ್ದರು.

ನೋಟ್ ಬ್ಯಾನ್, ಕೃಷಿ ಮಸೂದೆಗಳ ವಿರುದ್ಧ ರಾಹುಲ್ ಟೀಕಾಪ್ರಹಾರ
ಭಾರತದಲ್ಲಿ ಈ ಹಿಂದೆ ಕೇಂದ್ರದ ಬಿಜೆಪಿ ಸರ್ಕಾರವು ಜಾರಿಗೊಳಿಸಿದ ನೋಟ್ ಬ್ಯಾನ್ ಮತ್ತು ಕೃಷಿ ಕಾಯ್ದೆಗಳು ಅದರ ನೀತಿಯನ್ನು ತೋರಿಸುತ್ತವೆ. ಇಡೀ ದೇಶದ ಸಣ್ಣ ಕೈಗಾರಿಕೆಗಳನ್ನು ಮುಗಿಸಿ, ದೊಡ್ಡ ದೊಡ್ಡ ಉದ್ಯಮಿಗಳ ಜೇಬು ತುಂಬಿಸುವುದಕ್ಕೆ ಕೇಂದ್ರ ಸರ್ಕಾರ ಪ್ರಯತ್ನಿಸುತ್ತಿದೆ ಎಂದು ರಾಹುಲ್ ಗಾಂಧಿ ಟೀಕಾಪ್ರಹಾರ ನಡೆಸಿದರು. ಬಿಜೆಪಿಯು ದೊಡ್ಡ ಕೈಗಾರಿಕೋದ್ಯಮಿಗಳ ಪರವಾಗಿದ್ದು, ಬಡವರ ಲೂಟಿ ಹೊಡೆಯುತ್ತಿದೆ ಎಂದು ಆರೋಪಿಸಿದರು.












Click it and Unblock the Notifications