Breaking; ಪಿಎಸ್ಐ ಹಗರಣ, ಕಾಂಗ್ರೆಸ್ಗೆ ಜೋಶಿ ತಿರುಗೇಟು
ಹುಬ್ಬಳ್ಳಿ, ಮೇ 08; "ಪಿಎಸ್ಐ ನೇಮಕಾತಿ ಹಗರಣದಲ್ಲಿ ತನಿಖಾ ಸಂಸ್ಥೆಗಳಿಂದ ತನಿಖೆ ಬೇಡ ನ್ಯಾಯಂಗ ತನಿಖೆ ಬೇಕು ಎಂದು ಕಾಂಗ್ರೆಸ್ ನಾಯಕರು ಹೇಳುತ್ತಿದ್ದಾರೆ. ಇದರಿಂದ ಅವರು ಆರೋಪಿಗಳನ್ನು ರಕ್ಷಣೆ ಮಾಡಲು ಮುಂದಾಗುತ್ತಿರುವುದು ಸ್ಪಷ್ಟವಾಗಿದೆ" ಎಂದು ಕೇಂದ್ರ ಸಚಿವ, ಧಾರವಾಡ ಸಂಸದ ಪ್ರಹ್ಲಾದ್ ಜೋಶಿ ಆರೋಪಿಸಿದರು.
ಹುಬ್ಬಳ್ಳಿಯಲ್ಲಿ ಮಾತನಾಡಿದ ಅವರು, "ನ್ಯಾಯಂಗ ತನಿಖೆಯಾದರೇ ಯಾರು ಜೈಲಿಗೆ ಹೋಗಲ್ಲ. ಸುಮ್ಮನೆ ಎಲ್ಲರೂ ಕಾಲಹರಣ ಮಾಡಿದರಾಯಿತು ಅಂತ ಅಂದುಕೊಂಡಿದ್ದಾರೆ" ಎಂದು ಪ್ರಹ್ಲಾದ್ ಜೋಶಿ ದೂರಿದರು.
"ಪ್ರಿಯಾಂಕ್ ಖರ್ಗೆ ಮನೆಯಲ್ಲಿ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ, ಅವರ ಸಹೋದರ ಇರುತ್ತಿದ್ದರು. ಯಾಕೆ ಅವರು ನೋಟಿಸ್ ನೀಡಿದ್ದರೂ ಉತ್ತರ ನೀಡುತ್ತಿಲ್ಲ. ಅವರು ಶಾಸಕರೋ, ಸಾಮಾನ್ಯ ಜನರೋ?. ಆರೋಪ ಮಾಡಿದ ಮೇಲೆ ಅವರು ದಾಖಲೆ ನೀಡಬೇಕಲ್ಲವೇ?" ಎಂದು ಸಚಿವರು ಪ್ರಶ್ನೆ ಮಾಡಿದರು.

"ಸಿಐಡಿ ವಿಚಾರಣೆಗೆ ನೋಟಿಸ್ ನೀಡಿದರೂ ಪ್ರಿಯಾಂಕ್ ಖರ್ಗೆ ಹಾಜರಾಗಿಲ್ಲ. ಅವರ ಹತ್ತಿರ ಮಾಹಿತಿ ಇದ್ದರೆ ಅದನ್ನು ಜವಬ್ದಾರಿ ವ್ಯಕ್ತಿಯಾಗಿ ನೀಡುವುದು ಅವರ ಕರ್ತವ್ಯ" ಎಂದು ಪ್ರಹ್ಲಾದ್ ಜೋಶಿ ಹೇಳಿದರು.
"ಈಗ ಅವ್ಯವಹಾರದಲ್ಲಿ ಕಾಂಗ್ರೆಸ್ ಶಾಮೀಲಾಗಿರುವುದು ಸ್ಪಷ್ಟವಾಗಿ ಗೊತ್ತಾಗುತ್ತಿದೆ. ಆದ್ದರಿಂದ ತನಿಖಾ ಸಂಸ್ಥೆಗಳಿಂದ ಕಾಂಗ್ರೆಸ್ ನಾಯಕರು ತನಿಖೆ ಬೇಡ ಎನ್ನುತ್ತಿದ್ದಾರೆ" ಎಂದು ದೂರಿದರು.












Click it and Unblock the Notifications