ಜಗದೀಶ್ ಶೆಟ್ಟರ್ ಲಿಂಗಾಯತರಿಗೆ ಅನ್ಯಾಯ ಮಾಡಿ ಈಗ ಮುಸ್ಲಿಂ ಟೋಪಿ ಹಾಕಿದ್ದಾರೆ: ಕೆ.ಎಸ್.ಈಶ್ವರಪ್ಪ ವಾಗ್ದಾಳಿ
ಹುಬ್ಬಳ್ಳಿ, ಏಪ್ರಿಲ್, 20: ಈ ಬಾರಿ ಭಾರತೀಯ ಸಂಸ್ಕೃತಿಗೆ ಒತ್ತು ಕೊಡುವವರು ಶಾಸಕರಾಗಿ ಬರುತ್ತಾರೆ. ದೇಶ ಉಳಿಸಲು, ಧರ್ಮ ಉಳಿಸುವುದು ಅವರ ಕನಸು. ಬಿಜೆಪಿಯಿಂದ ಅಂತಹ ಶಾಸಕರು ಗೆದ್ದು ಬರುತ್ತಾರೆ ಎಂದು ಕೆ.ಎಸ್.ಈಶ್ವರಪ್ಪ ಹುಬ್ಬಳ್ಳಿಯಲ್ಲಿ ಭವಿಷ್ಯ ನುಡಿದರು. ಹಾಗೆಯೇ ಜಗದೀಶ್ ಶೆಟ್ಟರ್ ಲಿಂಗಾಯತರಿಗೆ ಅನ್ಯಾಯ ಮಾಡಿ ಮುಸ್ಲಿಂ ಟೋಪಿ ಹಾಕಿದ್ದಾರೆ ಎಂದು ವಾಗ್ದಾಳಿ ನಡೆಸಿದರು.
ನಗರದಲ್ಲಿಂದು ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಅವರು, ಶಾಸಕರು ಅಭಿವೃದ್ಧಿ ಕಾರ್ಯ ಮಾಡಬೇಕು ನಿಜ. ಆದರೆ ಮತ್ತೊಂದು ಕಡೆ ಭಾರತೀಯ ಸಂಸ್ಕೃತಿಯನ್ನು ಉಳಸಬೇಕಿದೆ. ಇಂತಹದ್ದೊಂದು ದೊಡ್ಡ ತಂಡ ವಿಧಾನಸಭೆಗೆ ಬರುತ್ತದೆ. ಈ ಬಾರಿ ಬಿಜೆಪಿ ಯುವಕರಿಗೆ ಟಿಕೆಟ್ ಕೊಟ್ಟಿದೆ. ಸ್ವಾತಂತ್ರ್ಯ ಹೋರಾಟಗಾರ ಕನಸು ನನಸಾಗಲು, ಯುವಕರು ಈ ಬಾರಿ ಗೆಲ್ಲುತ್ತಾರೆ ಎಂದರು.

ಇನ್ನು ಹುಬ್ಬಳ್ಳಿ-ಧಾರವಾಡ ಸೆಂಟ್ರಲ್ ಕ್ಷೇತ್ರಕ್ಕೆ ಮಹೇಶ್ ಟೆಂಗಿನಕಾಯಿ ಅಭ್ಯರ್ಥಿ ಆಗಿರುವುದು ಸಂತೋಷವಾಗಿದೆ. ಅವರು ಗೆದ್ದು ಬರುತ್ತಾರೆ ಎನ್ನುವ ವಿಶ್ವಾಸ ಇದೆ. ಅವರಿಗೆ ಶುಭಕೋರಲು ನಾನು ಶಿವಮೊಗ್ಗದಿಂದ ಇಲ್ಲಿಗೆ ಬಂದಿದ್ದೇನೆ. ಇಡೀ ಕರ್ನಾಟಕದಲ್ಲಿ ಟೆಂಗಿನಕಾಯಿ ಆಯ್ಕೆ ಬಹಳ ಪ್ರಾಮುಖ್ಯ. ಶೆಟ್ಟರ್ ಪಕ್ಷ ಬಿಟ್ಟು ಹೋಗಿರುವುದು ದುರದೃಷ್ಟಕರ. ಪಾರ್ಟಿ ಬಿಟ್ಟಿರುವುದಕ್ಕೆ ಕಾರ್ಯಕರ್ತರ ಆಕ್ರೋಶವೂ ಇದೆ. ಹೀಗಾಗಿ ಟೆಂಗಿನಕಾಯಿ ಗೆಲ್ಲುತ್ತಾರೆ ಎಂದರು.
ಜಗದೀಶ್ ಶೆಟ್ಟರ್ ಕಾಂಗ್ರೆಸ್ಗೆ ಹೋಗಿದ್ದು, ಅವರು ಮುಂದಿನ ದಿನಗಳಲ್ಲಿ ಯಾವ ಗುಂಪಿನಲ್ಲಿ ಸೇರುತ್ತಾರೆಯೋ ನೋಡಬೇಕು. ಸಿದ್ದರಾಮಯ್ಯ ಗುಂಪೋ, ಡಿ.ಕೆ. ಶಿವಕುಮಾರ್ ಗುಂಪೋ ಅಥವಾ ಬೇರೆ ಗುಂಪನ್ನು ಸೇರುತ್ತಾರೆಯೋ ಗೊತ್ತಿಲ್ಲ. ಈಗ ಬಿಜೆಪಿ ಪಕ್ಷ ಚೆನ್ನಾಗಿ ನಡೆಸಿಕೊಳ್ಳಲ್ಲ ಅಂತಾ ಹೇಳುತ್ತಾರೆ. ಅವರು ಮನೆ ಅಳಿಯ ಏನು? ಎಂದು ಪ್ರಶ್ನಿಸುವ ಮೂಲಕ ವಾಗ್ದಾಳಿ ನಡೆಸಿದರು.
