ಧಾರವಾಡ ಜೈಲಲ್ಲಿ ಅಧಿಕಾರಿಗಳ ಚಾಕರಿ ಮಾಡಿದ್ರೆ ಖೈದಿಗಳಿಗೆ 'ಸ್ವಾತಂತ್ರ್ಯ'
ಧಾರವಾಡ, ಜುಲೈ 17: ಜೈಲುಗಳ ಅಕ್ರಮ ಬಗೆದಷ್ಟು ಆಳ ಎಂಬಂತೆ ಎಷ್ಟು ಬಯಲಿಗೆ ಎಳೆದರೂ ಮುಗಿಯುವುದೇ ಇಲ್ಲ. ಇದಕ್ಕೆ ಧಾರವಾಡದ ಕೇಂದ್ರ ಕಾರಾಗೃಹವೂ ಹೊರತಾಗಿಲ್ಲ.
ಈ ಹಿಂದೆಯೂ ಹಲವು ಅಕ್ರಮಗಳ ಮೂಲಕ ಸುದ್ದಿಯಲ್ಲಿದ್ದ ಈ ಕಾರಾಗೃಹದಲ್ಲಿನ ಖೈದಿಗಳು ಅಧಿಕಾರಿಗಳ ಚಾಕರಿ ಮಾಡಿದರೆ ದಿನವಿಡೀ ಎಲ್ಲಿಗೆ ಬೇಕಾದರೂ ಹೋಗಿ ಬರಬಹುದಾಗಿದೆ.
ಹೌದು, ಜೈಲು ಅಧಿಕಾರಿಗಳ ಮನೆಯಲ್ಲಿ ಅವರ ಚಾಕರಿ ಮಾಡಿದರೆ ಸಾಕು, ಇಡೀ ದಿನ ಖೈದಿಗಳು ಜೈಲಿನಲ್ಲಿ ಇರಬೇಕೆಂದೇನಿಲ್ಲ. ಬೆಳಗ್ಗೆ ಹೊರಗೆ ಹೋಗಿ ಸುತ್ತಾಡಿಕೊಂಡು ಪುನಃ ಸಂಜೆ ವೇಳೆಗೆ ವಾಪಸ್ ಬಂದರೆ ಮುಗಿಯಿತು.

ಹೀಗೆ ಅಧಿಕಾರಿಗಳ ನಂಬಿಕೆ ಗಳಿಸಿಕೊಂಡು ಅವರ ಮನೆಗೆಲಸ ಮಾಡಿಕೊಂಡು ಬಿಂದಾಸ್ ಆಗಿ ಓಡಾಡಿಕೊಂಡಿರುವ ಹಲವಾರು ಖೈದಿಗಳು ಧಾರವಾಡ ಕಾರಾಗೃಹದಲ್ಲಿದ್ದಾರೆ.
ಅಚ್ಚರಿ ಸಂಗತಿ ಎಂದರೆ ಕೆಲವು ಖೈದಿಗಳು ಧಾರವಾಡದ ಮಾರ್ಕೆಟ್ನಲ್ಲಿ ಹಣ್ಣು, ತರಕಾರಿ ಸೇರಿದಂತೆ ಮತ್ತಿತರ ವ್ಯಾಪಾರ ಮಾಡಿಕೊಂಡಿದ್ದಾರೆ. ಬೆಳಗಿನಿಂದ ಸಂಜೆವರೆಗೆ ವ್ಯಾಪಾರ ಮಾಡಿ ಪುನಃ ಸಂಜೆ ವೇಳೆಗೆ ಜೈಲು ಸೇರುವುದು ಇವರ ದಿನಚರಿ.
ಇನ್ನು ಅಗತ್ಯ ಬಿದ್ದಾಗ ಅಧಿಕಾರಿ ಸೇವೆ ಮಾಡುವುದು ಕಡ್ಡಾಯ. ಹಾಗಂತ ಎಲ್ಲ ಖೈದಿಗಳಿಗೂ ಈ ಅವಕಾಶವಿಲ್ಲ. ಅಧಿಕಾರಿಗಳ ನಂಬಿಕೆ ಗಳಿಸಿಕೊಂಡವರಿಗೆ ಮಾತ್ರ ಈ ಅವಕಾಶ. ಅಂದರೆ ಹಲವು ವರ್ಷಗಳಿಂದ ಅವರ ಚಲನವಲನಗಳನ್ನು ಗುರುತಿಸುವ ಅಧಿಕಾರಿಗಳು, ಹೊರಗೆ ಹೋದವರು ಮರಳಿ ಬರುತ್ತಾರೆ ಎಂಬ ನಂಬಿಕೆ ಇದ್ದರೆ ಮಾತ್ರ ಹೊರಗಡೆ ಕಳುಹಿಸುತ್ತಾರೆ.












Click it and Unblock the Notifications