ಸರ್ಕಾರಿ ಆಸ್ಪತ್ರೆಯಲ್ಲಿ ಮೊದಲ ಬಾರಿಗೆ ಯಶಸ್ವಿ ಹೃದಯ ಚಿಕಿತ್ಸೆ
ಹುಬ್ಬಳ್ಳಿ, ಮೇ 27: ಕಿಮ್ಸ್ ಆಸ್ಪತ್ರೆಯಲ್ಲಿ ಪ್ರಥಮ ಬಾರಿಗೆ ಯಶಸ್ವಿ ತೆರೆದ ಹೃದಯ ಚಿಕಿತ್ಸೆ ಮಾಡಲಾಗಿದ್ದು, ಆ ಮೂಲಕ ಸರ್ಕಾರಿ ಆಸ್ಪತ್ರೆಯಲ್ಲಿ ಮೊದಲ ಬಾರಿಗೆ ಯಶಸ್ವಿ ತೆರೆದ ಹೃದಯ ಶಸ್ತ್ರ ಚಿಕಿತ್ಸೆಯನ್ನು ಮಾಡಿದ ಕೀರ್ತಿ ಕಿಮ್ಸ್ ಗೆ ದೊರೆತಿದೆ ಎಂದು ಕಿಮ್ಸ್ ನಿರ್ದೇಶಕ ಡಾ.ರಾಮಲಿಂಗಪ್ಪ ಅಂತರಠಾಣಿ ಹೇಳಿದರು.
ಹುಬ್ಬಳ್ಳಿಯ ಕಿಮ್ಸ್ ಸುವರ್ಣ ಮಹೋತ್ಸವ ಭವನದಲ್ಲಿ ಮಾಧ್ಯಮಗೋಷ್ಠಿಯಲ್ಲಿ ಅವರು ಮಾತನಾಡಿದರು. 68 ವರ್ಷದ ಗಂಗಮ್ಮ ಶಿರೋಳ ಎಂಬುವವರಿಗೆ ಎದೆನೋವು ಹಾಗೂ ಲಘು ಹೃದಯಾಘಾತವಾಗಿತ್ತು. ಅವರನ್ನು ಬೆಂಗಳೂರಿನ ಜಯದೇವ ಆಸ್ಪತ್ರೆ ಅಥವಾ ಬೇರೆ ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುವಂತೆ ಸೂಚಿಸಲಾಗಿತ್ತು. ಕಿಮ್ಸ್ ನಿರ್ದೇಶಕ ಡಾ.ರಾಮಲಿಂಗಪ್ಪ, ಡಾ. ಉಲ್ಲಾಸ್ ಬಿಸಲೇರಿ ಹಾಗೂ ಅವರ ತಂಡದಿಂದ ಯಶಸ್ವಿಯಾಗಿ ಬೈಪಾಸ್ ಸರ್ಜರಿ ಮಾಡಲಾಯಿತು. 31 ವರ್ಷದ ನಾಗೇಶ ಮಾದರ ಎಂಬುವವರು ಉಸಿರಾಟ ಸಮಸ್ಯೆಯನ್ನು ಎದುರಿಸುತ್ತಿದ್ದರು. ತಪಾಸಣೆಗೆ ಒಳಪಡಿಸಿದಾಗ ಹೃದಯದಲ್ಲಿ ರಂಧ್ರವಿರುವುದು ಕಂಡು ಬಂದಿತ್ತು, ನಂತರ ಅವರಿಗೆ ಸರ್ಜರಿ ಮಾಡಲಾಯಿತು ಈಗ ಇಬ್ಬರೂ ಆರೋಗ್ಯದಿಂದ ಇದ್ದಾರೆ ಎಂದರು.

ಜಯದೇವ ಹೃದ್ರೋಗ ಆಸ್ಪತ್ರೆ ನಿರ್ದೇಶಕ ಡಾ.ಸಿ.ಎನ್.ಮಂಜುನಾಥ, ಡಾ.ಅರುಣ ಕುಮಾರ, ಡಾ.ಹೊಸಮನಿ, ಡಾ.ಗುರುಶಾಂತಪ್ಪ, ಡಾ.ರಾಜಶೇಖರ ದ್ಯಾಬೇರಿ, ಡಾ.ನಾಗೇಂದ್ರ ಹಿರೇಗೌಡರ, ಡಾ. ರಾಜಕುಮಾರ, ಡಾ.ಉಮೇಶ ಬೀಳಗಿ, ಡಾ.ಸುರೇಶ, ಡಾ. ನಿತೀನ್ ಕಡಕೋಳ, ಡಾ.ಬಳಿಗಾರ, ಡಾ. ಪ್ರಶಾಂತ ಹಾಗೂ ಅನಸ್ತೇಸಿಯಾ ತಂಡದ ಡಾ.ಮಾಧುರಿ, ಡಾ.ಆಲೂರ, ಡಾ.ವಿದ್ಯಾ ಹಾಗೂ ವಿದ್ಯಾರ್ಥಿಗಳ ತಂಡ ಈ ಸಾಧನೆ ಮಾಡಿದೆ. ಡಾ. ಅರವಿಂದ, ಡಾ. ರಾಜಶೇಖರ ಹಾಗೂ ಶುಶ್ರೂಷಕಿ ಕಮಲಾ ಅವರು ತುರ್ತು ನಿಗಾ ಘಟಕದಲ್ಲಿ ಉತ್ತಮವಾಗಿ ರೋಗಿಗಳನ್ನು ನೋಡಿಕೊಂಡಿದ್ದರು. ನರ್ಸ್ ಗಳು ಉತ್ತಮ ರೀತಿಯಲ್ಲಿ ಸ್ಪಂದಿಸಿದರು ಎಂದು ಕೃತಜ್ಞತೆ ತಿಳಿಸಿದರು.

ಸುದ್ದಿಗೋಷ್ಠಿಯಲ್ಲಿ ಡಾ.ಉಲ್ಲಾಸ ಬೀಳಗಿ, ಡಾ.ರಾಜಶೇಖರ ದ್ಯಾಬೇರಿ, ಡಾ.ನಾಗೇಂದ್ರ ಹಿರೇಗೌಡರ, ಡಾ.ಮಾಧುರಿ, ಡಾ.ವಿದ್ಯಾ, ಡಾ.ಹೊಸಮನಿ, ಶುಶ್ರೂಷಕರಾದ ವಿಜಯ, ಅನಿಲ, ಸುನೀಲ, ಹಾಲೇಶ, ಸತೀಶ್, ಶಿಲ್ಪಾ, ಅನಿತಾ, ಸಹನಾ ಹಾಗೂ ಇತರ ತಜ್ಞವೈದ್ಯರು ಉಪಸ್ಥಿತರಿದ್ದರು.
(ಒನ್ಇಂಡಿಯಾ ಸುದ್ದಿ)












Click it and Unblock the Notifications