Shiva Rajkumar: ಪ್ರಶಾಂತ್ ಸಂಬರ್ಗಿ ಟೀಕೆ ಹಾಗೂ ಟ್ರೋಲ್ಗೆ ನಟ ಶಿವಣ್ಣ ಪ್ರತಿಕ್ರಿಯಿಸಿದ್ದು ಹೀಗೆ
ಹುಬ್ಬಳ್ಳಿ, ಮೇ, 06: ರಾಜ್ಯ ವಿಧಾನಸಭೆ ಚುನವಣೆ ಹಿನ್ನೆಲೆ ಇತ್ತೀಚೆಗಷ್ಟೇ ನಟ ಶಿವರಾಜ್ಕುಮಾರ್ ವರುಣಾದಲ್ಲಿ ಮಾಜಿ ಸಿಎಂ ಸಿದ್ದರಾಮಯ್ಯ ಪರ ಪ್ರಚಾರ ನಡೆಸಿದ್ದು, ಇದನ್ನೇ ಕೆಲ ಕಿಡಿಗೇಡಿಗಳು ಟ್ರೋಲ್ ಮಾಡಿದ್ದರು. ಇದೀಗ ಟ್ರೋಲ್ ವಿಚಾರಕ್ಕೆ ಹುಬ್ಬಳ್ಳಿಯಲ್ಲಿ ಪ್ರತಿಕ್ರಿಯಿಸಿದ ಶಿವಣ್ಣ, ಟ್ರೋಲ್ ಮಾಡುವುದು ಸರಿನಾ? ಯಾತಕ್ಕಾಗಿ ಟ್ರೋಲ್ ಮಾಡುತ್ತಿದ್ದಾರೆ, ಇದರಿಂದ ಏನು ಪ್ರಯೋಜನ ನಿಮಗೆ ಎಂದು ಪ್ರಶ್ನಿಸುವ ಮೂಲಕ ಆಕ್ರೋಶ ವ್ಯಕ್ತಪಡಿಸಿದರು.
ಹಾಗೆಯೇ ಪ್ರಶಾಂತ್ ಸಂಬರ್ಗಿ ಟೀಕೆಗೂ ಪ್ರತಿಕ್ರಿಯಿಸಿದ ಶಿವಣ್ಣ, ಹಾಗೆ ಮಾತನಾಡುವುದು ಸರಿಯಲ್ಲ. ಆ ಹೇಳಿಕೆಯನ್ನು ವಾಪಸ್ ತಗೆದುಕೊಳ್ಳಬೇಕು. ನಮ್ಮ ಹತ್ತಿರ ಹಣನೇ ಇಲ್ವಾ. ನಾನು ಹಣ ತೆಗೆದುಕೊಂಡು ಇಲ್ಲಿ ವ್ಯಾಪರಕ್ಕೆ ಬಂದಿಲ್ಲ. ಹೃದಯದಿಂದ ಮನುಷ್ಯನಿಗಾಗಿ ಬಂದಿದ್ದೇನೆ. ಬದಲಾಗಿ ಯಾರನ್ನೂ ಟೀಕೆ ಮಾಡುವುದಕ್ಕೂ ನಾನು ಇಲ್ಲಿಗೆ ಬಂದಿಲ್ಲ ಎಂದರು.

ಟ್ರೋಲ್ ವಿಚಾರವಾಗಿ ಪ್ರತಿಕ್ರಿಯಿಸಿ, ನೀವೆ ಮನಸ್ಸಿನಿಂದ ನೋಡಿ ಟ್ರೋಲ್ ಮಾಡುವುದು ಸರಿನಾ? ಇಲ್ಲಿರುವವರು ಎಲ್ಲರೂ ಟ್ರೋಲ್ ಮಾಡುವುದಕ್ಕೆ ಬಂದಿದ್ದಾರಾ? ಇಲ್ಲಿ ಬಂದಿರುವವರು ಎಲ್ಲರೂ ಕಾಂಗ್ರೆಸ್ನವರಾ? ಇಲ್ಲಿ ಎಲ್ಲ ಪಕ್ಷದವರು ಇರುತ್ತಾರೆ. ಇದನ್ನು ಅರ್ಥ ಮಾಡಿಕೊಳ್ಳಬೇಕು. ಎಷ್ಟು ದಿನ ಅಂತಾ ಟ್ರೋಲ್ ಮಾಡುತ್ತಾರೆ. ಮನುಷ್ಯರಾದವರು ಮೈಂಡ್ ಇಂದ ಯೋಚನೆ ಮಾಡಬಾರದು, ಹೃದಯದಿಂದ ಯೋಚನೆ ಮಾಡಬೇಕು ಎಂದು ಬುದ್ಧಿವಾದ ಹೇಳಿದರು.
