'ಮಹಾದಾಯಿ ಹೋರಾಟಗಾರರ ಮೇಲಿನ ಕೇಸ್ ಹಿಂಪಡೆಯಿರಿ'
ಹುಬ್ಬಳ್ಳಿ, ಅಕ್ಟೋಬರ್, 12 : ಮಹಾದಾಯಿ ನ್ಯಾಯಧೀರಕರಣ ತೀರ್ಪು ವಿರೋಧಿಸಿ ಕಳೆದ ಜುಲೈನಲ್ಲಿ ನಡೆದ ಪ್ರತಿಭಟನೆ ಸಂದರ್ಭದಲ್ಲಿ ಹೋರಾಟಗಾರರ ಮೇಲೆ ಹಾಕಲಾಗಿದ್ದ ಕೇಸ್ ಗಳನ್ನು ವಾಪಸ್ ಪಡೆಯುವಂತೆ ವಿವಿಧ ಸಂಘಟನೆಗಳ ಮುಖಂಡರು ಮಂಗಳವಾರ ಇಲ್ಲಿ ನಡೆದ ಪತ್ರಿಕಾಗೋಷ್ಟಿಯಲ್ಲಿ ಆಗ್ರಹಿಸಿದರು.
ಮಹಾದಾಯಿ ವಿಚಾರವಾಗಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಇದೇ 21ರಂದು ಕರೆದಿರುವ ಸರ್ವಪಕ್ಷೆ ಸಭೆ ಹಿನ್ನೆಲೆಯಲ್ಲಿ ಸಭೆ ನಡೆಸಿದ ಮುಖಂಡರು ಹೋರಾಟಗಾರರ ಮೇಲೆ ಹಾಕಲಾಗಿರುವ ಕೇಸ್ ಗಳನ್ನು ಹಿಂಪಡೆಯುವ ಕುರಿತು ಕೂಡಲೇ ಸಚಿವ ಸಂಪುಟ ಸಭೆಯಲ್ಲಿ ಆದೇಶ ಹೊರಡಿಸಬೇಕು ಎಂದು ಆಗ್ರಹಿಸಿದರು.[ಕರ್ನಾಟಕದ ಅರ್ಜಿ ತಿರಸ್ಕರಿಸಿದ ಮಹಾದಾಯಿ ನ್ಯಾಯ ಮಂಡಳಿ]
''ಕಾವೇರಿ ವಿಚಾರವಾಗಿ ತರಾತುರಿಯಲ್ಲಿ ತೀರ್ಮಾನ ತೆಗೆದುಕೊಳ್ಳುವ ರಾಜ್ಯ ಸರ್ಕಾರ ಮಹಾದಾಯಿ ವಿಚಾರದಲ್ಲಿ ನಿರ್ಲಕ್ಷ್ಯ ತೋರುತ್ತಿರುವುದು ಏಕೆ'' ಎಂದು ಸಭೆಯಲ್ಲಿ ಭಾಗವಹಿಸಿದ್ದ ನವಲಗುಂದ ಶಾಸಕ ಕೋನರಡ್ಡಿ ಮತ್ತು ಹೋರಾಟಗಾರ ಲೋಕನಾಥ ಹೆಬಸೂರ್ ಕಿಡಿಕಾರಿದರು.
ಕಾವೇರಿ ವಿಚಾರದಲ್ಲಿ ತೀರ್ಮಾನ ತೆಗೆದುಕೊಂಡ ರೀತಿಯಲ್ಲೇ ಮಹಾದಾಯಿ ವಿಚಾರದಲ್ಲೂ ರಾಜ್ಯದ ಪ್ರಮುಖ ಮೂರು ಪಕ್ಷಗಳು ಒಕ್ಕೊರಲ ತೀರ್ಮಾನ ತೆಗದುಕೊಳ್ಳಬೇಕು ಎಂದು ಶಾಸಕ ಕೋನರಡ್ಡಿ ಹೇಳಿದರು. ಮತ್ತು ಈ ವಿಚಾರದಲ್ಲಿ ಯಾವುದೇ ಕಾರಣಕ್ಕೂ ರಾಜಕೀಯ ಮಾಡಬಾರದು ಎಂದು ಸಲಹೆ ನೀಡಿದರು.
ಹಿಂದೆ ಮಾಡಿರು ತಪ್ಪುಗಳನ್ನು ಕೆಣಕುತ್ತಾ ಪರಸ್ಪರ ಕೆಸರೆರಚಾಟ ಮಾಡದೇ ಒಮ್ಮತದಿಂದ ಹೋರಾಡಬೇಕು ಎಂದು ಸಭೆಯಲ್ಲಿ ಹೋರಾಟಗಾರರು ಆಗ್ರಹಿಸಿದರು. ನವಲಗುಂದ, ನರಗುಂದ, ಹುಬ್ಬಳ್ಳಿ, ಧಾರವಾಡ, ಬೈಲಹೊಂಗಲ, ಸವದತ್ತಿ, ಗದಗ, ಮತ್ತು ಮಲಪ್ರಭಾ ನದಿ ತೀರದ ರೈತರು ಭಾಗವಹಿಸಿದ್ದರು.
ಕರ್ನಾಟಕದಲ್ಲಿ ಹುಟ್ಟುವ ಮಹಾದಾಯಿ ನದಿ ಮುಂದೆ ಗೋವಾ ರಾಜ್ಯವನ್ನು ಸೇರುತ್ತದೆ. ಇದಕ್ಕೆ ಕಳಸ-ಬಂಡೂರಿ,ಕಾರಂಜೋಳ, ಮತ್ತಿತರರ ಉಪನದಿಗಳು ಸೇರಿಕೊಳ್ಳುತ್ತವೆ. ಮಹಾದಾಯಿ ನದಿಯಿಂದ ಮಲಪ್ರಭಾ ನದಿಗೆ ಕಾಲುವೆ ಮೂಲಕ ನೀರು ಹರಿಸುವುದೇ ಕಳಸ-ಬಂಡೂರಿ ಯೋಜನೆಯಾಗಿದೆ.