ಹುಬ್ಬಳ್ಳಿ ಪಾಲಕರೊಬ್ಬರಿಗೆ ಪ್ರಧಾನಿ ಕಚೇರಿಯಿಂದ ಬಂತು ಮೆಚ್ಚುಗೆ ಪತ್ರ, ಯಾಕೆ ಗೊತ್ತಾ?
ಹುಬ್ಬಳ್ಳಿ, ಅಕ್ಟೋಬರ್, 17: ಪ್ರಧಾನಿ ನರೇಂದ್ರ ಮೋದಿ ಅವರು ವಿದ್ಯಾರ್ಥಿಗಳು, ಶಿಕ್ಷಕರು ಹಾಗೂ ಪೋಷಕರೊಂದಿಗೆ ಕಳೆದ ಆಗಷ್ಟ್ನಲ್ಲಿ ನಡೆಸಿದ್ದ 'ಪರೀಕ್ಷಾ ಪೇ ಚರ್ಚಾ'ಸಂವಾದದಲ್ಲಿ ಪಾಲ್ಗೊಂಡಿದ್ದ ಹುಬ್ಬಳ್ಳಿಯ ಪಾಲಕರೊಬ್ಬರಿಗೆ ಪ್ರಧಾನಿ ಕಚೇರಿಯಿಂದ ಮೆಚ್ಚುಗೆಯ ಪತ್ರ ಬಂದಿದೆ.
ಇಲ್ಲಿನ ಕೇಶ್ವಾಪುರದ ವಸಂತ ನಗರ ನಿವಾಸಿ ಅಮೃತ ಸೋಲಂಕಿ ಅವರಿಗೆ ಅಕ್ಟೋಬರ್ 10ರಂದು ಪ್ರಧಾನಿ ಕಚೇರಿಯಿಂದ ಬಂದಿರುವ ಪತ್ರದಲ್ಲಿ ಪರೀಕ್ಷಾ ಪೇ ಚರ್ಚಾದಲ್ಲಿ ಪೋಷಕರಾಗಿ ನಿಮ್ಮ ಉತ್ಸಾಹಭರಿತ ಪಾಲ್ಗೊಳ್ಳುವಿಕೆ ನಿಜವಾಗಿಯೂ ಹೃದಯಸ್ಪರ್ಶಿಯಾಗಿದೆ ಎಂದು ಮೆಚ್ಚುಗೆ ವ್ಯಕ್ತಪಡಿಸಲಾಗಿದೆ. ಪತ್ರ ಸಂಪೂರ್ಣ ಕನ್ನಡದಲ್ಲಿ ಇದ್ದು, ಪತ್ರದ ಕೊನೆಗೆ ಪ್ರಧಾನಿ ನರೇಂದ್ರ ಮೋದಿ ಅವರ ಸಹಿ ಇದೆ.

21ನೇ ಶತಮಾನ ಅವಕಾಶಗಳ ಯುಗ. ಬಾಹ್ಯಾಕಾಶದಿಂದ ಕ್ರೀಡೆವರೆಗೆ, ನವೋದ್ಯಮಿಗಳಿಂದ ತಂತ್ರಜ್ಞಾದವರೆಗೆ, ತಾಂತ್ರಿಕತೆಯಿಂದ ಕಲೆಯವರೆಗೆ, ಯುವ ಸಮೂಹಕ್ಕೆ ಪ್ರಜ್ವಲಿಸಲು ಹಲವಾರು ಮಾರ್ಗಗಳಿವೆ. ಅಸಾಧಾರಣ ಕೌಶಲ್ಯ ಮತ್ತು ಅಪಾರ ಶಕ್ತಿಯುಳ್ಳ ಈಗಿನ ಯುವ ಸಮೂಹಕ್ಕೆ ಯಾವುದೇ ಕನಸನ್ನು ನನಸಾಗಿಸುವುದು ಅಸಾಧ್ಯವಲ್ಲ ಎಂದು ತಿಳಿಸಲಾಗಿದೆ.
ಪ್ರಧಾನಿ ಕಚೇರಿಯಿಂದ ಪತ್ರ ಬಂದಿರುವ ಕುರಿತು ಪ್ರತಿಕ್ರಿಯೆ ನೀಡಿರುವ ಅಮೃತ ಸೋಲಂಕಿ, ಹಿರಿಯ ಮಗ ಬಿಕಾಂ ಪೂರ್ಣಗೊಳಿಸಿದ್ದು, ಮತ್ತೊಬ್ಬ ಮಗ ಬಿಕಾಂ ಓದುತ್ತಿದ್ದಾನೆ. ಇನ್ನೊಬ್ಬ 10ನೇ ತರಗತಿಯಲ್ಲಿ ಇದ್ದಾನೆ. ಪರೀಕ್ಷಾ ಪೇ ಚರ್ಚಾದಲ್ಲಿ ಪಾಲ್ಗೊಳ್ಳುವ ಉದ್ದೇಶದಿಂದ ಮುಂಚಿತವಾಗಿ ನೋಂದಣಿ ಮಾಡಿಸಿದ್ದೆ ಎಂದು ತಿಳಿಸಿದ್ದಾರೆ.
ಪ್ರಧಾನಿ ಕಚೇರಿಯಿಂದ ನನಗೆ ಪತ್ರ ಬರುತ್ತದೆಯೆಂಬ ನಿರೀಕ್ಷೆ ಇರಲಿಲ್ಲ. ಪತ್ರ ನೋಡಿ ಅಚ್ಚರಿ ಹಾಗೂ ಸಂತೋಷ ಎರಡೂ ಆಯಿತು. ಪ್ರಧಾನಮಂತ್ರಿಗಳ ಕಚೇರಿಯಿಂದ ಬಂದ ಪತ್ರ ನಮಗೆ ಇನ್ನಷ್ಟು ಸಂತಸ ಮೂಡಿಸಿದೆ ಎಂದು ತಂದೆ ತಾಯಿಗಳು ಸಹ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.












Click it and Unblock the Notifications