ಸಾವಿರ ಜನ ಹೇಳುತ್ತಾರೆ ಅಂತಾ ಟ್ರೋಲ್ ಮಾಡುವವರನ್ನು ಫಾಲೋ ಮಾಡಬಾರದು. ಇನ್ನು ಅಣ್ಣವ್ರು ಯಾವ ಪಕ್ಷದಲ್ಲಿ ಗುರುತಿಸಿಕೊಂಡಿಲ್ಲ ಅನ್ನುವ ಮಾಧ್ಯಮದವರ ಹೇಳಿಕೆಗೆ ಶಿವಣ್ಣ ಗರಂ ಆಗಿ ಪದೇ ಪದೇ ಅದೇ ಪ್ರಶ್ನೆ ಯಾಕೆ ಎಂದು ಗುಡುಗಿದರು.
ಸೋಮಣ್ಣ ಜೊತೆ ಸುದೀಪ್ ರೋಡ್ ಶೋ
ಚಿತ್ರನಟ ಸುದೀಪ್ ಶುಕ್ರವಾರ (ಮೇ 05) ಚಾಮರಾಜನಗರದ ನಾಲ್ಕು ಕ್ಷೇತ್ರಗಳಲ್ಲಿಯೂ ರೋಡ್ ಶೋ ನಡೆಸಿ ಬಿಜೆಪಿ ಅಭ್ಯರ್ಥಿಗಳ ಪರ ಮತಯಾಚನೆ ಮಾಡಿದ್ದರು.
ಮೈಸೂರಿನ ಮೂಲಕ ಮೊದಲಿಗೆ ಗುಂಡ್ಲುಪೇಟೆಗೆ ಆಗಮಿಸಿದ ನಟ ಕಿಚ್ಚ ಸುದೀಪ್ ಅವರನ್ನು ಸಹಸ್ರಾರು ಅಭಿಮಾನಿಗಳು ಅದ್ಧೂರಿಯಾಗಿ ಸ್ವಾಗತಿಸಿದರು. 15 ನಿಮಿಷ ರೋಡ್ ಶೋ ನಡೆಸಿದ ನಟ ಸುದೀಪ್, ಗೆದ್ದೇ ಗೆಲ್ಲೆವೆವು ಒಂದು ದಿನ- ಗೆಲ್ಲಲೇಬೇಕು ಒಳ್ಳೆತನ ಎಂದು ಮಾತು ಆರಂಭಿಸಿದರು. ನೆವರ್ ಗಿವ್ ಅಪ್ ರೀತಿ ಸತತವಾಗಿ ಸೋತರು ಗೆದ್ದ ನಿರಂಜನಕುಮಾರ್ ಅವರನ್ನು ಈ ಬಾರಿಯೂ ಗೆಲ್ಲಿಸಿಕೊಡಬೇಕು ಎಂದು ಅಭಿಮಾನಿಗಳಿಗೆ ಮನವಿ ಮಾಡಿದ್ದರು.
