ಈ ಜನ್ಮದಲ್ಲಿ ಸಿದ್ದು ಸಿಎಂ ಆಗೊಲ್ಲ, ರಾಹುಲ್ ಗಾಂಧಿ ಮದುವೆ ಆಗೊಲ್ಲ: ಈಶ್ವರಪ್ಪ ಲೇವಡಿ
Recommended Video
ಹುಬ್ಬಳ್ಳಿ, ಮೇ 9: ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರದು ತಿರುಕನ ಕನಸು. ಅವರು ಬಂಗಾರದ ತಟ್ಟೆ ಮತ್ತು ಬಂಗಾರದ ಕುರ್ಚಿ ಬಗ್ಗೆ ಕನಸು ಕಾಣುತ್ತಲೇ ಇದ್ದಾರೆ ಎಂದು ಬಿಜೆಪಿ ಮುಖಂಡ ಕೆ.ಎಸ್. ಈಶ್ವರಪ್ಪ ಲೇವಡಿ ಮಾಡಿದರು.
ಕುಂದಗೋಳ ತಾಲ್ಲೂಕಿನ ರಟ್ಟಿಗೇರಿ ಗ್ರಾಮದಲ್ಲಿ ಚುನಾವಣಾ ಪ್ರಚಾರ ನಡೆಸಿದ ವೇಳೆ ಅವರು, ಭಿಕ್ಷಕನೊಬ್ಬನ ಕಥೆ ಹೇಳಿದರು. ಅವರಂತೆಯೇ ಸಿದ್ದರಾಮಯ್ಯ ಕನಸು ಕಾಣುತ್ತಿದ್ದಾರೆ ಎಂದು ವ್ಯಂಗ್ಯವಾಡಿದರು.
ಈ ಜನ್ಮದಲ್ಲಿ ಸಿದ್ದರಾಮಯ್ಯ ಮತ್ತೆ ಮುಖ್ಯಮಂತ್ರಿ ಆಗೊಲ್ಲ, ರಾಹುಲ್ ಗಾಂಧಿ ಮದುವೆಯಾಗುವುದಿಲ್ಲ ಎಂದು ಈಶ್ವರಪ್ಪ ಗೇಲಿ ಮಾಡಿದರು.

ಸಿದ್ದರಾಮಯ್ಯ ಮತ್ತೆ ಸಿಎಂ ಆಗಬೇಕೆಂದು ಮೂರು ನಾಲ್ಕು ನಾಯಕರ ಬಾಯಿಂದ ಹೇಳಿಕೆ ಕೊಡಿಸುತ್ತಿದ್ದಾರೆ. ಈ ರೀತಿ ಎಲ್ಲ ಹೇಳಿಕೆ ಕೊಡಬೇಡಿ ಎಂದು ಕೆಪಿಸಿಸಿ ಅಧ್ಯಕ್ಷ ದಿನೇಶ್ ಗುಂಡೂರಾವ್ ಮನವಿ ಮಾಡುತ್ತಿದ್ದಾರೆ. ಡಿಸಿಎಂ ಬಗ್ಗೆ ಚರ್ಚೆ ಮಾಡಬೇಡಿ ಎಂದು ಅತ್ತ ಪರಮೇಶ್ವರ್ ಹೇಳುತ್ತಿದ್ದಾರೆ. ಉಪ ಚುನಾವಣೆಯ ಬಳಿಕ ಕಾಂಗ್ರೆಸ್ನ ಒಳಬೇಗುದಿ ಸ್ಫೋಟವಾಗುತ್ತದೆ. ಫಲಿತಾಂಶ ಹೊರಬಿದ್ದ ಬಳಿಕ ಬಿಜೆಪಿ ಅಧಿಕಾರಕ್ಕೆ ಏರಲಿದೆ ಎಂದರು.
ಕಾಂಗ್ರೆಸ್ ಮತ್ತು ಜೆಡಿಎಸ್ ಸೇರಿ ಕುತಂತ್ರ ರಾಜಕಾರಣ ಮಾಡುತ್ತಿವೆ. ಬಿಜೆಪಿ ಅಧಿಕಾರಕ್ಕೆ ಬಂದರೆ ಕುತಂತ್ರ ರಾಜಕಾರಣ ಮಾಡುವುದಿಲ್ಲ. ಬಿಜೆಪಿಯದ್ದೇನಿದ್ದರೂ ನೇರ ರಾಜಕಾರಣ ಎಂದು ಹೇಳಿದರು.
ಸಿದ್ದರಾಮಯ್ಯ ಮತ್ತೆ ಮುಖ್ಯಮಂತ್ರಿ ಆಗಬೇಕೆಂಬ ಕೂಗು ಕೇಳಿ ಎಚ್ ಡಿ ಕುಮಾರಸ್ವಾಮಿ ಗರಂ ಆಗಿದ್ದಾರೆ. ಪರಸ್ಪರ ಕಿತ್ತಾಟ ನಡೆಸುತ್ತಿದ್ದ ಪಕ್ಷಗಳು ಈ ಒಟ್ಟಿಗೆ ಸೇರಿ ಸರ್ಕಾರ ರಚಿಸಿವೆ. ಇದರ ಆಡಳಿತವನ್ನೇನೂ ಜನರು ಮೆಚ್ಚಿಕೊಳ್ಳುತ್ತಿಲ್ಲ.
ಇಲ್ಲಿ ಒಳ ಒಪ್ಪಂದ ನಡೆದಿದ್ದು, ಅದಕ್ಕೂ ಸಿದ್ದರಾಮಯ್ಯ ಅವರಿಗೂ ಏನೋ ಸಂಬಂಧವಿದೆ. ಅವರು ಒಳ ಒಪ್ಪಂದದಿಂದಲೇ ಪರಮೇಶ್ವರ್ ಅವರನ್ನು ಸೋಲಿಸಿದ್ದರು. ಅದೇ ರೀತಿ ಪರಮೇಶ್ವರ್ ಮತ್ತು ದೇವೇಗೌಡ ಒಳ ಒಪ್ಪಂದ ಮಾಡಿಕೊಂಡು ಚಾಮುಂಡೇಶ್ವರಿಯಲ್ಲಿ ಸಿದ್ದರಾಮಯ್ಯ ಅವರನ್ನು ಸೋಲಿಸಿದರು ಎಂದು ಆರೋಪಿಸಿದರು.












Click it and Unblock the Notifications