ಪ್ರತಿಷ್ಠಿತ ಕಂಪನಿಗಳಲ್ಲಿ ಖಾಯಂ ಹುದ್ದೆ ಕೊಡಿಸುವುದಾಗಿ ವಂಚನೆ
ಹುಬ್ಬಳ್ಳಿ, ನವೆಂಬರ್6 : ಮೋಸ ಹೋಗುವವರು ಎಲ್ಲಿಯವರೆಗೆ ಇರುತ್ತಾರೋ ಅಲ್ಲಿಯವರೆಗೆ ಮೋಸ ಮಾಡುವವರು ಇರುತ್ತಾರೆ. ಎಷ್ಟೇ ಜಾಗೃತಿ ಮೂಡಿಸಿದರು ಬಡತನ ನಿರುದ್ಯೋಗ ಯುವಕರನ್ನು ದಾರಿ ತಪ್ಪಿಸುತ್ತಿದೆ. ನೀರುದ್ಯೋಗದಿಂದ ಪರದಾಡುತ್ತಿರುವ ಇಂದಿನ ಯುವಕರ ಯುವತಿಯರು ವಂಚಕರ ಮಾತುಗಳಿಗೆ ಮರುಳಾಗಿ ಮೋಸ ಹೋಗುತ್ತಿದ್ದಾರೆ.
ಅದೇ ರೀತಿ ಹುಬ್ಬಳ್ಳಿಯಲ್ಲಿ ಕೆಲಸ ಕೊಡಿಸುವುದಾಗಿ ನೂರಾರು ಯುವಕ ಯುವತಿಯರಿಗೆ ದುಷ್ಕರ್ಮಿಗಳು ಮಕ್ಮಲ್ ಟೋಪಿ ಹಾಕಿದ್ದಾರೆ. ಪರ್ಮನೆಂಟ್ ಜಾಬ್ ಕೊಡಿಸುವುದಾಗಿ ನಂಬಿಸಿ ಲಕ್ಷಾಂತರ ರೂಪಾಯಿಗಳನ್ನು ಪಡೆದು ವಂಚಿಸಿದ್ದಾರೆ.
ಇಎಮ್ಡಬ್ಲ್ಯೂಐ (EMWI) ಹಾಗೂ ಎನ್ಟಿಟಿಎಫ್ (NTTF) ಸೇರಿದಂತೆ ಕೆಲವು ಕಂಪನಿಗಳ ಹೆಸರು ಹೇಳಿ ನಿರುದ್ಯೋಗಿ ಯುವತಿ ಯುವಕರನ್ನು ಟಾರ್ಗೆಟ್ ಮಾಡಿ ಅವರಿಗೆ ಉತ್ತಮ ಜಾಬ್ ಕೊಡಿಸುವ ಆಸೆ ತೋರಿಸಿ ಮೋಸ ಮಾಡಿದ್ದಾರೆ.

ಮೋಸ ಹೋದರವರ ಪರ ನಿಂತ ಕರ್ನಾಟಕ ರಕ್ಷಣಾ ಸೇನೆ
ನಿರುದ್ಯೋಗ ಯುವಕ ಯುವತಿಯರಿಗೆ ಪರ್ಮನೆಂಟ್ ಉದ್ಯೋಗ ನೀಡುವುದಾಗಿ ಅವರನ್ನು ನಂಬಿಸಿ ಲಕ್ಷಾಂತರ ಹಣವನ್ನು ವಸೂಲಿ ಮಾಡಿದ್ದಾರೆ. ಇದು ಸುಳ್ಳು ಅನ್ನೊದು ಗೊತ್ತಾಗುತ್ತಿದ್ದಂತೆ ಮೋಸ ಹೋದ ಯುವಕ ಯುವತಿಯರು ನ್ಯಾಯಕ್ಕಾಗಿ ಆಗ್ರಹಿಸಿ ಪೊಲೀಸರ ಮೊರೆ ಹೋಗಿದ್ದಾರೆ. ಮೋಸಕ್ಕೆ ಬಲಿಯಾಗಿರುವ ನೀರುದ್ಯೋಗಿ ಯುವಕ ಯುವತಿಯರ ಪರ ನಿಂತಿರುವ ಸಮಗ್ರ ಕರ್ನಾಟಕ ರಕ್ಷಣಾ ಸೇನೆ ಮೋಸಗಾರರು ಹಾಗೂ ಆಯಾ ಕಂಪನಿಗಳ ವಿರುದ್ಧ ಕೂಡಲೇ ಕ್ರಮ ಕೈಗೊಳ್ಳಬೇಕು ಎಂದು ಆಗ್ರಹಿಸುತ್ತಿದ್ದಾರೆ.

