ಹುಬ್ಬಳ್ಳಿ: ಕರುವಿಗೆ ಕಾರು ಡಿಕ್ಕಿ, ಮಾರಕಾಸ್ತ್ರಗಳಿಂದ ಹಲ್ಲೆ
ಹುಬ್ಬಳ್ಳಿ, ಆಗಸ್ಟ್, 03: ಹಸುವಿನ ಕರುವೊಂದಕ್ಕೆ ಕಾರು ಡಿಕ್ಕಿ ಹೊಡೆದಿದ್ದಕ್ಕೆ ಆಕ್ರೋಶಗೊಂಡ ನಾಗರಿಕರು ಐವರ ಮೇಲೆ ಮಾರಕಾಸ್ತ್ರಗಳಿಂದ ಮಾರಣಾಂತಿಕವಾಗಿ ಹಲ್ಲೆ ನಡೆಸಿದ ಘಟನೆ ಬುಧವಾರ ಬೆಳಗ್ಗೆ ನಗರದ ಸೆಟ್ಲಮೆಂಟ್ ಪ್ರದೇಶದಲ್ಲಿ ನಡೆದಿದೆ.
ಸ್ಥಳೀಯ ಸೆಟ್ಲಮೆಂಟ್ ಪ್ರದೇಶದ 4ನೇ ಕ್ರಾಸ್ ನಲ್ಲಿ ರಾಮು ಹಾನಗಲ್ ಎಂಬುವರು ಬುಧವಾರ ಬೆಳಗಿನ ಜಾವ ತಮ್ಮ ಕಾರನ್ನು ಹೊರ ತೆಗೆಯುತ್ತಿದ್ದಾಗ ಹನುಮಂತ ಎಂಬುವರಿಗೆ ಸೇರಿದ ಆಕಳು ಕರುವಿಗೆ ಕಾರು ಡಿಕ್ಕಿಯಾಗಿದೆ. ಇದರಿಂದ ಉದ್ರಿಕ್ತರಾದ ಹನುಮಂತ ಅವರು ಪರಶುರಾಮ ಉಂಡಿ ಮತ್ತು ಇತರರೊಂದಿಗೆ ಸೇರಿಕೊಂಡು ರಾಮು ಅವರೊಂದಿಗೆ ಜಗಳ ತೆಗೆದಿದ್ದಾರೆ.[ಯಮನೂರಿಗೆ ಬರುವ ರಾಜಕಾರಣಿಗೆ ಸೆಗಣಿ ಎರಚುವ ಚಳವಳಿ]
ಮಾತಿಗೆ ಮಾತು ಬೆಳೆದು ಹನುಮಂತ ಅವರು ಗುಂಪು ಕಟ್ಟಿಕೊಂಡು ರಾಮು ಅವರ ಮನೆಯೊಳಗೆ ನುಗ್ಗಿ ಇಡೀ ಕುಟುಂಬದವರಿಗೆ ಬಡಿಗೆ ಮತ್ತು ಚಾಕುವಿನಿಂದ ಹಲ್ಲೆ ನಡೆಸಿ ಪರಾರಿಯಾಗಿದ್ದಾರೆ.[ಮಹಿಳಾ ಆಯೋಗದ ಅಧ್ಯಕ್ಷರಿಗೆ ಯಮನೂರು ಜನರ ತರಾಟೆ]
ರಾಮು ಅವರ ಎದೆ ಭಾಗಕ್ಕೆ ಇವರ ಪತ್ನಿ ರೇಣುಕಾ ಎಂಬುವವರಿಗೆ ತಲೆಗೆ ಚಾಕುವಿನಿಂದ ಬಲವಾಗಿ ಇರಿಯಲಾಗಿದೆ. ಇವರ ಮೂವರು ಮಕ್ಕಳಾದ ವಿಜಯ, ನಿಲೇಶ ಮತ್ತು ಪ್ರಿಯಾ ಎಂಬುವರರನ್ನೂ ಕೂಡ ದುಷ್ಕರ್ಮಿಗಳು ಹಿಗ್ಗಾಮುಗ್ಗಾ ಥಳಿಸಿದ್ದಾರೆ.
ಗಾಯಾಳುಗಳನ್ನು ನಗರದ ಕಿಮ್ಸ್ ನ ತುರ್ತು ವಿಭಾಗದಲ್ಲಿರಿಸಿ ಚಿಕಿತ್ಸೆ ನೀಡಲಾಗುತ್ತಿದೆ. ಘಟನೆಗೆ ಸಂಬಂಧಪಟ್ಟಂತೆ ಬೆಂಡಿಗೇರಿ ಪೊಲೀಸರು ಹಲ್ಲೆ ನಡೆಸಿದವರ ಪತ್ತೆಗೆ ನಿರತರಾಗಿದ್ದಾರೆ.