ಏನೋ ಕಾರಣ ಕೊಟ್ಟು ಹೊರಗಡೆ ಹೋಗಿದ್ದಾರೆ. ನನಗೂ ಜಗದೀಶ್ ಶೆಟ್ಟರ್ಗೆ ಒಂದೇ ಬಾರಿ ರಾಷ್ಟ್ರೀಯ ಅಧ್ಯಕ್ಷರು ಕರೆ ಮಾಡಿದ್ದಾರೆ. ನೀವಿಬ್ಬರೂ ಚುನಾವಣೆ ನಿವೃತ್ತಿ ಆಗಬೇಕು ಎಂದು ಹೇಳಿದ್ದರು. ಆಗ ಮುಖ್ಯಮಂತ್ರಿ ಆಗು, ವಿರೋಧ ಪಕ್ಷದ ನಾಯಕ ಆಗು, ಸ್ಪೀಕರ್ ಆಗು ಎಂದು ಬಹಳ ಹಿತವಾಯ್ತು. ನಿವೃತ್ತಿ ಆಗು ಅಂದಾಗ ಬಹಳ ನೋವಾಯಿತು, ಕಹಿಯಾಯಿತು ಅಲ್ವಾ ಎಂದರು.
ಹುಬ್ಬಳ್ಳಿಯಲ್ಲಿ ಕೆ.ಎಸ್.ಈಶ್ವರಪ್ಪ ಆಕ್ರೋಶ
ನಿಮ್ಮ ಸೊಸೆ ಸ್ಪರ್ಧೆ ಮಾಡುತ್ತೇನೆ ಅಂದರೆ ನಿಲ್ಲಿಸಿ, ಇಲ್ಲ ಬಿಡಿ. ಬಿಜೆಪಿ ಅಧ್ಯಕ್ಷನಾಗಿದ್ದಾಗ ನಾವು ನಾಲ್ಕ ಜನ ಶಾಸಕರಾಗಿದ್ದೆವು. ಇವತ್ತು ಎಲ್ಲರ ಹಿರಿತನ, ಹೊಸತನದಿಂದಲೇ ಪಾರ್ಟಿ ಈ ಮಟ್ಟಕ್ಕೆ ಬೆಳದು ಬಂದಿದೆ. ಆದ್ದರಿಂದ ಯುವಕರಿಗೆ ತ್ಯಾಗ ಮಾಡಬೇಕು ಎಂದರು. ನಮ್ಮ ಪಕ್ಷದಲ್ಲಿ ಮಹಿಳೆಯರಿಗೆ ಹೆಚ್ಚಿನ ಟಿಕೆಟ್ ಕೊಡಲು ತೀರ್ಮಾನ ಮಾಡಲಾಗಿತ್ತು ಎಂದರು. ನಂತರ ಮಾಧ್ಯಮದವರು ಹಾಗಾದರೆ ಹರ್ಷ ಅವರ ಅಕ್ಕನಿಗೆ ಟಿಕೆಟ್ ಕೊಡಬೇಕು ಅಂದಿದ್ದಕ್ಕೆ ಈಶ್ವರಪ್ಪ ಕೆಂಡಮಂಡಲವಾದರು.
ಅಲ್ಲದೇ ಮಾಧ್ಯಮದವರ ಮೇಲೂ ಮುಗಿಬಿದ್ದರು. ಚುನಾವಣೆ ಸಮಿತಿಯಲ್ಲಿ ಟಿಕೆಟ್ ತೀರ್ಮಾನ ಆಗತ್ತದೆ. ನನಗೆ ಟಿಕೆಟ್ ಕೊಟ್ಟಿದಾರೆ ಇಲ್ವೋ ಇದನ್ನ ನೀವು ಕೇಳಬಾರದು. ಚುನಾವಣೆ ಸಮಿತಿಯಲ್ಲಿ ಏನಾಯ್ತು ಎಂದು ಕೇಳುವುದಕ್ಕೆ ನೀವು ಯಾರು? ಇಡೀ ಕರ್ನಾಟಕ ರಾಜ್ಯದಲ್ಲಿ ನಮ್ಮ ನಾಯಕರು ಯಾರ ಮನೆಗೂ ಹೋಗಿರಲಿಲ್ಲ. ಈಗ ಶೆಟ್ಟರ್ ಮುಸ್ಲಿಂ ಟೋಪಿ ಹಾಕಿಕೊಳ್ಳುವುದಕ್ಕೆ ಹೋಗಿದ್ದಾರೆ ಎಂದರು.
ಇಲ್ಲಿ ಎಲ್ಲ ತಗೆದುಕೊಂಡು ಹೋಗಬೇಡಿ ಅಂತಾ ಹೇಳಿದ್ದೆವು. ಒಂದು ಸೀಟ್ಗಾಗಿ ಹೋಗುತ್ತೇನೆ ಅಂದರು. ಅದಕ್ಕೆ ಹೋಗಿ ಅಂತಾ ಹೇಳಿದೆವು ಎಂದರು.












Click it and Unblock the Notifications