ಕೆಲಸ ಸಿಗುವ ಆಸೆಯಲ್ಲಿ ಮೋಸ ಹೋದ ಯುವಕ ಹಾಗೂ ಯುವತಿಯರು
ಈ ವಂಚಕರು ಅನೇಕ ಶಾಲಾ ಕಾಲೇಜು ಹಾಗೂ ವಿವಿಧ ಸಂಸ್ಥೆಗಳಲ್ಲಿನ ಯುವಕ ಹಾಗೂ ಯುವತಿಯರನ್ನು ಟಾರ್ಗೆಟ್ ಮಾಡಿದ್ದಾರೆ. ಅದರಂತೆ ಅವರ ಸ್ನೇಹವನ್ನು ಸಂಪಾದಿಸಿ ಅವರಿಗೆ ಉತ್ತಮವಾದ ಉದ್ಯೋಗ ನೀಡುವ ಆಸೆಯನ್ನು ಹುಟ್ಟಿಸಿದ್ದಾರೆ. ಮೊದಲೇ ನಿರುದ್ಯೋಗ ಹಾಗೂ ಬಡತನದಿಂದ ಪರದಾಡುತ್ತಿದ್ದ ನಗರದ ಯುವಕ ಯುವತಿಯರು ಇದು ವಂಚನೆ ಎಂದು ಅರಿಯದೆ ಉತ್ತಮವಾದ ಕೆಲಸ ಸಿಗುತ್ತದೆ ಎಂದು ನಂಬಿ ನಮ್ಮ ಜೀವನ ಹಸಿರಾಗುತ್ತದೆ ಎಂದು ಹಲವು ಕನಸುಗಳನ್ನು ಕಂಡು ಮೋಸ ಹೋಗಿದ್ದಾರೆ.

4 ದಿನಗಳ ಕಾಲ ವ್ಯರ್ಥ ತರಬೇತಿ
ಇಎಂಡಬ್ಲ್ಯುಐ, ಎನ್ಟಿಟಿಎಫ್ ಧಾರವಾಡ, ಬಾಶೆಲ್ ಮಿಶನ್ ಆಂಗ್ಲ ಮಾಧ್ಯಮ ಶಾಲೆಯ ಬಳಿ ಕಂಪನಿಯವರು ಶಾಶ್ವತವಾಗಿ ಉದ್ಯೋಗ ಕೊಡಿಸುತ್ತೇವೆ ಎಂದು ಪ್ರತಿ ವಿದ್ಯಾರ್ಥಿಗಳ ಕಡೆಯಿಂದ ಪ್ರಥಮ ಹಂತದಲ್ಲಿ 2,500 ರೂಪಾಯಿ ಪಡೆದು 4 ದಿನಗಳ ಕಾಲ ತರಬೇತಿ ನೀಡಿ ಬಳಿಕ 36,000 ರೂಪಾಯಿ ಪಡೆದು ನೀವು ಮೂರು ಜನರಿಗೆ ಉದ್ಯೋಗದಲ್ಲಿ ಸೇರಿಸಿಕೊಂಡರೆ ನಿಮಗೆ ಇಎಂಡಬ್ಲ್ಯುಐ, ಎನ್ಟಿಟಿಎಫ್ನಲ್ಲಿ ಖಾಯಂ ಹುದ್ದೆ ನೀಡುವುದಾಗಿ ಹೇಳಿ ಯುವಕ ಹಾಗೂ ಯುವತಿಯರನ್ನು ವಂಚಿಸಿದ್ದಾರೆ.

ಯುವಕ-ಯುವತಿಯರ ಹಣ ಮರಳಿ ಕೊಡಿಸುವಂತೆ ಆಗ್ರಹ
ಸಾಕಷ್ಟು ಹಣ ವಸೂಲಿ ಮಾಡಿ ಉದ್ಯೋಗ ನೀಡದೇ ಮೋಸ ಮಾಡಿರುವ ವಂಚಕರ ವಿರುದ್ಧ ಕ್ರಮ ಕೈಗೊಳ್ಳುವಂತೆ ಸಮಗ್ರ ಕರ್ನಾಟಕ ರಕ್ಷಣಾ ಸೇನೆ ಆಗ್ರಹಿಸಿದೆ. ಅಲ್ಲದೇ ಈ ವಂಚನೆ ಕುರಿತು ಹುಬ್ಬಳ್ಳಿ ಧಾರವಾಡ ಪೊಲೀಸ್ ಕಮಿಷನರ್ ಅವರಿಗೆ ದೂರು ಸಹ ನೀಡಲಾಗಿದೆ. ಈ ಕೂಡಲೇ ಅನ್ಯಾಯಕ್ಕೆ ಒಳಗಾದ ಯುವಕ ಯುವತಿಯರಿಗೆ ಹಣ ಮರಳಿಸಬೇಕು. ಇಲ್ಲದಿದ್ದರೆ ಉಗ್ರ ಸ್ವರೂಪದ ಹೋರಾಟ ಮಾಡಲಾವುದು ಎಂದು ಸಮಗ್ರ ಕರ್ನಾಟಕ ರಕ್ಷಣಾ ಸೇನೆ ಎಚ್ಚರಿಕೆ ನೀಡಿದೆ. ಮೊದಲೇ ನೀರುದ್ಯೋಗದಿಂದ ಪರದಾಡುತ್ತಿದ್ದ ಹುಬ್ಬಳ್ಳಿಯ ಯುವಕ ಯುವತಿಯರು ವಂಚಕರ ಮಾತು ನಂಬಿ ಹಣ ಕಳೆದುಕೊಂಡಿದ್ದಾರೆ. ಒಂದು ಕಡೆ ಕೊಟ್ಟ ಹಣವು ಇಲ್ಲ, ಉದ್ಯೋಗವು ಇಲ್ಲದೆ ಪರದಾಡುತ್ತಿದ್ದಾರೆ.












Click it and Unblock the Notifications