ಗುಂಡ್ಲುಪೇಟೆಯಲ್ಲಿ ನೆಚ್ಚಿನ ನಟನನ್ನು ಕಾಣಲು ಆಭಿಮಾನಿಗಳ ಸಮೂಹವೇ ನೆರೆದಿತ್ತು. ಈ ವೇಳೆ, ಪ್ರಚಾರ ವಾಹನ ಹತ್ತಿದ ಹೊಸೂರಿನ ಅಜಿತ್ ಕುಮಾರ್ ಎಂಬ ಅಭಿಮಾನಿ ಎದೆ ಮೇಲೆ ಸುದೀಪ್ ಆಟೋಗ್ರಾಫ್ ಹಾಕಿದರು. ಅಲ್ಲದೆ ಪುನೀತ್ರಾಜ್ಕುಮಾರ್ ಹಾಗೂ ಇನ್ನಿತರ ಅಭಿಮಾನಿಗಳು ತಂದಿದ್ದ ತಮ್ಮ ಫೋಟೋಗಳಿಗೆ ಹಸ್ತಾಕ್ಷಾರ ಹಾಕಿ ಗಮನ ಸೆಳೆದರು. ಹಾಗೆಯೆ ಕಿಚ್ಚ ಕಿಚ್ಚ ಎಂದು ಕೂಗುತ್ತಿದ್ದ ಅಭಿಮಾನಿಗೆ ತಮ್ಮ ವಾಟರ್ ಬಾಟೆಲ್ ಅನ್ನು ಉಡುಗೊರೆಯಾಗಿ ಎಸೆದರು.
ಗುಂಡ್ಲುಪೇಟೆ ಪ್ರಚಾರದ ಬಳಿಕ ಚಾಮರಾಜನಗರಕ್ಕೆ ಆಗಮಿಸಿದ ನಟ ಸುದೀಪ್, ಸಚಿವ ವಿ.ಸೋಮಣ್ಣ ಅವರ ಪರ ಪ್ರಚಾರ ನಡೆಸಿದರು. ಚಾಮರಾಜನಗರದ ಸಂತೇಮರಹಳ್ಳಿ ವೃತ್ತದಲ್ಲಿ ಸುದೀಪ್ ಅವರನ್ನು 5 ಸಾವಿರಕ್ಕೂ ಅಧಿಕ ಮಂದಿ ಅಭಿಮಾನಿಗಳ ಜಮಾಯಿಸಿ ಸ್ವಾಗತಿಸಿದರು. ಇನ್ನು ಪ್ರಚಾರದ ವೇಳೆ ಕಾರಿನ ಮೇಲೆ ನಿಂತಿದ್ದ ಸೋಮಣ್ಣ ಆಯತಪ್ಪಿ ಬೀಳುತ್ತಿದ್ದಾಗ ಸುದೀಪ್ ಕೈ ಹಿಡಿದೆತ್ತಿ ಅವಘಡ ತಪ್ಪಿಸಿದ್ದರು.
ಅಭಿಮಾನಿಯೋರ್ವ ಕಾರನ್ನು ಹತ್ತಿ ಸುದೀಪ್ ಮುಟ್ಟಲು ಪ್ರಯತ್ನಿಸಿದಾಗ ಈ ಅವಘಡ ಉಂಟಾಯಿತು. ಚಾಮರಾಜನಗರದ ಬಳಿಕ ಕೊಳ್ಳೇಗಾಲ ವಿಧಾನಸಭಾ ಕ್ಷೇತ್ರದ ಯಳಂದೂರು ಮತ್ತು ಹನೂರಿನಲ್ಲಿ ಬಿಜೆಪಿ ಅಭ್ಯರ್ಥಿಗಳ ಪರ ಮತಯಾಚನೆ ಮಾಡಿದರು. ಕಿಚ್ಚ ಹೋದಲೆಲ್ಲಾ ಕ್ರೇನ್ ಮೂಲಕ ಸೇಬು, ಹೂವಿನ ಹಾರಗಳನ್ನು ಹಾಕಿ ಅಭಿಮಾನಿಗಳು ಸಂಭ್ರಮಿಸಿದರು. ಮತ್ತೊಂದೆಡೆ ಸಹಸ್ರಾರು ಸಂಖ್ಯೆಯಲ್ಲಿ ಅಭಿಮಾನಿಗಳು ಸೇರಿದ್ದರಿಂದ ಅವರನ್ನು ನಿಯಂತ್ರಣಿಸಲು ಪೊಲೀಸರು ಲಾಠಿ ರುಚಿ ತೋರಿಸಬೇಕಾಯಿತು.












Click it and Unblock the Notifications