ಮಠಗಳು ರಾಜಕೀಯ ಕೇಂದ್ರಗಳಾಗುತ್ತಿವೆ: ಹೊರಟ್ಟಿ
ಹುಬ್ಬಳ್ಳಿ, ಜನವರಿ 01: ವಿಜಯಪುರ ಜಿಲ್ಲೆಯ ಸಿದ್ದೇಶ್ವರ ಶ್ರೀಗಳು, ತುಮಕೂರಿನ ಸಿದ್ದಗಂಗಾ ಶ್ರೀಗಳನ್ನು ಬಿಟ್ಟರೆ ಮಿಕ್ಕೆಲ್ಲಾ ಸ್ವಾಮಿಗಳು ರಾಜಕಾರಣಿಗಳಿಂದ ಸಹಾಯ ಪಡೆಯುತ್ತಾರೆ, ಹಾಗೂ ಅವರಿಗೆ ಸಹಾಯ ಮಾಡುತ್ತಾರೆ ಎಂದು ವಿಧಾನಪರಿಷತ್ ಸದಸ್ಯ ಬಸವರಾಜ ಹೊರಟ್ಟಿ ಅವರು ಹೇಳಿದರು.
ವೀರಶೈವ-ಲಿಂಗಾಯತ ವಿವಾದ: ಚರ್ಚೆಗೆ ಮತ್ತೊಮ್ಮೆ ಆಹ್ವಾನ ಕೊಟ್ಟ ಹೊರಟ್ಟಿ
ಹುಬ್ಬಳ್ಳಿಯಲ್ಲಿ ಮಾತನಾಡಿದ ಅವರು ರಾಜ್ಯದಲ್ಲಿ ಮಠಗಳು ರಾಜಕೀಯ ಕೇಂದ್ರಗಳೇ ಆಗಿವೆ, ಮಠಗಳು ರಾಜಕೀಯದಿಂದ ದೂರವಿಲ್ಲ ಎಂದರು.
ಎಲ್ಲಾ ಸ್ವಾಮಿಗಳು ಧರ್ಮದಲ್ಲಿ ರಾಜಕೀಯ ಬರಬಾರದು ಎನ್ನುತ್ತಾರೆ ಆದರೆ ಇದು ಸಾಧ್ಯವಿಲ್ಲ ಅದು ತೋರಿಕೆಯ ಮಾತಷ್ಟೆ, ರಾಜಕಾರಣಿಗಳು, ಮಠಾಧೀಶರು ಪರಸ್ಪರ ಅವಲಂಬಿತರಾಗಿದ್ದಾರೆ, ಮುಂಚೆ ಯಡಿಯೂರಪ್ಪ ಗೆಲ್ಲಲಿ ಎಂದು ಅನೇಕ ಸ್ವಾಮಿಗಳು ಹೇಳಿದ್ದರು, ಕೆಲವು ಸ್ವಾಮಿಗಳು ರಾಜಕಾರಣಿಗಳ ಪರ ಬಹಿರಂಗ ಪ್ರಚಾರವನ್ನೂ ಮಾಡಿದ್ದರು ಎಂದರು.
'ನನ್ನ 38 ವರ್ಷದ ಹೋರಾಟದಲ್ಲಿ ಎಂದೂ ಜಾತಿ ರಾಜಕೀಯ ಮಾಡಿಲ್ಲ ಎಂದ ಅವರು ನನ್ನ ಸಮಾಜದ ಜನರ ಕಲ್ಯಾಣಕ್ಕಾಗಿ ಲಿಂಗಾಯತ ಪ್ರಯತ್ಯೇಕ ಧರ್ಮ ಹೋರಾಟದಲ್ಲಿ ಇರುವೆ ಎಂದರು.
ನಮ್ಮ ಹೋರಾಟದಲ್ಲಿ ಅನೇಕ ಬಿಜೆಪಿ ಶಾಸಕರು ಇದ್ದಾರೆ, ಅವರೇ ಸಮಾವೇಶಕ್ಕೆ ವಾಹನ, ಹಣದ ಸಹಾಯ ನೀಡಿದ್ದಾರೆ ಆದರೆ ಪಕ್ಷದ ಕಾರಣ ಅವರು ಮುಂದೆ ಬರುತ್ತಿಲ್ಲ ಅಷ್ಟೆ ಎಂದರು.
ಬಿಜೆಪಿ ಶಾಸಕ ಉಮೇಶ್ ಕತ್ತಿ ಅವರ ಬಗ್ಗೆ ಮಾತನಾಡಿದ ಅವರು ಉಮೇಶ್ ಕತ್ತಿ ಅವರೇ ನನನ್ನು ಹೋರಾಟಕ್ಕೆ ಹುರಿದುಂಬಿಸಿದ್ದಾರೆ. 'ನನ್ನ ಕೈ ಕಟ್ಟಿ ಹಾಕಿದ್ದಾರೆ ನೀವಾದರೂ ಹೋರಾಟ ಮಾಡಿ ನ್ಯಾಯ ಕೊಡಿಸಿ, ಎಂದು ಉಮೇಶ್ ಕತ್ತಿ ಹೇಳಿದ್ದಾರೆ' ಎಂದು ಬಸವರಾಜ ಹೊರಟ್ಟಿ ಹೇಳಿದರು.