ಹು-ಧಾ ಪೊಲೀಸರ ಪಾಡು; ರಜವೂ ಇಲ್ಲ, ಭತ್ಯೆಯೂ ಕೊಡಲ್ಲ
ಹುಬ್ಬಳ್ಳಿ:'ದೇವರು ಕೊಟ್ಟರೂ ಪೂಜಾರಿ ವರ ಕೊಡಲಿಲ್ಲ' ಎಂಬ ಗಾದೆ ಮಾತನ್ನು ಕೇಳಿರಬಹುದು. ಹುಬ್ಬಳ್ಳಿ-ಧಾರವಾಡ ಪೊಲೀಸ್ ಕಮಿಷನರೇಟ್ ನ ವಿಷಯದಲ್ಲಿ ಇದು ಅಕ್ಷರಶಃ ನಿಜವಾಗಿದೆ. ಹೌದು, ಪೊಲೀಸರ ಪ್ರತಿಭಟನೆಗೆ ಮಣಿದ ರಾಜ್ಯ ಸರಕಾರ ಕೆಲವೊಂದು ಬೇಡಿಕೆಗಳನ್ನು ಈಡೇರಿಸಿತು.
ವಾರದ ರಜೆ ಹಾಗೂ ವಿಶೇಷ ಭತ್ಯೆ ಸೇರಿದಂತೆ ಹಲವು ಬೇಡಿಕೆಗಳಿಗೆ ಸ್ಪಂದಿಸಿದ ಗೃಹ ಇಲಾಖೆ ಆದೇಶ ಹೊರಡಿಸಿದೆ.

ಗೃಹ ಇಲಾಖೆ ಇಷ್ಟೆಲ್ಲಾ ನೀಡಿದರೂ ಇವುಗಳನ್ನು ಅನುಭವಿಸುವ ಭಾಗ್ಯ ಮಾತ್ರ ಹುಬ್ಬಳ್ಳಿ-ಧಾರವಾಡ ಕಮಿಷನರೇಟ್ ನಲ್ಲಿ ಕೆಲಸ ಮಾಡುವ ಪೊಲೀಸರಿಗೆ ಇಲ್ಲದಾಗಿದೆ. ಜೀವನದ ಬಹುತೇಕ ಸಮಯವನ್ನು ಕರ್ತವ್ಯದಲ್ಲಿಯೇ ಕಳೆಯುವ ಪೊಲೀಸರಿಗೆ ಸರಕಾರ ನೀಡಿದ ಕನಿಷ್ಠ ಸೌಲಭ್ಯಗಳನ್ನು ಒದಗಿಸುವ ಸೌಜನ್ಯವೂ ಇಲ್ಲಿ ಇಲ್ಲ.
ಗದಗ, ಹಾವೇರಿ, ಕಾರವಾರ ಸೇರಿ ಬಹುತೇಕ ಜಿಲ್ಲೆಗಳಲ್ಲಿ ಪೊಲೀಸ್ ಕಾನ್ ಸ್ಟೇಬಲ್ ಗಳಿಗೆ ವಾರದ ರಜಾ ಕೊಡಲಾಗುತ್ತಿದೆ. ಆದರೆ ಈ ವ್ಯವಸ್ಥೆ ಹುಬ್ಬಳ್ಳಿ-ಧಾರವಾಡದಲ್ಲಿ ಕೆಲಸ ಮಾಡುವ ಪೊಲೀಸರಿಗೆ ಇಲ್ಲ. ವಾರದ ರಜಾ ಕೊಡದಿದ್ದರೆ ಹೋಗಲಿ, ಇದಕ್ಕೆ ಪರ್ಯಾಯವಾಗಿ ಭತ್ಯೆಯನಾದರೂ ಕೊಡಬೇಕಲ್ಲವೆ ಎಂಬುದು ಸಿಬ್ಬಂದಿ ಪ್ರಶ್ನೆ.
ರಜಾ ಅವಧಿಯಲ್ಲಿ ಕೆಲಸ ಮಾಡಿದರೆ ಇನ್ನೂರು ರುಪಾಯಿ ಭತ್ಯೆ ಕೊಡಬೇಕು. ಆದರೆ ಎಂಟು ತಿಂಗಳಿಂದ ಹುಬ್ಬಳ್ಳಿ-ಧಾರವಾಡಗಳಲ್ಲಿ ಕಾರ್ಯ ನಿರ್ವಹಿಸುತ್ತಿರುವ ಇಲಾಖೆಯ ಸಿಬ್ಬಂದಿಗೆ ಭತ್ಯೆ ಭಾಗ್ಯ ಕೂಡ ಇಲ್ಲ.
ಈ ಕುರಿತು ಹುಬ್ಬಳ್ಳಿ-ಧಾರವಾಡ ಪೊಲೀಸ್ ಕಮಿಷನರ್ ಪಾಂಡುರಂಗ ರಾಣೆ ಅವರನ್ನು ಪ್ರಶ್ನಿಸಿದರೆ, ಇಲಾಖೆಯು 24X7 ಕೆಲಸ ಮಾಡಬೇಕು. ಅಲ್ಲದೆ ಅವಳಿ ನಗರಗಳು ಅತ್ಯಂತ ಸೂಕ್ಷ್ಮ ಪ್ರದೇಶಗಳು ಆದ್ದರಿಂದ ಹೆಚ್ಚಿನ ನಿಗಾ ಇಡಬೇಕಾಗುತ್ತದೆ. ಕಮಿಷನರೇಟ್ ಗೆ ಶೀಘ್ರದಲ್ಲಿಯೇ ನಾನೂರು ಸಿಬ್ಬಂದಿ ಹೊಸದಾಗಿ ಕರ್ತವ್ಯಕ್ಕೆ ಹಾಜರಾಗಲಿದ್ದು, ಆಗ ಬೇಡಿಕೆ ಈಡೇರಿಸಲಾಗುವುದು ಎನ್ನುತ್ತಾರೆ.












Click it and Unblock the Notifications