ಆನ್ ಲೈನ್ ಮಾರಾಟದ ಮೇಲೆ ನಿಯಂತ್ರಣ ಹಾಕುವಂತೆ ಪ್ರತಿಭಟನೆ
ಹುಬ್ಬಳ್ಳಿ, ಜನವರಿ 08 : ವಿದೇಶಿ ಕಂಪನಿಗಳು ದೇಶದಾದ್ಯಂತ ಆನ್ ಲೈನ್ ವ್ಯವಹಾರದ ಮೂಲಕ ದೇಶದ ಮೊಬೈಲ್ ಮಾರಾಟಗಾರರನ್ನು ನುಂಗಿ ಹಾಕುವ ಹುನ್ನಾರ ನಡೆಸುತ್ತಿದೆ ಎಂದು ಆರೋಪಿಸಿ ಭಾರತೀಯ ಮೊಬೈಲ್ ವ್ಯಾಪಾರಸ್ಥರ ಅಸೋಸಿಯೇಷನ್ (ಎಐಎಮ್ ಆರ್ ಎ), ದ ಕಾನ್ಫಿಡರೇಶನ್ ಅಫ್ ಆಲ್ ಇಂಡಿಯಾ ಟ್ರೇಡರ್ಸ್ (ಸಿಎಐಟಿ) ವತಿಯಿಂದ ನಗರದ ತಹಶಿಲ್ದಾರ ಕಚೇರಿ ಎದುರು ಪ್ರತಿಭಟನೆ ನಡೆಸಿತು.
ದೇಶದಾದ್ಯಂತ ಆನ್ ಲೈನ್ ಮಾರಾಟ ಹಾಗೂ ವ್ಯವಹಾರದ ವಿರುದ್ಧ ನಡೆಸಲಾಗುತ್ತಿರುವ ಆಂದೋಲನಕ್ಕೆ ನಗರದ ಮೊಬೈಲ್ ಮಾರಾಟಗಾರ ಸಂಘಗಳು ಬೆಂಬಲ ಸೂಚಿಸಿ ಸಿಬಿಟಿ ಹತ್ತಿರದ ಹರ್ಷಾ ಕಾಂಪ್ಲೆಕ್ಸ್ ನಿಂದ ಮಿನಿ ವಿಧಾನ ಸೌಧದವರೆಗೆ ಪ್ರತಿಭಟನಾ ಮೆರವಣಿಗೆ ನಡೆಸಿದರು.
ದೇಶದಲ್ಲಿ ಆನ್ ಲೈನ್ ಮಾರಾಟದ ಸಂಪೂರ್ಣ ಲಾಭವನ್ನು ಕೇವಲ ವಿದೇಶಿ ಕಂಪನಿಗಳು ಪಡೆಯುತ್ತಿದ್ದು, ಪರಿಣಾಮ ದೇಶದ ಶೇ.70 ರಷ್ಟು ಮೊಬೈಲ್ ಮಾರಾಟಗಾರರಿಗೆ ಅಪಾರವಾದ ನಷ್ಟವಾಗುತ್ತಿದೆ ಎಂದು ಅಳಲು ತೊಡಿಕೊಂಡರು.

ಅಲ್ಲದೇ ಒಂದು ಅಂದಾಜಿನ ಪ್ರಕಾರ 40 ಸಾವಿರ ಮೊಬೈಲ್ ಮಾರಾಟಗಾರರು ತಮ್ಮ ವ್ಯವಹಾರವನ್ನು ಸ್ಥಗಿತಗೊಳಿಸಿದ್ದು, ಎರಡು ತಿಂಗಳಲ್ಲಿ ಸುಮಾರು 6 ಲಕ್ಷ ಉದ್ಯೋಗಿಗಳು ನಿರುದ್ಯೋಗಿಗಳಾಗಿದ್ದಾರೆ. ಕೂಡಲೇ ಆನ್ ಲೈನ್ ಮಾರಾಟ ಕಂಪನಿಗಳ ಮೇಲೆ ಸರ್ಕಾರ ನಿಯಂತ್ರಣ ಹಾಕಬೇಕೆಂದು ಆಗ್ರಹಿಸಿದರು.
ಇನ್ನೂ ಆನ್ ಲೈನ್ ಮಾರಾಟ ಕಂಪನಿಗಳು ಇ - ಕಾಮರ್ಸ್ ಕಂಪನಿಗಳು ಎಫ್ ಡಿ ಐ ಕಾಯಿದೆಯನ್ನು ಕಡ್ಡಾಯವಾಗಿ ಪಾಲಿಸಬೇಕು, ಆನ್ ಲೈನ್ ಮಾರಾಟದಲ್ಲಿ ಹೆಚ್ಚು ರಿಯಾಯಿತಿ ಕೊಡುವುದನ್ನು ನಿಲ್ಲಿಸಬೇಕು, ಕೆಲವೊಂದು ವಸ್ತುಗಳನ್ನು ಇ-ಕಾಮರ್ಸ್ ಮಾರಾಟದಿಂದ ಕೈಬಿಡಬೇಕು ಎಂದು ಆಗ್ರಹಿಸಿದರು.
ಆನ್ ಲೈನ್ ಮಾರಾಟ ಕಂಪನಿಗಳ ಮೇಲೆ ಸರ್ಕಾರ ನಿಯಂತ್ರಣ ಹೇರಬೇಕು ಜೊತೆಗೆ ಆನ್ ಲೈನ್ ಮತ್ತು ಆಫ್ ಲೈನ್ ನಲ್ಲಿ ಮಾರಾಟ ಮಾಡುವ ವಸ್ತುಗಳ ಬೆಲೆ ಒಂದೇ ತೆರನಾಗಿ ಮಾಡಬೇಕೆಂದು ತಹಶೀಲ್ದಾರರ ಮೂಲಕ ಕೇಂದ್ರ ಸರ್ಕಾರಕ್ಕೆ ಮನವಿ ಸಲ್ಲಿಸಿದರು.
ಈ ಸಂದರ್ಭದಲ್ಲಿ ಸಂತೋಷ ಮುರಗಿ ಪಾಟೀಲ, ನಾಗರಾಜ ರಟಗಲ್, ಶ್ರೀನಿವಾಸ್ ರತನ, ಜಮೀರ ಮದ್ದಿನ್, ಇಮ್ರಾನ್ ಸವಣೂರು, ಆಶೀಫ್ ಚವ್ಹಾಣ, ಹಿತೇಶ ಜೈನ್, ನಿಖಿಲ ಜೈನ್, ಸಿದ್ದಾರ್ಥ ಹತ್ತಿಕೊಳ, ಅಮರ ಪಿಕಾರೆ ಸೇರಿದಂತೆ ಮುಂತಾದವರು ಇದ್ದರು.












Click it and Unblock the Notifications